ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ: ಮುರುಗೇಶ್ ನಿರಾಣಿ ವಿರುದ್ಧ ದೂರು
ಬೆಂಗಳೂರು,ಜನವರಿ 03: ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಳೆದ ಜುಲೈ ತಿಂಗಳಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ್ದ ಮುರುಗೇಶ್ ನಿರಾಣಿ ಹಿಂದೂ ದೇವತೆಗಳನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದರು.
ನ್ಯಾಯಾಲಯದ ಆದೇಶದಂತೆ ನಿರಾಣಿ ವಿರುದ್ಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಲಯ ಡಿಸೆಂಬರ್ .26ರಂದು ನಿರಾಣಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೋಲೀಸರಿಗೆ ಸೂಚಿಸಿತ್ತು. ಈ ಆದೇಶದಂತೆ ಇದೀಗ ಬೆಂಗಳೂರಿನ ಕೊಡಿಗೆಹಳ್ಳಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153A, 294A,295ರಡಿ ಪ್ರಕರಣ ದಾಖಲಾಗಿದೆ.
ನಿರಾಣಿಯವರು ಭಾಷಣದ ನಡುವೆ , ಮಗಳನ್ನೇ ಮದುವೆಯಾದ ಬ್ರಹ್ಮ ನಮಗೆ ದೇವರು. 16 ಸಾವಿರ ಹೆಂಡಂದಿರನ್ನು ಮದುವೆಯಾದ ದನಾ ಕಾಯುವ ಕೃಷ್ಣ ನಮ್ಮ ದೇವರು. ಮುಗ್ಧ ಬಾಲಕಿಯರು ಸರೋವರದಲ್ಲಿ ಬೆತ್ತಲೆ ಸ್ನಾನ ಮಾಡುವಾಗ ಸೀರೆ ಕದ್ದ ತುಡುಗ ನಮ್ಮ ದೇವರು.
ತಲೆ ಮೇಲೆ ಒಬ್ಬಳು ತೊಡೆಯ ಮೇಲೆ ಒಬ್ಬಳನ್ನು ಇಟ್ಟುಕೊಂಡಾತ ನಮಗೆ ದೇವರು" ಎಂದು ಹಿಂದೂ ದೇವತೆಗಳ ಅವಮಾನ ಮಾಡಿದ್ದರು. ಮಾತ್ರವಲ್ಲದೆ ಶ್ರೀರಾಮನನ್ನೂ ಛೇಡಿಸಿ ಮಾತನಾಡಿದ್ದರು. ಈ ಸಂಬಂಧ ಕಳೆದ ಜುಲೈನಲ್ಲೇ ನಿರಾಣಿ ವಿರುದ್ಧ ರಾಜ್ಕುಮಾರ್ ಕಟುವ ಎಂಬವರು ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು.