ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ವಿದ್ಯುತ್ ಉತ್ಪಾದನೆಗೆ ಸಜ್ಜು!
ಬೆಂಗಳೂರು, ಮೇ 27: ವಿಶ್ವವಿದ್ಯಾಲಯಗಳು ಜೀವನ ಶಿಕ್ಷಣ ಕೊಡುವಂತಾಗಬೇಕು ಎಂಬುದು ಹಿಂದಿನಿಂದಲೂ ಇರುವ ಬೇಡಿಕೆ. ಶಿಕ್ಷಣದ ಜೊತೆಗೆ ಜೀವನ ಶಿಕ್ಷಣವನ್ನು ನಮ್ಮ ವಿಶ್ವವಿದ್ಯಾಲಯಗಳು ಕೊಡುವಂತಾಗಬೇಕು ಎಂಬುದು ಶಿಕ್ಷಣ ತಜ್ಞರ ಅಭಿಮತ. ಆದರೆ ಇತ್ತೀಚೆಗೆ ವಿಶ್ವವಿದ್ಯಾಲಯಗಳು ರಾಜಕೀಯ ಕೇಂದ್ರದಂತೆ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಆದರೆ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವನ್ನು ಮಾದರಿ ವಿವಿಯಾಗಿ ಅಭಿವೃದ್ಧಿಪಡಿಸಲು ಸರ್ಕಾರ ತೀರ್ಮಾನಿಸಿದೆ. ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯವನ್ನು ವಿಶ್ವದರ್ಜೆ ಕ್ಯಾಂಪಸ್ನ್ನಾಗಿ ಅಭಿವೃದ್ಧಿ ಮಾಡಲು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಯೋಜನೆ ರೂಪಿಸಿದ್ದು, ಒಟ್ಟು 50 ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುವಂತೆ ಇಡೀ ವಿವಿ ಅಭಿವೃದ್ಧಿ ಮಾಡುವ ಗುರಿ ಹೊಂದಲಾಗಿದೆ. ಜೊತೆಗೆ ಕ್ಯಾಂಪಸ್ನಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.
ಒಂದೂವರೆ ವರ್ಷದಲ್ಲಿ ವಿಶ್ವದರ್ಜೆಗೆ
ಬೆಂಗಳೂರು ಕೇಂದ್ರೀಯ ವಿವಿಗೆ 31 ಎಕರೆ ಜಾಗ ಇದ್ದು, ಅಲ್ಲಿ ಶೈಕ್ಷಣಿಕ ಹಾಗೂ ಕ್ರೀಡಾ ಸಮುಚ್ಚಯ ಗಳ ನಿರ್ಮಾಣ ಮಾಡಲಾಗುವುದು. ಮೊದಲ ಹಂತದಲ್ಲಿ ಅಭಿವೃದ್ಧಿ ಪಡಿಸಲಾಗುವ ಶೈಕ್ಷಣಿಕ ಘಟಕ, ಐತಿಹಾಸಿಕ ಕಟ್ಟಡಗಳ ನವೀಕರಣಕ್ಕೆ 100 ಕೋಟಿ ರೂ. ಹಾಗೂ ಕ್ರೀಡಾ ಸೌಲಭ್ಯಕ್ಕೆ 50 ಕೋಟಿ ರೂ. ಮೀಸಲಿಡಲಾಗುವುದು. 18 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಲು ಸೂಚಿಸಲು ತೀರ್ಮಾನಿಸಲಾಗಿದೆ.
