Inside Story: ದೇವನಹಳ್ಳಿಯ ಕೊರೊನಾ ಕ್ವಾರಂಟೈನ್ ಕೇಂದ್ರ ಅವ್ಯವಸ್ಥೆಗಳ ಆಗರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ಹೊರವಲಯದಲ್ಲಿರುವ ಸಮಾಜಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯವನ್ನು ವಿಜಯಪುರ ಪಟ್ಟಣದಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರ ಇಡಲು ಕ್ವಾರಂಟೈನ್ ಕೇಂದ್ರವನ್ನಾಗಿ ಮಾಡಲಾಗಿದೆ. ಆದರೆ ಈ ಕ್ವಾರಂಟೈನ್ ಕೇಂದ್ರದಲ್ಲಿ ಮೂಲಭೂತ ವ್ಯವಸ್ಥೆಗಳೇ ಸರಿಯಿಲ್ಲ.
Recommended Video
ಪ್ರಸ್ತುತ (ಜೂನ್ 21) ವಿಜಯಪುರ ಪಟ್ಟಣದ ಕ್ವಾರಂಟೈನ್ ಕೇಂದ್ರದಲ್ಲಿ 30 ಮಂದಿ ಅನುಮಾನಿತ ಸೋಂಕಿತರು ಅಥವಾ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರು ಇದ್ದಾರೆ. ಪಟ್ಟಣದಲ್ಲಿ ಪತ್ತೆಯಾದ ವಿನಾಯಕ ನಗರದ ಮೊದಲ ಪ್ರಕರಣದ ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದವರು ಹಾಗೂ ಕೋಟೆ ಬೀದಿಯ ಎರಡನೇ ಪ್ರಕರಣದ ಸೋಂಕಿತ ವಾಸಿಸುತ್ತಿದ್ದ ವಠಾರದ ಐದೂ ಮನೆಯ ನಿನಾಸಿಗಳನ್ನು ಇಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಕರ್ನಾಟಕ; ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಿವೆ 518 ಖಾಸಗಿ ಆಸ್ಪತ್ರೆ
ಕ್ವಾರಂಟೈನ್ ಕೇಂದ್ರಕ್ಕೆ ಅನುಮಾನಿತ ಸೋಂಕಿತರನ್ನು ಕರೆತರಬೇಕಾದರೆ ಒಂದೇ ಆಂಬುಲೆನ್ಸ್ನಲ್ಲಿ 16 ಮಂದಿಯನ್ನು ತುಂಬಿ ಕರೆತರಲಾಗಿದೆ. ಕೊರೊನಾ ಸೋಂಕಿತನಿಗೆ ಅತ್ಯಂತ ಆಪ್ತವಲಯದಲ್ಲಿದ್ದ ವ್ಯಕ್ತಿಯನ್ನೂ ಸಹ ಅದೇ ಆಂಬುಲೆನ್ಸ್ನಲ್ಲಿ ಇತರರೊಂದಿಗೆ ಕರೆತರಲಾಗಿದೆ.
ಶೌಚಾಯಲಗಳದ್ದು ದೊಡ್ಡ ಅವಸ್ಥೆ
ಪ್ರಸ್ತುತ ಕ್ವಾರಂಟೈನ್ನಲ್ಲಿರುವವರು 'ಒನ್ಇಂಡಿಯಾ ಕನ್ನಡ'ಕ್ಕೆ ಹೇಳಿರುವ ಪ್ರಕಾರ, ಕ್ವಾರಂಟೈನ್ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆಗಳೇ ಇಲ್ಲ. ಮೂವತ್ತು ಮಂದಿಗೆ ಇರುವುದು ಆರು ಶೌಚಾಲಯ ಮಾತ್ರ, ಅದರಲ್ಲಿ ಉಪಯೋಗಿಸಲು ಯೋಗ್ಯವಾಗಿರುವುದು ಕೇವಲ ಎರಡು ಮಾತ್ರ! ಇನ್ನುಳಿದ ನಾಲ್ಕು ಶೌಚಾಲಯ ಗಬ್ಬೆದ್ದುಹೋಗಿವೆ. ಅಲ್ಲಿಗೆ 30 ಮಂದಿಗೆ ಕೇವಲ ಎರಡು ಶೌಚಾಲಯ, ಪ್ರಾಥಮಿಕ ಸಂಪರ್ಕದವರೂ ಇದನ್ನೇ ಬಳಸಬೇಕು, ದ್ವಿತೀಯ ಸಂಪರ್ಕ ಹೊಂದಿದವರೂ ಇದನ್ನೇ ಬಳಸಬೇಕು, ಸಂಪರ್ಕವೇ ಇಲ್ಲದವರೂ ಸಹ ಇದನ್ನೇ ಬಳಸಬೇಕು.
