ವರ್ಷಗಳ ನಂತರ ಮತ್ತೆ 'ನೈಸ್' ವಿರುದ್ಧ ಗುಟುರು ಹಾಕಿದ ದೇವೇಗೌಡ
ಬೆಂಗಳೂರು, ನವೆಂಬರ್ 23: ವರ್ಷಗಳ ನಂತರ ದೇವೇಗೌಡ ಅವರು ಮತ್ತೆ ನೈಸ್ ವಿರುದ್ಧ ಇಂದು ಗಡುಗಿದ್ದಾರೆ. ಅರ್ಧಕ್ಕೆ ಬಿಟ್ಟಿದ್ದ ಹೋರಾಟವನ್ನು ಮುಂದುವರೆಸುವ ಸೂಚನೆಯನ್ನು ತೋರಿಸಿದ್ದಾರೆ.
ನೈಸ್ ರಸ್ತೆ ಬಳಿಯ ಹೊಸಕೆರೆಹಳ್ಳಿಗೆ ಭೇಟಿ ನೀಡಿದ್ದ ದೇವೇಗೌಡ ಅವರು, ಸ್ಥಳೀಯ ನಿವಾಸಿಗಳ ಜೊತೆ ಮಾತುಕತೆ ನಡೆಸಿದರು. ಅವರ ಮಾತುಗಳು ಬಹುತೇಕ ನೈಸ್ ರಸ್ತೆಗೆ ಸಂಬಂಧಿಸಿದುವೇ ಆಗಿದ್ದವು.
ನೈಸ್ ರಸ್ತೆಯಿಂದ ಅನ್ಯಾಯವಾದ ಜನ ನನ್ನ ಬಳಿ ಬಂದು ನೋವು ತೋಡಿಕೊಂಡಿದ್ದಾರೆ. ಹಾಗಾಗಿ ಪರಿಸ್ಥಿತಿ ನೋಡಲು ಇಂದು ಇಲ್ಲಿಗೆ ಬಂದಿದ್ದೇನೆ ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.
ದೇವೇಗೌಡ ಅವರ ಬಳಿ ಸ್ಥಳೀಯರು, ಲೇಔಟ್ನಲ್ಲಿ ಆಗುತ್ತಿರುವ ಕುಡಿಯುವ ನೀರಿನ ಸಮಸ್ಯೆ, ಅಸಮರ್ಪಕ ರಸ್ತೆ ಹಾಗು ಭೂಕಬಳಿಕೆ ಆರೋಪ ಎದುರಿಸುತ್ತಿರುವ ನೈಸ್ ಮಾಲೀಕರು ಕಿರಿಕಿರಿ ನೀಡುತ್ತಿದ್ದಾರೆ ಎಂದು ದೂರುಗಳು ನೀಡಿದರು.
'ಭೂಮಿ ಕೊಡಲಾಗದು ಎಂದಿದ್ದರು ಯಡಿಯೂರಪ್ಪ'
ಸಮಸ್ಯೆಗಳನ್ನು ಆಲಿಸಿದ ದೇವೇಗೌಡ ಅವರು, ನೈಸ್ ಅಕ್ರಮದ ಬಗ್ಗೆ ಹಿಂದೆಯೇ ಹಲವಾರು ಬಾರಿ ಮಾತನಾಡಿದ್ದೇನೆ. ಭೂಮಿ ಕಳೆದುಕೊಂಡವರಿಗೆ ಮತ್ತೆ ಭೂಮಿ ನೀಡಲು ಆಗದು ಎಂದು ಹಿಂದೆ ಯಡಿಯೂರಪ್ಪ ಅವರು ಹೇಳಿದ್ದರು ಆದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಸದನ ಸಮಿತಿಯ ವರದಿ ಆಧಾರದಲ್ಲಿ ಕ್ರಮ
ನೈಸ್ ವಿವಾದ ಕುರಿತು ಯಾವ ಯಾವ ಸರ್ಕಾರದ ಅವಧಿಯಲ್ಲಿ ಏನೇನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಅರಿವು ನನಗೆ ಇದೆ. ಸರ್ಕಾರಗಳು ಈ ವಿಚಾರದಲ್ಲಿ ವಿಳಂಬ ಮಾಡಿವೆ, ಸದನ ಸಮಿತಿಯ ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದು ಅವರು ಹೇಳಿದರು.
ಮೈತ್ರಿ ಸರ್ಕಾರ ಕ್ರಮ ಜರುಗಿಸುತ್ತದೆ
ನೈಸ್ ವಿಚಾರವಾಗಿ ಮೈತ್ರಿ ಸರ್ಕಾರದ ಬಳಿ ಮಾತನಾಡುತ್ತೇನೆ. ಸರ್ಕಾರವು ಮುಂದಿನ ಕ್ರಮಗಳನ್ನು ಜರುಗಿಸುತ್ತದೆ, ಸಿಎಂ ಮತ್ತು ಡಿಸಿಎಂ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಪೂರ್ಣ ವಿವರ ನೀಡುತ್ತಾರೆ ಎಂದು ಅವರು ಸ್ಥಳೀಯರಿಗೆ ಭರವಸೆ ನೀಡಿದರು.
ಹಲವು ವರ್ಷಗಳ ಹಿಂದೆಯೇ ದೇವೇಗೌಡರ ಹೋರಾಟ
ದೇವೇಗೌಡ ಅವರು ನೈಸ್ ಕಾರಿಡಾರ್ ಪ್ರಾರಂಭವಾದಾಗಿನಿಂದಲೂ ಅದರ ವಿರುದ್ಧ ಹೋರಾಡುತ್ತಲೇ ಬಂದಿದ್ದಾರೆ. ಕುಮಾರಸ್ವಾಮಿ ಅವರು ಸಹ ನೈಸ್ ಸಂಸ್ಥೆಯು ರೈತರ ಭೂಮಿ ಕಬಳಿಸಿದೆ ಎಂದು ಹಲವು ಬಾರಿ ಆರೋಪ ಮಾಡಿದ್ದರು. ಇದೀಗ ಅವರದ್ದೇ ಸರ್ಕಾರವಿದ್ದು ರೈತರಿಗೆ ನ್ಯಾಯ ಒದಗಿಸುತ್ತಾರೆಯೇ ನೋಡಬೇಕಿದೆ.