ಕರ್ನಾಟಕದಲ್ಲಿ ಸಾವಿನ ಕಹಳೆ ಊದಿದ ಡೆಂಗ್ಯೂ: ಮುಂಜಾಗ್ರತೆ ಏನು?
ಬೆಂಗಳೂರು, ಜುಲೈ 7: ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಮತ್ತು ಚಿಕುನ್ ಗುನ್ಯಾ ಪ್ರಕರಣಗಳಿಂದ ಅತ್ಯಂತ ಹೆಚ್ಚು ಬಾಧಿತವಾಗಿರುವ ರಾಜ್ಯ ಕರ್ನಾಟಕ.
ಈ ರೋಗಗಳ ಕುರಿತು ಅರಿವನ್ನು ವಿಸ್ತರಿಸುವ ಅಗತ್ಯ ತಿಳಿದು, ಬೆಂಗಳೂರು ಮೂಲದ ಏಮ್ಸ್ ಇನ್ಸ್ ಟಿಟ್ಯೂಟ್ ಆಫ್ ಹೈಯರ್ ಎಜುಕೇಷನ್ ವಿನೂತನ ವಾಕಥಾನ್ ನಡೆಸಿದೆ. ಈ ಮಾರಣಾಂತಿಕ ರೋಗಗಳ ಕುರಿತು ಮನೆ ಮನೆಗೆ ಹೋಗಿ ಜನರಿಗೆ ಅರಿವು ಮೂಡಿಸಿದೆ.
ಈ ವಾಕಥಾನ್ ಪೀಣ್ಯದ ಏಮ್ಸ್ ಕೇಂದ್ರದಿಂದ ಪ್ರಾರಂಭಗೊಂಡು ತುಮಕೂರು ರಸ್ತೆಯ ಹೆಸರಘಟ್ಟ ಕ್ರಾಸ್ (ಎಂಟನೇ ಮೈಲಿ)ವರೆಗೂ ಸಂಚರಿಸಿತು. ಈ ಮಾರ್ಗದಲ್ಲಿ ವಿದ್ಯಾರ್ಥಿಗಳು ನೂರಾರು ಮನೆಗಳಿಗೆ ಭೇಟಿ ಮಾಡಿ ಡೆಂಗ್ಯೂ, ಚಿಕುನ್ ಗುನ್ಯಾ ಮತ್ತು ಮಲೇರಿಯಾ ಕಾಯಿಲೆಗೆ ಕಾರಣಗಳು ಮತ್ತು ರೋಗತಡೆಯ ವಿಧಾನಗಳ ಕುರಿತು ಮಾಹಿತಿ ನೀಡಿದರು.
ನಿಶ್ಚಿತಾರ್ಥವಾಗಿದ್ದ ಮಂಡ್ಯದ ಯುವತಿ ಡೆಂಗ್ಯೂಗೆ ಬಲಿ
ಈ ಸಂದರ್ಭದಲ್ಲಿ ಏಮ್ಸ್ ಪ್ರಾಂಶುಪಾಲ ಮತ್ತು ಸಿಇಒ ಡಾ.ಕಿರಣ್ ರೆಡ್ಡಿ ಮಾತನಾಡಿ, ದೇಶದಲ್ಲಿ 18,760 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಕರ್ನಾಟಕದ 1,945 ಪ್ರಕರಣಗಳು ಸೇರಿವೆ. ಡೆಂಗ್ಯೂಗೆ ಸಂಬಂಧಿಸಿ ಹಲವಾರು ಸಾವುಗಳು ಸಂಭವಿಸಿವೆ. ಅಲ್ಲದೆ ದೇಶದಲ್ಲಿ 10,952 ಚಿಕುನ್ ಗುನ್ಯಾ ಪ್ರಕರಣಗಳು ವರದಿಯಾಗಿದ್ದು ,ಜುಲೈ 2, 2017ರವರೆಗೆ ಕರ್ನಾಟಕದಲ್ಲಿ 4,047 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದರು.
ಇದು ಜನರಿಗೆ ಅರಿವು ತುಂಬುವ ಮಹತ್ವವನ್ನು ಎತ್ತಿ ತೋರುತ್ತದೆ. ಏಕೆಂದರೆ ಈ ಬಗೆಯ ಸೊಳ್ಳೆಗಳಿಂದ ಹರಡುವ ರೋಗಗಳಿಗೆ ರೋಗತಡೆಯೇ ಉತ್ತಮ ಪರಿಹಾರವಾಗಿದೆ ಎಂದರು.
