ಪಿಂಚಣಿ ಕೊಡಿಸೋಕೆ ಲಂಚಕ್ಕೆ ಕೈಯೊಡ್ಡಿ ಎಸಿಬಿ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ !
ಬೆಂಗಳೂರು, ಡಿಸೆಂಬರ್ 09: ಸರ್ಕಾರದಿಂದ ವೃದ್ಧರಿಗೆ ಮಾಸಿಕ ಕೊಡೋದು ಆರು ನೂರು ರೂಪಾಯಿ ಪಿಂಚಣಿ. ಇದರ ಮಂಜೂರಾತಿ ಕಡತ ವಿಲೇವಾರಿ ಮಾಡಲು ವೃದ್ಧ ವ್ಯಕ್ತಿಯಿಂದ ಮೂರು ಸಾವಿರ ಲಂಚ ಕೀಳಲು ಹೋಗಿ ಎಸಿಬಿ ಬಲೆಗೆ ಬಿದ್ದಿದ್ದಾನೆ. ಭ್ರಷ್ಟಾಚಾರ ವಿರೋಧಿ ದಿನವೇ ವೃದ್ಧ ವ್ಯಕ್ತಿ ಬಳಿ ಲಂಚಕ್ಕೆ ಕೈ ಚಾಚಿ ಸಿಕ್ಕಿಬಿದ್ದಿದ್ದಾರೆ.
ಆಲೂರು ತಾಲೂಕಿನ ನಾಡ ಕಚೇರಿಯ ಕಂದಾಯ ನಿರೀಕ್ಷಕ ಎ.ಎಸ್. ಹರೀಶ್ ಎಸಿಬಿ ಬಲೆಗೆ ಬಿದ್ದವರು. ಕಾಟೀಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಪಿಂಚಣಿ ಮಂಜೂರುಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಒಂದು ತಿಂಗಳ ಬಳಿಕ ಕಾಟೀಹಳ್ಳಿ ಅರ್ಜಿದರರಿಗೆ ಕರೆ ಮಾಡಿದ ಕಂದಾಯ ನಿರೀಕ್ಷಕ ನಿನ್ನ ಅರ್ಜಿ ಇತ್ಯರ್ಥ ಮಾಡಲು ಮೂರು ಸಾವಿರ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ವ್ಯಕ್ತಿ ಹಾಸನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಬುಧವಾರ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಹರೀಶ್ ನನ್ನು ಎಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಂಚದ ಹಣ ವಶಪಡಿಸಿಕೊಂಡು ಆರೋಪಿತ ಅಧಿಕಾರಿಯನ್ನು ಬಂಧಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣ: ಜಮೀನಿನ ಪೋಡಿ ದುರಸ್ರಿ ಮಾಡಿಕೊಡಲು ಎರಡು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸರ್ವೆ ಇಲಾಖೆ ಸೂಪರ್ ವೈಸರ್ ನನ್ನು ಚಾಮರಾಜನಗರ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ತಾಲೂಕು ಕಚೇರಿ ಸರ್ವೆ ಸೂಪರ್ ವೈಶರ್ ನಾಗರಾಜು ಲಂಚದ ಸಮೇತ ಸಿಕ್ಕಿಬಿದ್ದವರು. ಆರೋಪಿತ ನಾಗರಾಜ್ ಅವರಿಂದ ಲಂಚ ಹಣ ವಶಪಡಿಸಿಕೊಂಡು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಲಾಗಿದೆ. ಚಾಮರಾಜನಗರ ತಾಲೂಕು ಚಿಕ್ಕಮೊಳೆ ಗ್ರಾಮದ ರಂಗಶೆಟ್ಟಿ ಎಂಬುವರಿಗೆ ಸೇರಿದ ಜಮೀನು ಪೋಡಿ ಮಾಡಿಕೊಡುವಂತೆ ಸರ್ವೆ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು. ದೂರುದಾರರ ತಂದೆ ಹೆಸರಿನಲ್ಲಿರುವ ಜಮೀನು ಪೋಡಿ ಮಾಡಿಕೊಡಲು ಎರಡು ಸಾವಿರ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅರ್ಜಿದಾರ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು.