ಕಂಗೊಳಿಸುತ್ತಿದೆ ವಿಧಾನಸೌಧ: ವಜ್ರಮಹೋತ್ಸವದ ಕಾರ್ಯಕ್ರಮ ಪಟ್ಟಿ
ಬೆಂಗಳೂರು, ಅಕ್ಟೋಬರ್ 24: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧಕ್ಕೀಗ ವಜ್ರಮಹೋತ್ಸವದ ಸಂಭ್ರಮ. ಇದೇ ಅಕ್ಟೋಬರ್ 25 ರಂದು ಆರು ದಶಕ ಪೂರೈಸಲಿರುವ ವಿಧಾನಸೌಧ ಬಣ್ಣ ಬಣ್ಣದ ದೀಪಗಳಿಂದ ಅಲಂಕೃತಗೊಂಡು ಝಗಮಗಿಸುತ್ತಿದೆ. ಉದ್ಯಾನ ನಗರಿಯ ಜನರಿಗೆ ವಜ್ರಮಹೋತ್ಸವದ ಸಂದರ್ಭದಲ್ಲಿ ವಿಧಾನಸೌಧವನ್ನು ದೀಪದ ಬೆಳಕಿನಲ್ಲಿ ನೋಡುವ ಸೌಭಾಗ್ಯ ಒದಗಿಬರಲಿದೆ.
ಗ್ಯಾಲರಿ:ವಿಧಾನಸೌಧ ವಜ್ರಮಹೋತ್ಸವಕ್ಕೆ ಭರ್ಜರಿ ತಯಾರಿ
1951ರಲ್ಲಿ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ವಿಧಾನಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಸುಮಾರು 1.75 ಕೋಟಿ ರೂಪಾಯಿ ವೆಚ್ಚದಲ್ಲಿ ವಿಧಾನಸೌಧ ನಿರ್ಮಾಣಗೊಂಡಿತ್ತು.
ಕೆಂಗಲ್ ಹನುಮಂತಯ್ಯ ಅವರ ಕೂಸು, ವಿಧಾನಸೌಧಕ್ಕೀಗ ಅರುವತ್ತು !
1956ರಲ್ಲಿ ಕಟ್ಟಡ ಪೂರ್ಣಗೊಂಡಿತ್ತಾದರೂ ಯಾವ ದಿನಾಂಕದಂದು ಎಂಬ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ರಾಜ್ಯದ ಶಕ್ತಿಕೇಂದ್ರವೇ ಆದ ವಿಧಾನ ಸೌಧ ನಿರ್ಮಾಣವಾಗಿ ಆರು ದಶಕ ಸಂದ ಸವಿನೆನಪಿಗೆ ಆಚರಣೆಗೊಳ್ಳುತ್ತಿರುವ ವಜ್ರಮಹೋತ್ಸವಕ್ಕಾಗಿ ರಾಷ್ಟ್ರಪತಿಯಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ರಾಮನಾಥ್ ಕೋವಿಂದ್ ಅವರು ಕರ್ನಾಟಕಕ್ಕೆ ಆಗಮಿಸುತ್ತಿರುವುದು ವಿಶೇಷ. ವಜ್ರಮಹೋತ್ಸವದಂದು ವಿಧಾನ ಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಸಂಕ್ಷಿಪ್ತ ವಿವರ ಇಲ್ಲಿದೆ.
ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ
ಅ.25 ರಂದು ಬೆಳಿಗ್ಗೆ 11 ಗಂಟೆಗೆ ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣ ಮಾಡುವ ಮೂಲಕ ಸಮಾರಂಭ ಉದ್ಘಾಟಿಸಲಿದ್ದಾರೆ. ನಂತರ ರಾಷ್ಟ್ರಪತಿ ವಿಧಾನ ಪರಿಷತ್ ಸಭಾಂಗಣ ವೀಕ್ಷಿಸಲಿದ್ದು, ವಿಧಾನಸೌಧ ಹಾಗೂ ವಿಕಾಸಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆ ಎದುರು ಉಭಯ ಸದನಗಳ ಶಾಸಕರು, ರಾಷ್ಟ್ರಪತಿ ಜೊತೆ ಗ್ರೂಪ್ ಫೋಟೊ ತೆಗೆಸಿಕೊಳ್ಳಲಿದ್ದಾರೆ.
ಪ್ರಥಮ ಪ್ರಜೆಯೊಂದಿಗೆ ಭೋಜನ
ಫೋಟೋ ಶೂಟ್ ನಂತರ ಬ್ಯಾಂಕ್ವೆಟ್ ಹಾಲ್ನಲ್ಲಿ ಭೋಜನ ಕೂಟ ಏರ್ಪಡಿಸಲಾಗಿದೆ. ವಿಧಾನಸೌಧ ಕುರಿತಂತೆ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಸೀತಾರಾಂ ನಿರ್ದೇಶಿಸಿರುವ ಸಾಕ್ಷ್ಯ ಚಿತ್ರ ಪ್ರದರ್ಶನ ಹಾಗೂ ಮಾಸ್ಟರ್ ಕಿಶನ್ ನಿರ್ದೇಶನದ '3 ಡಿ ವರ್ಚುಯಲ್ ರಿಯಾಲಿಟಿ' ವಿಡಿಯೊ ಪ್ರದರ್ಶನ ಮಧ್ಯಾಹ್ನ 3 ಗಂಟೆಗೆ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದೆ.
ಶಕ್ತಿಸೌಧ ನಿರ್ಮಾತೃರಿಗೆ ಗೌರವಾರ್ಪಣೆ
ಸಂಜೆ 5 ರಿಂದ 6 ಗಂಟೆವರೆಗೆ ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿಧಾನಸೌಧ ನಿರ್ಮಾಣಕ್ಕೆ ಪ್ರಧಾನಿ ದಿ. ಜವಾಹರಲಾಲ್ ನೆಹರು ಅವರಿಂದ ಅಡಿಗಲ್ಲು ಹಾಕಿಸಿದ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ ರೆಡ್ಡಿ, ವಿಧಾನಸೌಧ ಕಟ್ಟಡ ನಿರ್ಮಾಣ ಮಾಡಿದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರಿಗೆ 6ರಿಂದ 6.30 ರವರೆಗೆ ಗೌರವಾರ್ಪಣೆ ನಡೆಯಲಿದ್ದು, ಈ ನಾಯಕರ ಕುಟುಂಬದವರು ಗೌರವ ಸ್ವೀಕರಿಸಲಿದ್ದಾರೆ.
ರಸಮಂಜರಿ ಕಾರ್ಯಕ್ರಮ
ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ತಂಡದಿಂದ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ 'ರಸಮಂಜರಿ' ಕಾರ್ಯಕ್ರಮ ನಡೆಯಲಿದೆ. ಜತೆಗೆ ವಿಧಾನಸೌಧ ಕಟ್ಟಡದ ಮೇಲೆ ತ್ರಿಡಿ ಮ್ಯಾಪಿಂಗ್ ಮೂಲಕ ಸರ್ಕಾರದ ಜನಪರ ಯೋಜನೆಗಳ ಚಿತ್ರ ಪ್ರದರ್ಶನ ನಡೆಯಲಿದೆ.