3 ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತ ಮೈಸೂರಲ್ಲಿ ಡೆಂಗ್ಯೂಗೆ ಬಲಿ
ಡೆಂಗ್ಯೂ ಭಾರತಕ್ಕೆ 1996ರಲ್ಲಿ ಪ್ರವೇಶಿಸಿತು. ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲದೇ ಇರುವುದರಿಂದ ಇದು ಬಾರದಂತೆ ತಡೆಯುವುದು ಉತ್ತಮ. ಡೆಂಗ್ಯೂ ಈಡಿಸ್ ಸೊಳ್ಳೆಗಳ ಕಡಿತದಿಂದ ಉಂಟಾಗುತ್ತದೆ. ಜ್ವರ, ಬಿಳಿರಕ್ತ ಕಣಗಳ ಕುಸಿತ ಮತ್ತು ದದ್ದುಗಳು ಉಂಟಾಗುತ್ತವೆ. ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆಯಿಲ್ಲ. ಆದ್ದರಿಂದ ರೋಗ ಉಂಟು ಮಾಡುವ ಸೊಳ್ಳೆಗಳನ್ನು ನಿವಾರಿಸುವುದು ಅತ್ಯುತ್ತಮ ಉಪಾಯ ಎಂದು ವಿದ್ಯಾರ್ಥಿಗಳು ಹೇಳಿದರು.
ಮನೆಗಳಲ್ಲಿ ನೈರ್ಮಲ್ಯ ಕಾಪಾಡುವುದಲ್ಲದೆ ಅನಗತ್ಯ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವುದು ಈ ರೋಗ ತಡೆಗೆ ನೆರವಾಗುತ್ತದೆ ಎಂದರು. ಡೆಂಗ್ಯೂ ತಡೆಯಲು ಮಾಹಿತಿ, ಶಿಕ್ಷಣ ಮತ್ತು ಸಂವಹನ ನಡೆಸಿ ರೋಗತಡೆಗೆ ಏನು ಮಾಡಬೇಕು, ಏನು ಮಾಡಬಾರದು ಎಂದು ತಿಳಿವಳಿಕೆ ನೀಡಿದರು.
ಜನರಿಗೆ ತಮ್ಮ ಮನೆಯ ಸುತ್ತಮುತ್ತ ಸ್ವಚ್ಛವಾಗಿರಿಸಿಕೊಳ್ಳಲು ಮತ್ತು ಸೊಳ್ಳೆಗಳ ಉತ್ಪಾದನೆಯನ್ನು ನಿಯಂತ್ರಿಸಲು ಸಲಹೆ ನೀಡಲಾಯಿತು. ಡೆಂಗ್ಯೂ ವಿಷಯದಲ್ಲಿ ಅದು ಬಾರದಂತೆ ತಡೆಯುವುದು ಅತ್ಯುತ್ತಮ ಪರಿಹಾರ. ಆದ್ದರಿಂದ ಡೆಂಗ್ಯೂವನ್ನು ತಡೆಯಿರಿ. ಎಲ್ಲ ನೀರಿನ ಸಂಗ್ರಹ ಮತ್ತು ಏರ್ ಕೂಲರ್ ಗಳನ್ನು ವಾರಕ್ಕೆ ಒಮ್ಮೆ ಸ್ವಚ್ಛಗೊಳಿಸಿ ಬಳಸುವ ಮುನ್ನ ಒಣಗಿಸಬೇಕು ಎಂದು ಸಲಹೆ ಮಾಡಿದರು.
ಕಟ್ಟಡದ ಮೇಲಿನ ತೊಟ್ಟಿಗಳನ್ನು ಬಿಗಿಯಾಗಿ ಮುಚ್ಚಿರಬೇಕು. ಮನೆಯಲ್ಲಿ ನೀರು ತುಂಬಲು ಬಳಸುವ ಯಾವುದೇ ವಸ್ತುಗಳನ್ನು ಮರುಬಳಕೆಗೆ ಮುನ್ನ ಒಣಗಿಸಬೇಕು. ಅಲ್ಲದೆ ಬಳಕೆಯಾಗದ ಮತ್ತು ಒಡೆದ ಬಾಟಲಿಗಳು, ಕಪ್ ಗಳು, ಮಡಕೆಗಳು ಮತ್ತು ಟೈರ್ ಗಳನ್ನು ನೀರು ನಿಲ್ಲದಂತೆ ಇರಿಸಬೇಕು ಎಂದು ಮಾಹಿತಿ ನೀಡಲಾಯಿತು.