ಹೊಸವರ್ಷಕ್ಕೆ ಕನ್ನಡದ ಮೊದಲ ಭಕ್ತಿ ಚಾನೆಲ್ ಐಸಿರಿ
ಐಸಿರಿ, ಇದು ಸಂಸ್ಕೃತಿಯ ರಾಯಭಾರಿಯಾಗಿ, ಆಧುನಿಕ ವೇಗದ ಬದುಕಿನ ಸಂಜೀವನಿಯಾಗಿ ಸಾಂತ್ವನ ನೀಡುವ ಸಂತನಾಗಿ ಐಸಿರಿ ಭಕ್ತಿ ವಾಹಿನಿ ಕರ್ನಾಟಕದ ಮನೆ-ಮನಗಳಿಗೆ ಈ ಮೂಲಕ ಅಡಿ ಇಡಲಿದೆ.
ಬೆಂಗಳೂರು, ಡಿಸೆಂಬರ್ 28 : ಕನ್ನಡದ ಮೊತ್ತ ಮೊದಲ ಭಕ್ತಿ ವಾಹಿನಿ ಐಸಿರಿ ಭಕ್ತಿ ದಿನದ 24 ಗಂಟೆಯೂ ಜನರಿಗೆ ಭಕ್ತಿಯನ್ನು ಪಸರಿಸಲು ಸಿದ್ಧತೆ ನಡೆಸಿದ್ದು, ಹೊಸವರ್ಷದಲ್ಲಿ ಮನೆ, ಮನಗಳನ್ನು ತುಂಬಿಸಲಿದೆ. ಅದಕ್ಕೆ ಪೂರ್ವಭಾವಿಯಾಗಿ ಮಂಗಳವಾರ ವಾಹಿನಿಯ ಲೋಗೊ ಬಿಡುಗಡೆಗೊಂಡಿತು.
ವಿವಿಧ ಸುದ್ದಿ ಚಾನೆಲ್ಗಳು ಮತ್ತು ಮನರಂಜನಾ ಚಾನೆಲ್ಗಳ ಭರಾಟೆಯಲ್ಲಿ ಜನರ ಒತ್ತಡ ಮುಕ್ತ ಜೀವನಕ್ಕೆ, ಬದುಕಿಗೆ ಮುದನೀಡುವ ಭಕ್ತಿ ಚಾನೆಲ್ನ ಅಗತ್ಯ ಎದುರಾಗಿತ್ತು. ಕನ್ನಡದ್ದೇ ಆದ ಭಕ್ತಿ ಚಾನೆಲ್ನ ಕೊರತೆ ಇತ್ತು. ಇದೀಗ ಐಸಿರಿ ಭಕ್ತಿ ಈ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನವಾಗಿದೆ.
ದಿನ ಪೂರ್ತಿ ಅಧ್ಯಾತ್ಮ, ಸಂಸ್ಕೃತಿ, ಸಂಗೀತ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರೋಗ್ಯಪೂರ್ಣ ಮನರಂಜನೆಯನ್ನು ನೀಡಲಿದೆ. ಕನ್ನಡದ ಹೊಸ ಭಕ್ತಿ ಚಾನೆಲ್ ಹೊಸ ವರ್ಷದ ಶುಭಾರಂಭಕ್ಕೆ ನಾಂದಿ ಹಾಡಲಿದೆ.
ಮನಃಶಾಂತಿಗಾಗಿ ವಿದೇಶಿಯರು ಭಾರತದ ಸಂಸ್ಕೃತಿಯತ್ತ ವಾಲುತ್ತಿರುವ ಕಾಲವಿದು. ಆದರೆ, ನಮ್ಮ ನೆಲದ ಅಧ್ಯಾತ್ಮ ಶಕ್ತಿಯ ಪರಿಚಯಿಸುವ ಕಾಳಜಿಯೊಂದಿಗೆ ಕನ್ನಡದ್ದೇ ಆದ, ಕನ್ನಡಿಗರಿಂದಲೇ ಐಸಿರಿ ಭಕ್ತಿ ವಾಹಿನಿ ಆರಂಭಗೊಳ್ಳುತ್ತಿದೆ.
ಬೆಂಗಳೂರಿನ ಬಸವನಗುಡಿ ಪ್ರದೇಶದ ಗಾಂಧಿ ಬಜಾರ್ ಪಶ್ಚಿಮ ಆಂಜನೇಯ ರಸ್ತೆಯಲ್ಲಿ ಸುಸಜ್ಜಿತ, ಅತ್ಯಾಧುನಿಕ ವಾಹಿನಿಯ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ 10.30ಕ್ಕೆ ಹಿರಿಯ ಆಧ್ಯಾತ್ಮಿಕ ಚಿಂತಕರಾದ ಶ್ರೀಪಾವಗಡ ಪ್ರಕಾಶ್ ರಾವ್ ಮತ್ತು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾಜಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಐಸಿರಿ, ಇದು ಸಂಸ್ಕೃತಿಯ ರಾಯಭಾರಿಯಾಗಿ, ಆಧುನಿಕ ವೇಗದ ಬದುಕಿನ ಸಂಜೀವನಿಯಾಗಿ ಸಾಂತ್ವನ ನೀಡುವ ಸಂತನಾಗಿ ಐಸಿರಿ ಭಕ್ತಿ ವಾಹಿನಿ ಕರ್ನಾಟಕದ ಮನೆ-ಮನಗಳಿಗೆ ಈ ಮೂಲಕ ಅಡಿ ಇಡಲಿದೆ. ನಾಡಿನ ಪ್ರಮುಖ ಅಧ್ಮಾತ್ಯ ಚಿಂತಕರ ಮೂಲಕ ಜನರ ಅಧ್ಯಾತ್ಮ ಜ್ಞಾನ ಭಂಡಾರ ತುಂಬುವ ಪ್ರಯತ್ನ ನಡೆಯಲಿದೆ.