'ಕೊರೊನಾ ನಡುವೆ ಕಲಿಕೆ': ಶಾಲಾ ಆರಂಭದ ಬಗ್ಗೆ ಸುರೇಶ್ ಕುಮಾರ್ ಮಾಹಿತಿ
ಸದ್ಯ ವಿಶ್ವವಿದ್ಯಾಲಯದಲ್ಲಿ 800 ವಿದ್ಯಾರ್ಥಿಗಳಿದ್ದು, ಹಲವು ಹೊಸ ಕೋರ್ಸ್ಗಳನ್ನು ಆರಂಭಿಸಲಾಗುವುದು. ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಒಳಗೊಂಡ ಇಂಟಿಗ್ರೇಟೆಡ್ ಕೋರ್ಸ್ಗಳನ್ನು ಆರಂಭಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಕ್ರೀಡಾ ಸೌಕರ್ಯ
ಶಿಕ್ಷಣದ ಜೊತೆಗೆ ಕ್ಯಾಂಪಸ್ನಲ್ಲಿ ಕ್ರೀಡಾ ಚಟುವಟಿಕೆಗಳಿಗೂ ಒತ್ತು ಕೊಡಲಾಗುವುದು. ಅದಕ್ಕಾಗಿಯೇ ವಿಶ್ವವಿದ್ಯಾಲಯ ದಲ್ಲಿ ಪ್ರತ್ಯೇಕ ಕ್ರೀಡಾ ಘಟಕ ನಿರ್ಮಿಸಿ ಅಲ್ಲಿ ಮಲ್ಟಿ ಗೇಮ್ ಕ್ರೀಡಾಂಗಣದ ಸೌಕರ್ಯ ಒದಗಿಸಲಾಗುವುದು. 400 ಮೀಟರ್ ಟ್ರ್ಯಾಕ್ ಸಹ ಅಲ್ಲಿರಲಿದೆ. ಜತೆಗೆ, ಕ್ಯಾಂಪಸ್ ಸುತ್ತ ವಾಕಿಂಗ್ ಪಾತ್ ನಿರ್ಮಿಸಲಾಗುವುದು.
ಸೌರ ವಿದ್ಯುತ್ ಉತ್ಪಾದನೆ
ಪರಿಸರ ಸ್ನೇಹಿಯಾಗಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಲಾಗುವುದು. ಮಳೆ ನೀರು ಸಂಗ್ರಹಕ್ಕೆ 4 ರಿಂದ 5 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಲಾಗುವುದು. ನೀರನ್ನು ಶೇಕಡ 100ರಷ್ಟು ಪುನರ್ಬಳಕೆ ಮಾಡಲಾಗುವುದು. 125 ಕಿಲೋ ವ್ಯಾಟ್ ಸಾಮರ್ಥ್ಯದ ಸೌರ ಶಕ್ತಿ ಉತ್ಪಾದನಾ ಘಟಕ ಸ್ಥಾಪಿಸಲಾಗುವುದು. ಕ್ಯಾಂಪಸ್ ಮಧ್ಯ ಹಸಿರು ವಾತಾವರಣ ಸೃಷ್ಟಿಸಿ, ವಿದ್ಯಾರ್ಥಿಗಳು ಅಲ್ಲೇ ಕುಳಿತು ಅಧ್ಯಯನ ನಡೆಸಲು ಅನುಕೂಲ ಮಾಡಿಕೊಡಲಾಗುವುದು.
ಹಣಕಾಸು ಸಮಸ್ಯೆಯಾದ್ರೂ, ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ: ಸಿಎಂ
ಇ-ಆಡಳಿತಕ್ಕೆ ಒತ್ತು
ವಿಶ್ವವಿದ್ಯಾಲಯದ ಆಡಳಿತ ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ಎಲ್ಲವೂ ಆನ್ಲೈನ್ನಲ್ಲಿರಬೇಕು. ಸರ್ಕಾರದ ಜತೆಗೆ ಆನ್ಲೈನ್ನಲ್ಲೇ ವ್ಯವಹರಿಸಲು ಸೂಚಿಸಲಾಗಿದೆ. ಈಗಿನಿಂದಲೇ ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬೋಧನಾ ವಿಧಾನವನ್ನೂ ರೂಢಿಸಿಕೊಳ್ಳಲು ಸೂಚಿಸಲಾಗಿದೆ.
ಪರಿಶೀಲನಾ ಸಭೆಯಲ್ಲಿ ಕುಲಪತಿ ಪ್ರೊ.ಎಸ್. ಜಾಫೆಟ್ ನೇತೃತ್ವದ ತಂಡ ಬೆಂಗಳೂರು ಸೆಂಟ್ರಲ್ ವಿವಿಯ ಅಭಿವೃದ್ಧಿ ಕಾರ್ಯಗಳ ಕುರಿತ ಯೋಜನೆ ವಿವರಿಸಿತು. ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಭಾಗವಹಿಸಿದ್ದರು.