ಸಚಿವ ಡಾ. ಸುಧಾಕರ್ ಮೇಲೆ ಗಂಭೀರ ಆರೋಪ ಮಾಡಿದ ದಿನೇಶ್ ಗುಂಡೂರಾವ್!
ಬೆಂಗಳೂರು, ಫೆ. 23: ಶಿವಮೊಗ್ಗದ ಬಳಿಕ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿರುವ ಜಿಲೆಟಿನ್ ಸ್ಪೋಟದ ಕುರಿತು ಕೆಪಿಸಿಸಿ ಮಾಜಿನ ಆಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಹುಣಸೋಡು ಮಾದರಿಯಲ್ಲೇ ಚಿಕ್ಕಬಳ್ಳಾಪುರದಲ್ಲಿ ಸ್ಫೋಟ ಸಂಭವಿಸಿದೆ. ಆ ಕ್ವಾರಿ ನಡೆಸುತ್ತಿರೋದು ಮಂತ್ರಿಗಳ ಸಂಬಂಧಿಕರು ಎಂಬ ಮಾಹಿತಿ ಇದೆ. ಇದರ ಹಿಂದೆ ರಾಜಕಾರಣಿಗಳ ಪಾತ್ರದ ಬಗ್ಗೆ ತನಿಖೆ ಆಗಬೇಕು. ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಕ್ವಾರಿಗಳಿಂದ ಹೇಗೆ ಹಪ್ತಾ ವಸೂಲಿ ಮಾಡುತ್ತಿದ್ದಾರೆ ಅಂತ ಅಲ್ಲಿ ಎಲ್ಲ ಜನರಿಗೂ ಗೊತ್ತಿದೆ ಎಂದು ಪರೋಕ್ಷವಾಗಿ ಆರೋಗ್ಯ ಸಚಿವ ಡಾ. ಸುಧಾಕರ್ ಅವರ ಮೇಲೆ ವಾಗ್ದಾಳಿ ಮಾಡಿದ್ದಾರೆ.
ಈ ಸರ್ಕಾರ ಬರೀ ಲೂಟಿ ಮಾಡುವುದರಲ್ಲಿ ಮಗ್ನವಾಗಿದೆ. ಆರು ಜನ ಅಮಾಯಕರು ಸಾವನ್ನಪ್ಪಿದ್ದಾರೆ. ಜಿಲೆಟಿನ್ ಇಷ್ಟೊಂದು ಹೇಗೆ ಸಂಗ್ರಹ ಮಾಡುತ್ತಿದ್ದಾರೆ? ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ದುರ್ಘಟನೆ ಬಳಿಕವೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ದೊಡ್ಡ ಭ್ರಷ್ಟಾಚಾರ ಇರೋದು ಅದಕ್ಕೆ ಕಾರಣ. ಸರ್ಕಾರ ಸತ್ತುಬಿದ್ದಿದೆ. ಲೂಟಿ ಮತ್ತು ದಂಧೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಜಿಲೆಟಿನ್ ಇಷ್ಟೊಂದು ಸುಲಭವಾಗಿ ಹೇಗೆ ಸಿಗುತ್ತಿದೆ? ಎಂದು ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.
Recommended Video
ಜಿಲ್ಲೆಯ ಕ್ವಾರಿಗಳ ಹಿಂದೆ ಸ್ಥಳೀಯ ಶಾಸಕರು ಇದ್ದಾರೆ. ಅವರು ಪ್ರತಿ ತಿಂಗಳು ಹಪ್ತಾ ವಸೂಲಿ ಮಾಡುತ್ತಿದ್ದಾರೆ. ಅದನ್ನು ಜನರೇ ಮಾತನಾಡುತ್ತಿದ್ದಾರೆ. ಈ ಘಟನೆ ನಡೆದಿರುವ ಕ್ವಾರಿ ಕೂಡ ಸಚಿವರ ಸಂಬಂಧಿಕರದ್ದು. ಬೆಳಗಿನ ಜಾವ ಹೋಗಿ ಕೆಲಸ ಮಾಡಿ ಅಂತ ನಾವು ಹೇಳಿಲ್ಲ ಎಂಬ ಸಿಎಂ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ದಿನೇಶ್ ಗುಂಡೂರಾವ್ ಅವರು, ಇದೊಂದು ಅತ್ಯಂತ ಖಂಡನಿಯವಾದ ಹೇಳಿಕೆ. ಕೆಲಸ ಮಾಡಕ್ಕೆ ಆಗಲ್ಲ ಅಂದ್ರೆ ಬಿಟ್ಟು ಹೋಗಿ, ಸಮರ್ಥರು ಬಂದು ಕೆಲಸ ಮಾಡ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.