ಸೋಂಕಿತರನ್ನು ಬೀದಿಯಲ್ಲಿ ಬಿಟ್ಟ ಬಿಬಿಎಂಪಿ: ದಿನೇಶ್ ಗುಂಡೂರಾವ್ ಪತ್ನಿ ತೀವ್ರ ಅಸಮಾಧಾನ
ಬೆಂಗಳೂರು, ಜುಲೈ 10: ಕೊರೊನಾ ವೈರಸ್ ನಿರ್ವಹಣೆ ವಿಷಯಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮತ್ತು ಸರ್ಕಾರದ ಸಚಿವರ ವಿರುದ್ಧ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Recommended Video
ಕೊವಿಡ್ ಸೋಂಕಿತರ ವಿಚಾರದಲ್ಲಿ ಹಾಗೂ ಅದನ್ನು ನಿರ್ವಹಿಸುವ ನಿಟ್ಟಿನಲ್ಲಿ ಬಿಬಿಎಂಪಿ ತೋರಿಸುತ್ತಿರುವ ನಿರ್ಲಕ್ಷ್ಯದ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.
ದಿನೇಶ್ ಗುಂಡೂರಾವ್ ಮನೆಯಲ್ಲಿ ನಾಲ್ವರು ಸಿಬ್ಬಂದಿಗೆ ಸೋಂಕು
''''ನೂರಾರು ಸೋಂಕಿತರನ್ನು ಬೀದಿಯಲ್ಲಿ ಸುತ್ತಾಡಲು ಬಿಟ್ಟು ಸೋಂಕಿ ಹರಡುವುದಕ್ಕೆ ಅವಕಾಶ ಮಾಡಿಕೊಟ್ಟಿರು ಬಿಬಿಎಂಪಿಗೆ ಧನ್ಯವಾದ'' ಎಂದು ಪ್ರಶ್ನಿಸಿರುವ ಗುಂಡೂರಾವ್ ಪತ್ನಿ, ತಮ್ಮ ಸಿಬ್ಬಂದಿಗೆ ಸೋಂಕು ತಗುಲಿದೆ ಬಳಿಕ ಏನಾಗಿದೆ ಎಂದು ವಿವರಿಸಿದ್ದಾರೆ. ಮುಂದೆ ಓದಿ...
ಬಿಬಿಎಂಪಿಯ ನಿರ್ಲಕ್ಷ್ಯತೆ ಎಲ್ಲದಕ್ಕೂ ಕಾರಣ
ಬೆಂಗಳೂರಿಗೆ ಕೊರೊನಾ ವೈರಸ್ ಸರಪಳಿಯಾಗಿ ಸುತ್ತಿಕೊಳ್ಳುತ್ತಿದೆ ಅಂದರೆ ಅದಕ್ಕೆ ಬಿಬಿಎಂಪಿ ನೇರ ಕಾರಣ ಎಂದು ಗುಂಡೂರಾವ್ ಪತ್ನಿ ಆರೋಪಿಸಿದ್ದಾರೆ. ''ನಮ್ಮ ಸಿಬ್ಬಂದಿಗೆ ಸೋಂಕಿನ ಲಕ್ಷಣಗಳ ಕಾಣಿಸಿಕೊಂಡಿತ್ತು. ಜುಲೈ 30ರಂದು ಪರೀಕ್ಷೆಗೆ ಒಳಪಡಿಸಿದೆವು. ಜುಲೈ 3 ರಂದು ಪಾಸಿಟಿವ್ ಎಂದು ಫಲಿತಾಂಶ ಬಂದಿತು. ಬಿಬಿಎಂಪಿ ಕೂಡಲೇ ಅವರನ್ನು ಸಂಪರ್ಕಿಸಿ ಕೊವಿಡ್ ಕೇಂದ್ರಕ್ಕೆ ಸ್ಥಳಾಂತರಿಸಬೇಕಿತ್ತು. ಆದರೆ, ಈ ವಿಚಾರದಲ್ಲಿ ಬಿಬಿಎಂಪಿ ಯಾವುದೇ ಕ್ರಮ ಜರುಗಿಸಿಲ್ಲ. ನಾವು ಖುದ್ದು ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದೆವು'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ಸಂಪರ್ಕದ ಬಗ್ಗೆ ಸಹ ಮಾಹಿತಿ ಪಡೆದಿಲ್ಲ
''ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತರ ಕುರಿತು ಮಾಹಿತಿ ಪಡೆದು, ಅವರನ್ನು ಕ್ವಾರಂಟೈನ್ ಮಾಡುವ ಕೆಲಸಕ್ಕಾದರೂ ಬಿಬಿಎಂಪಿ ಮುಂದಾಗಬೇಕಿತ್ತು. ಆದರೆ, ಈವರೆಗೂ ಯಾವ ಅಧಿಕಾರಿಗಳು ಸಹ ಆ ಕುಟುಂಬದವರನ್ನಾಗಲಿ ಅಥವಾ ಸಿಬ್ಬಂದಿ ಕಡೆಯವರನ್ನಾಗಲಿ ಸಂಪರ್ಕಿಸಿಲ್ಲ. ಸೋಂಕಿತ ವ್ಯಕ್ತಿಯಿಂದ ಎಷ್ಟು ಜನಕ್ಕೆ ವೈರಸ್ ಹರಡಬಹುದು ಎಂಬುದರ ಬಗ್ಗೆ ಯೋಚನೆ ಮಾಡಿಲ್ಲ. ದಿನೇಶ್ ಗುಂಡೂರಾವ್ ಕುಟುಂಬದವರು ಸಹ ಕ್ವಾರಂಟೈನ್ ಆಗಬೇಕು. ಆದರೆ, ಈ ಬಗ್ಗೆ ಬಿಬಿಎಂಪಿ ಯಾವುದೇ ಕ್ರಮ ಜರುಗಿಸಿಲ್ಲ'' ಎಂದು ಕಿಡಿಕಾರಿದ್ದಾರೆ.