ಕ್ವಾರಂಟೈನ್ ಕೇಂದ್ರದಲ್ಲಿ ಹಾವು ಕಾಣಿಸಿಕೊಂಡು ಆತಂಕ
ಜೂನ್ 21 ರ ಬೆಳಿಗ್ಗೆ ಕ್ವಾರಂಟೈನ್ ಕೇಂದ್ರದಲ್ಲಿ ಹಾವೊಂದು ಪತ್ತೆಯಾಗಿ ಇಲ್ಲಿನ ತಾತ್ಕಾಲಿಕ ವಾಸಿಗಳಿಗೆ ಆತಂಕ ಉಂಟುಮಾಡಿತ್ತು. ಬೆಳ್ಳಂಬೆಳಿಗ್ಗೆ ಕ್ವಾರಂಟೈನ್ ಕೇಂದ್ರದ ಒಳಗೆ ಬಟ್ಟೆ ತೊಳೆಯುವ ಸ್ಥಳದಲ್ಲಿ ಹಾವು ಪತ್ತೆಯಾಗಿದ್ದು, ಕ್ವಾರೈಂಟೈನ್ ನಲ್ಲಿರುವವರೇ ಅದನ್ನು ಹಿಡಿದು ಹೊರಗೆ ಬಿಟ್ಟಿದ್ದಾರೆ. ಅಷ್ಟೆ ಅಲ್ಲ, ಕ್ವಾರಂಟೈನ್ ಕೇಂದ್ರದ ರೂಮುಗಳಲ್ಲಿ ಸಿಗರೇಟು ಪ್ಯಾಕುಗಳು, ತುಂಡುಗಳು ಅವ್ಯಾಹತವಾಗಿ ಬಿದ್ದಿವೆ. ರೂಂ ಗಳನ್ನು ಸ್ವಚ್ಛ ಮಾಡಬೇಕೆಂಬ ಕನಿಷ್ಟ ವಿವೇಚನೆ ಸಹ ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಇಲ್ಲ.
ಅಬ್ಬಬ್ಬಾ.. ಭಾರತದಲ್ಲಿ ಒಂದೇ ದಿನ ಇಷ್ಟೊಂದು ಜನರಿಗೆ ಕೊರೊನಾವೈರಸ್?
ಸ್ಯಾನಿಟೈಸರ್, ಗ್ಲೌಸ್ ನೀಡಿಲ್ಲ
ಕ್ವಾರಂಟೈನ್ ಕೇಂದ್ರದಲ್ಲಿ ಸ್ಯಾನಿಟೈಸರ್ ಅನ್ನು ನೀಡಲಾಗಿಲ್ಲ. ಕ್ವಾರಂಟೈನ್ಗೆ ಒಳಗಾದವರು ಕೆಲವರು ತಮ್ಮ ಮನೆಗಳಿಂದ ತೆಗೆದುಕೊಂಡ ಬಂದಿದ್ದಾರೆ. ಕೆಲವರು ತಂದಿಲ್ಲ. ಆದರೆ ಪುರಸಭೆ, ಆರೋಗ್ಯ ಇಲಾಖೆಯಾಗಲಿ ಭಾನುವಾರ ಬೆಳಗಿನವರೆಗೆ ಸ್ಯಾನಿಟೈಸರ್ ನೀಡಿಲ್ಲ. ಕ್ವಾರಂಟೈನ್ಗೆ ಹೊಸಬರು ಬಂದ 15 ಗಂಟೆ ಬಳಿ ಸರ್ಜಿಕಲ್ ಮಾಸ್ಕ್ (ಎನ್ 95 ಅಲ್ಲ) ನೀಡಲಾಗಿದೆ. ಆದರೆ ಗ್ಲೌಸ್ಗಳನ್ನು ನೀಡಲಾಗಿಲ್ಲ. ಕೇಳಿದರೆ ಗ್ಲೌಸ್ಗಳು ಇಲ್ಲವೆಂಬ ಉತ್ತರ ನೀಡುತ್ತಾರೆ ಇಲ್ಲಿನ ಸಿಬ್ಬಂದಿ.
ಇರುವುದು ಒಂದೇ ಟ್ಯಾಂಕ್, ಬಿಸಿನೀರಿಲ್ಲ!
