ಕಡಲತೀರದಲ್ಲಿ ಕಸ ಹೆಕ್ಕಿದ ಮೋದಿಗೆ ದೇವೇಗೌಡರ ಬಹುಪರಾಕ್
ಬೆಂಗಳೂರು, ಅಕ್ಟೋಬರ್ 14: ತಮಿಳುನಾಡಿನ ಮಲ್ಲಪುರಂ ಬೀಚ್ನಲ್ಲಿ ಕಸ ಹೆಕ್ಕಿದ ಮೋದಿ ಕಾರ್ಯವನ್ನು ಜೆಡಿಎಸ್ ವರಿಷ್ಠ ದೇವೇಗೌಡ ಶ್ಲಾಘಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ದೇವೇಗೌಡ ಅವರು, 'ತಮಿಳುನಾಡಿನ ಮಲ್ಲಪುರಂ ಬೀಚ್ನಲ್ಲಿ ಬರಿಗಾಲಿನಲ್ಲಿ ನಡೆದಾಡಿ ಪ್ರಧಾನಿ ಮೋದಿ ಅವರು ಕಸ ಹೆಕ್ಕುತ್ತಿರುವ ವಿಡಿಯೋ ನೋಡಿದೆ. ಇದು ಪ್ಲಾಸ್ಟಿಕ್ ಮುಕ್ತ ಭಾರತದ ನಿಟ್ಟಿನಲ್ಲಿ ಇದೊಂದು ಸ್ಪೂರ್ತಿದಾಯಕ ಆರಂಭ' ಎಂದಿದ್ದಾರೆ.
ಕೇಂದ್ರದಿಂದ ಬಂದ ಬರ ಪರಿಹಾರ: ಅನುಮಾನಕ್ಕೆ ಎಡೆಯಾದ ದೇವೇಗೌಡ್ರ ಹೇಳಿಕೆ
ನರೇಂದ್ರ ಮೋದಿ ಅವರು ಶುಕ್ರವಾರದಂದು ಮಲ್ಲಪುರಂ ಬೀಚ್ನಲ್ಲಿ ಸುಮಾರು 30 ನಿಮಿಷಗಳ ಕಾಲ ಬರಿಗಾಲಿನಲ್ಲಿ ಓಡಾಡುತ್ತಾ ಪ್ಲಾಸ್ಟಿಕ್ ಹೆಕ್ಕಿದ್ದರು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ಲಾಸ್ಟಿಕ್ ತ್ಯಾಜ್ಯವನ್ನು ಆಯ್ದ ಮೋದಿ ಅದನ್ನು ಬೀಚ್ ಬದಿಯ ಹೊಟೆಲ್ ಸಿಬ್ಬಂದಿ ಜಯರಾಜ್ಗೆ ಒಪ್ಪಿಸಿದ್ದರು.
ದೇವೇಗೌಡ ಅವರು ಇತ್ತೀಚೆಗೆ ಗುಜರಾತ್ ನರ್ಮದಾ ಅಣೆಕಟ್ಟೆ ಬಳಿಯಿರುವ ಸರ್ದಾರ್ ವಲ್ಲಭಬಾಯ್ ಪಟೇಲ್ ಏಕತಾ ಮೂರ್ತಿಗೆ ಭೇಟಿ ನೀಡಿದ್ದರು. ದೇವೇಗೌಡ ಅವರು ಏಕತಾ ಮೂರ್ತಿಗೆ ಭೇಟಿ ನೀಡಿದ್ದ ಚಿತ್ರಗಳನ್ನು ಮೋದಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದರು. ಈಗ ದೇವೇಗೌಡ ಅವರು ಮೋದಿ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.