2018ರ ವಿಧಾನಸಭೆ ಚುನಾವಣೆಗೆ ಗೌಡರ ಕುಟುಂಬದ ನಾಲ್ವರು ಕಣಕ್ಕೆ
ಬೆಂಗಳೂರು, ಸೆಪ್ಟೆಂಬರ್ 15: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಜೆಡಿಎಸ್, ಈಗಾಗಲೇ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿನ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿದೆ.
ಉಳಿದ ಪಕ್ಷಗಳು ಇನ್ನೂ ತಮ್ಮ ಅಭ್ಯರ್ಥಿಗಳನ್ನು ಕುರಿತು ನಿಖರವಾದ ಆಲೋಚನೆ ಮಾಡಿದರ ಈ ಹೊತ್ತಿನಲ್ಲಿ ಜೆಡಿಎಸ್ ಈಗಾಗಲೇ ತನ್ನ ಪಟ್ಟಿಯನ್ನು ಸಿದ್ಧಪಡಿಸಿದೆ.
ಆದರೆ, ಅದಕ್ಕಿಂತ ಮುಖ್ಯವಾದ ವಿಚಾರವೇನೆಂದರೆ, ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಧುರೀಣ, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ನಾಲ್ವರು ಕಣಕ್ಕಿಳಿಲಿದ್ದಾರೆ ಎಂಬುದು.
ಹೌದು. ವಿಶೇಷವಿರುವುದು ಇಲ್ಲೇ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಅವರ ಪತ್ನಿ ಭವಾನಿ ಜತೆಗೆ ಮಾಜಿ ಶಾಸಕಿ ಹಾಗೂ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರ ಸ್ವಾಮಿ ಕೂಡಾ ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆಂದು ಮೂಲಗಳು ತಿಳಿಸಿವೆ.
ವಿಧಾನಸಭೆ ಚುನಾವಣೆ: ಬೆಂಗಳೂರಲ್ಲಿ ಕಣಕ್ಕಿಳಿಯಲಿರುವ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
ಆದರೆ, ಈ ಹಿಂದೆ ದೇವೇಗೌಡರು ಸ್ಪಷ್ಟಪಡಿಸಿದಂತೆ, ಪ್ರಜ್ವಲ್ ರೇವಣ್ಣ ಅವರನ್ನು ಈ ಬಾರಿ ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸದೇ ಇರುವುದು ಸ್ಪಷ್ವವಾಗಿದೆ.
ಹಾಗಾದರೆ, ಗೌಡರ ಕುಟುಂಬದ ಸದಸ್ಯರು ಯಾವ ಕ್ಷೇತ್ರದಿಂದ ಎಲ್ಲೆಲ್ಲಿ ಸ್ಪರ್ಧಿಸಲಿದ್ದಾರೆ ಹಾಗೂ ಆ ಪಕ್ಷದ ಪ್ರಮುಖ ನಾಯಕರು ಎಲ್ಲೆಂಲ್ಲಿಂದ ಸ್ಪರ್ಧಿಸಲಿದ್ದಾರೆಂಬ ಕುತೂಹಲಕರ ಮಾಹಿತಿ ಇಲ್ಲಿದೆ.
ರಾಮನಗರ, ಹಿಪ್ಪರಗಿಯಿಂದ ಕುಮಾರಣ್ಣ ಕಣಕ್ಕೆ
ಮಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಈ ಬಾರಿ ಎರಡು ಕ್ಷೇತ್ರಗಳಿಂದ ಚುನಾವಣಾ ಕಣಕ್ಕಿಳಿಯಲಿದ್ದಾರೆ. ರಾಮನಗರ ಹಾಗೂ ದೇವರ ಹಿಪ್ಪರಗಿ (ವಿಜಯಪುರ ಜಿಲ್ಲೆ) ವಿಧಾನಸಭಾ ಕ್ಷೇತ್ರಗಳಿಂದ ಅವರು ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಯೋಗೇಶ್ವರ್ ವಿರುದ್ಧ ಮತ್ತೆ ಅನಿತಾ ಕಣಕ್ಕೆ
ಅನಿತಾ ಕುಮಾರ ಸ್ವಾಮಿ ಅವರು, ಚನ್ನಪಟ್ಟಣ ತಾಲೂಕಿನಿಂದ ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿ ಅವರು ಇದೇ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಆದರೆ, ಅವರು ಗೆದ್ದಿರಲಿಲ್ಲ. ಮಾಜಿ ಸಚಿವ, ಹಾಲಿ ಕಾಂಗ್ರೆಸ್ ನಾಯಕ ಸಿ.ಪಿ. ಯೋಗೇಶ್ವರ್ ಅವರು ಇಲ್ಲಿ ಗೆಲವು ಸಾಧಿಸಿದ್ದರು.
ರೇವಣ್ಣ ಅವರ ಆಯ್ಕೆ ಹೊಳೆನರಸೀಪುರ
ಎಚ್.ಡಿ. ರೇವಣ್ಣ ಅವರು ತಮ್ಮ ಸ್ವಕ್ಷೇತ್ರವಾದ ಹೊಳೆನರಸೀಪುರದಿಂದಲೇ ಕಣಕ್ಕಿಳಿಯಲಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಈ ಕ್ಷೇತ್ರ ಜೆಡಿಎಸ್ ನ ಭದ್ರಕೋಟೆ ಆಗಿರುವುದರಿಂದ ಈ ಬಾರಿ ಅವರು ಅಲ್ಲಿಂದಲೇ ಸ್ಪರ್ಧಿಸುವುದು ನಿಶ್ಚಿತ.
ಬೇಲೂರಿನಿಂದ ಭವಾನಿ ಕಣಕ್ಕೆ
ಇನ್ನು, ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಲು ಸಜ್ಜಾಗಿದ್ದು, ಅವರು ಬೇಲೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿದೆ ಎನ್ನಲಾಗಿದೆ. ಕಳೆದ ವರ್ಷ ಹಾಸನ ಜಿಲ್ಲಾ ಪಂಚಾಯ್ತಿಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಭವಾನಿ ರೇವಣ್ಣ ಅದೇ ವರ್ಚಸ್ಸಿನ ಮೇಲೆ ಈಗ ವಿಧಾನಸಭೆ ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ.
ಕಟ್ಟಾ ಬೆಂಬಲಿಗರ ಪಟ್ಟಿ ಇದು
ಇನ್ನುಳಿದಂತೆ, ಜೆಡಿಎಸ್ ನ ಕಟ್ಟಾ ಬೆಂಬಲಿಗರಾದ ಜಿ.ಎಸ್. ಪುಟ್ಟರಾಜು ಅವರು ಮೇಲುಕೋಟೆಯಿಂದ, ಪ್ರೊ. ಕೆ.ಎಸ್. ರಂಗಪ್ಪ ಅವರು ಚಾಮರಾಜ ನಗರ, ಎಚ್. ವಿಶ್ವನಾಥ್ ಹುಣಸೂರು, ಶಶಿಭೂಷಣ್ ಹೆಗ್ಡೆ ಶಿರಸಿ, ಎ.ಟಿ. ರಂಗಸ್ವಾಮಿ ಅಕಲಗೂಡು, ಲೋಕೇಶ್ವರ ಅವರು ತಿಪಟೂರಿನಿಂದ ಕಣಕ್ಕಿಳಿಯಲಿದ್ದಾರೆ.