ಇಡೀಯ ಕ್ವಾರಂಟೈನ್ ಕೇಂದ್ರದಲ್ಲಿ ಇರುವುದು ಒಂದೇ ವಾಟರ್ ಟ್ಯಾಂಕ್. ಇಲ್ಲಿಂದಲೇ ಎಲ್ಲರೂ ನೀರು ಹಿಡಿದುಕೊಂಡು ಹೋಗಬೇಕು. ಬಿಸಿ ನೀರಿನ ವ್ಯವಸ್ಥೆ ಇಲ್ಲ. ಕೊರೊನಾ ಲಕ್ಷಣದಲ್ಲಿ ಪ್ರಮುಖವಾದ ನೆಗಡಿ, ಜ್ವರವು ತಣ್ಣೀರು ಕುಡಿಯುವುದು ಹಾಗೂ ತಣ್ಣೀರು ಸ್ನಾನದಿಂದ ಉಲ್ಬಣವಾಗುತ್ತದೆ ಎಂಬ ಕನಿಷ್ಟ ಜ್ಞಾನ ಅಧಿಕಾರಿಗಳಿಗೆ ಇಲ್ಲದಿರುವುದು ಕ್ವಾರಂಟೈನ್ನಲ್ಲಿರುವವರ ಕರ್ಮ!
ಶನಿವಾರ ರಾತ್ರಿ 18 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ
ವಿಜಯಪುರದ ಎರಡನೇ ಕೋವಿಡ್ 19 ಪ್ರಕರಣಕ್ಕೆ ಸಂಬಂಧಿಸಿದ 18 ಮಂದಿ ಶನಿವಾರ ರಾತ್ರಿ ಕ್ವಾರಂಟೈನ್ ಕೇಂದ್ರಕ್ಕೆ ಬಂದು ತಂಗಿದ್ದಾರೆ. ಆದರೆ ಕ್ವಾರಂಟೈನ್ ಕೇಂದ್ರಕ್ಕೆ ಕ್ಲೋರಿನ್ ಯುಕ್ತ ನೀರು ಸಿಂಪಡಿಸಿದ್ದು ಮಾರನೇಯ ದಿನ ಅಂದರೆ ಭಾನುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ. ಇದು ಇಲಾಖೆ ವಹಿಸುತ್ತಿರುವ 'ಜಾಗೃತೆ'ಗೆ ಉದಾಹರಣೆ.
ಊಟದ ವ್ಯವಸ್ಥೆ ಬಗ್ಗೆ ತೀವ್ರ ಅಸಡ್ಡೆ
ಕ್ವಾರಂಟೈನ್ನಲ್ಲಿರುವವರಿಗೆ ಊಟದ ವ್ಯವಸ್ಥೆಯಂತೂ ಬಹಳ ಜವಾಬ್ದಾರಿಹೀನವಾಗಿದೆ. ಸಕ್ಕರೆ ಖಾಯಿಲೆ, ಬಿಪಿ ಇರುವವರು ಕ್ವಾರಂಟೈನ್ ಕೇಂದ್ರದ ಒಳಗಿದ್ದಾರೆ. ಅವರೆಲ್ಲರಿಗೂ ಒಂದೇ ಊಟ, ಅದೂ ಸಹ ಹೋಟೆಲ್ನಿಂದ ಬಂದಿದೆ. ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಿಗ್ಗೆ ಹೋಟೆಲ್ನಿಂದ ಆಹಾರ ತರಿಸಿಕೊಡಲಾಗಿದೆ. ಖಾಯಿಲೆಯಿದ್ದವರಿಗೂ ಅದೇ ಊಟ, ಇಲ್ಲದವರಿಗೂ ಅದೇ ಊಟ.
ಕಾಳಜಿಗಾಗಿ ಅಲ್ಲ ಸಂಖ್ಯೆಗಾಗಿ ಕೆಲಸ
ಒಟ್ಟಾರೆಯಾಗಿ ಕೇವಲ ಸಂಖ್ಯೆಗಾಗಿ, ಮೇಲಿನವರಿಗೆ ಲೆಕ್ಕ ಕೊಡಲು ಮಾತ್ರವೇ ಆರೋಗ್ಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಹೆಚ್ಚು ಮಂದಿಯನ್ನು ಕ್ವಾರಂಟೈನ್ಗೆ ಒಳಪಡಿಸುತ್ತಿದ್ದಾರೆಯೇ ವಿನಃ ಅವರ ಆರೋಗ್ಯದ ಬಗ್ಗೆ ಕಿಂಚಿತ್ತು ಸಹ ಕಾಳಜಿ ಇಲ್ಲ ಎಂಬುದು ಕ್ವಾರಂಟೈನ್ ಕೇಂದ್ರದ ಅವಸ್ಥೆ ನೋಡಿದರೆ ತಿಳಿದು ಬರುತ್ತಿದೆ.