ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಎದುರು ಠೇವಣಿದಾರರ ಉಪವಾಸ ಪ್ರತಿಭಟನೆ
ಬೆಂಗಳೂರು, ಆಗಸ್ಟ್ 14: ಬೆಂಗಳೂರಿನ ಬಸವನಗುಡಿಯ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಎದುರು ಠೇವಣಿದಾರರು ಉಪವಾಸ ಧರಣಿ ನಡೆಸುತ್ತಿದ್ದಾರೆ.
ಆರ್ಬಿಐ ನಿಯಮಗಳನ್ನು ಬ್ಯಾಂಕ್ ಪಾಲನೆ ಮಾಡಿಲ್ಲ ಎಂದು ಹಿಂದೆ ಭಾರಿ ಸುದ್ದಿಯಾಗಿತ್ತು, ಠೇವಣಿ ಹಣ ವಾಪಸ್ ನೀಡುವಂತೆ ಜನರು ಪ್ರತಿಭಟನೆ ನಡೆಸಿದ್ದರು.
ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನಿಂದ ಸಾಲ ಪಡೆದವರಿಗೆ ನಡುಕ
ಬೆಂಗಳೂರು ನಗರದಲ್ಲಿಯೇ ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ 12 ಶಾಖೆಗಳನ್ನು ಹೊಂದಿದೆ. ಆಕರ್ಷಕ ಬಡ್ಡಿ ದರ ನೀಡುವ ಘೋಷಣೆಯನ್ನು ಬ್ಯಾಂಕ್ ಮಾಡಿತ್ತು. ಆದ್ದರಿಂದ ಗ್ರಾಹಕರು ಸುಮಾರು 2,400 ಕೋಟಿ ಠೇವಣಿ ಇಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.
ಬ್ಯಾಂಕ್ ಸುಮಾರು 1,700 ಕೋಟಿ ಸಾಲ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಆರ್ಬಿಐ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂಬ ಆರೋಪವೂ ಇದೆ.
ಬ್ಯಾಂಕ್ ಅವ್ಯವಹಾರದ ಕುರಿತು ಕರ್ನಾಟಕ ಹೈಕೋರ್ಟ್ನಲ್ಲಿಯೂ ಪ್ರಕರಣ ದಾಖಲಾಗಿದೆ. ವಯೋವೃದ್ಧರು, ನಿವೃತ್ತರು ಈ ಬ್ಯಾಂಕ್ನಲ್ಲಿ ಲಕ್ಷಾಂತರ ರೂಪಾಯಿ ಠೇವಣಿ ಇಟ್ಟಿದ್ದಾರೆ.
ತಮ್ಮ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದ್ದಾರೆ.ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಮೇಲೆ ಜೂನ್ 18ರಂದು ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಬ್ಯಾಂಕ್ನಿಂದ ಕೋಟ್ಯಾಂತರ ರೂಪಾಯಿ ಸಾಲವನ್ನು ಪಡೆದ ವ್ಯಕ್ತಿಗಳ ಮನೆಗಳ ಮೇಲೆ ಈಗ ದಾಳಿ ನಡೆದಿತ್ತು.
ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಯಶವಂತಪುರ, ಎಚ್. ಬಿ. ಆರ್. ಲೇಔಟ್ ಸೇರಿದಂತೆ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ದಾಳಿ ಮಾಡಿದ್ದಾರೆ. ಬ್ಯಾಂಕ್ನಿಂದ ಸಾಲ ಪಡೆದವರ ಮನೆಯಲ್ಲಿ ತಪಾಸಣೆ ನಡೆಸಿದ್ದರು.
ಯಶವಂತಪುರದ ನಿವಾಸಿಯೊಬ್ಬರು ಬ್ಯಾಂಕ್ನಿಂದ 140 ಕೋಟಿ ಸಾಲ ಪಡೆದಿದ್ದರು. ಹೆಚ್. ಬಿ. ಆರ್. ಲೇಔಟ್ ನಿವಾಸಿಯೊಬ್ಬರು 150 ಕೋಟಿ, 40 ಕೋಟಿ ಸಾಲ ಪಡೆದ ಮತ್ತೊಬ್ಬರ ಮನೆಯ ಮೇಲೂ ದಾಳಿ ಮಾಡಲಾಗಿತ್ತು.