ಬೆಂಗಳೂರಿನಲ್ಲೂ ಆರಂಭವಾದ ಪ್ರತ್ಯೇಕ ಗೂರ್ಖಾಲ್ಯಾಂಡ್ ಹೋರಾಟ
ಬೆಂಗಳೂರು, ಜೂನ್ 28: ಕಳೆದ ಹಲವು ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ 'ಗೂರ್ಖಾಲ್ಯಾಂಡ್' ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಬೆಂಗಳೂರಿನಿಂದಲೂ ಬೆಂಬಲ ವ್ಯಕ್ತವಾಗಿದೆ.
ಗೂರ್ಖಾಗಳಿಗೆ ಪ್ರತ್ಯೇಕ ರಾಜ್ಯ ಬೇಕು ಎಂಬ ಬೇಡಿಕೆ ಹಿನ್ನಲೆಯಲ್ಲಿ ಡಾರ್ಜಿಲಿಂಗ್ ನಲ್ಲಿ ಕಳೆದ ಹಲವು ದಿನಗಳಿಂದ ಅನಿರ್ಧಿಷ್ಟಾವಧಿ ಬಂದ್ ನಡೆಯುತ್ತಿದೆ. ಪಶ್ಚಿಮ ಬಂಗಾಳ ಸರಕಾರದ ವಿರುದ್ಧ ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಪ್ರತಿಭಟನೆ ನಡೆಸುತ್ತಿದೆ. ಇದೇ ವೇಳೆಗೆ ಬೆಂಗಳೂರಿನಲ್ಲಿರುವ ಈಶಾನ್ಯ ಭಾರತೀಯರು ಗೂರ್ಖಾಲ್ಯಾಂಡ್ ಗಾಗಿ ಪ್ರತಿಭಟನೆ ನಡೆಸಿದ್ದಾರೆ.
ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸೇರಿದ ಈಶಾನ್ಯ ಭಾರತೀಯರು ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿ ಪಶ್ಚಿಮ ಬಂಗಾಳ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಪ್ರತ್ಯೇಕ ಗೂರ್ಖಾಲ್ಯಾಂಡ್ ಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಇದೇ ವೇಳೆ ಭಾರತೀಯರೆಲ್ಲಾ ನಮ್ಮ ಪ್ರತಿಭಟನೆಗೆ ದನಿಗೂಡಿಸಬೇಕು ಎಂದು ಗೂರ್ಖಾಲ್ಯಾಂಡ್ ಹೋರಾಟಗಾರರು ಮನವಿ ಮಾಡಿಕೊಂಡರು.
ಇದೇ ರೀತಿ ಜೂನ್ 20ರಂದು ನೂರಾರು ಪ್ರತಿಭಟನಾಕಾರರು ಬೆಂಗಳೂರನ ಟೌನ್ ಹಾಲ್ ಮುಂದೆ ಪ್ರತಿಭಟನೆ ನಡೆಸಿದ್ದರು.