ಖಾಸಗಿಯಾಗಿ ಪರೀಕ್ಷೆ ಮಾಡಿದೇವು
''ಬಿಬಿಎಂಪಿ ಈ ಬಗ್ಗೆ ಗಮನ ಕೊಡಲಿಲ್ಲ. ಅಂತಿಮವಾಗಿ ನಾವೇ ಖುದ್ದು ಕಾಳಜಿ ವಹಿಸಿ ಐಸಿಎಂಆರ್ ಅನುಮೋದಿತ ಖಾಸಗಿ ಪ್ರಯೋಗಾಲಯದಲ್ಲಿ ಎಲ್ಲ ಕುಟುಂಬದ ಸದಸ್ಯರು, ಸಿಬ್ಬಂದಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ದುರದೃಷ್ಟವಶಾತ್ ನಾಲ್ಕು ಸಿಬ್ಬಂದಿಗೆ ಸೋಂಕು ತಗುಲಿದೆ. ಆದರೂ ಬಿಬಿಎಂಪಿ ಅವರು ಯಾವುದೇ ಕರೆ ಮಾಡಿಲ್ಲ, ಸಂಪರ್ಕಿಸಿಲ್ಲ. ನಂತರ ನಾವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದೆವು. ಇಲ್ಲಿಯವರೆಗೂ ಕುಟುಂಬದವರನ್ನು ಕ್ವಾರಂಟೈನ್ ಮಾಡಿಲ್ಲ. ಪ್ರಾಥಮಿಕ ಸಂಪರ್ಕಿತರ ಬಗ್ಗೆ ಮಾಹಿತಿ ಪಡೆದಿಲ್ಲ'' ಎಂದು ನಿರ್ವಹಣೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಸೋಂಕಿತರನ್ನು ಬೀದಿಗೆ ಬಿಟ್ಟ ಬಿಬಿಎಂಪಿ
''ಸಮಾಜಿಕ ಕಳಕಳಿಯಿಂದ ನಾವೆಲ್ಲವೂ ಕ್ವಾರಂಟೈನ್ ಆಗಿದ್ದೇವೆ. ಆದರೆ, ಉಳಿದ ಎಷ್ಟು ಜನರಿಗೆ ಇದು ಸಾಧ್ಯವಾಗಿದೆ? ಮಾಜಿ ಸಚಿವ, ಶಾಸಕರಿಗೆ ಇಂತಹ ಸ್ಥಿತಿಯಾದರೆ ಇನ್ನು ಸಾರ್ವಜನಿಕರ ಜೊತೆ ಬಿಬಿಎಂಪಿ ಹೇಗೆ ವರ್ತಿಸುತ್ತಿದೆ ಎಂಬುದು ನೆನೆದರೆ ಆತಂಕ ಹುಟ್ಟಿಸುತ್ತಿದೆ. ಸೋಂಕಿತರ ಬಗ್ಗೆ ಕಾಳಜಿ ವಹಿಸದೆ ನೂರಾರು ಸೋಂಕಿತರನ್ನು ಬೀದಿಗೆ ಬಿಟ್ಟು, ಮತ್ತಷ್ಟು ಸೋಂಕು ಹರಡಿಸುತ್ತಿರುವ ಬಿಬಿಎಂಪಿಗೆ ನನ್ನ ಧನ್ಯವಾದಗಳು'' ಎಂದು ಟಬು ರಾವ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.