ಎಸಿಬಿ ಬಲೆಗೆ ಬಿದ್ದ ಪಿಸಿಬಿ ಅಧಿಕಾರಿಗಳು !
ಬೆಂಗಳೂರು, ಡಿಸೆಂಬರ್ 1: ನೀರಿನ ಶುದ್ಧೀಕರಣ ಘಟಕ ತೆರೆಯಲಿಕ್ಕೆ ಐವತ್ತು ಸಾವಿರ ರೂಪಾಯಿ ಲಂಚ ಪಡೆಯಲು ಹೋಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ಇಬ್ಬರು ಅಧಿಕಾರಿಗಳು ಎಸಿಬಿ ಅಧಿಕಾರಿಗಳ ಬೆಲೆಗೆ ಬಿದ್ದಿದ್ದಾರೆ. ದಾಸರಹಳ್ಳಿ ಪ್ರಾದಶಿಕ ಕಚೇರಿಯ ಪರಿಸರ ಅಧಿಕಾರಿ ಮತ್ತು ಉಪ ಪರಿಸರ ಅಧಿಕಾರಿ ಇಬ್ಬರು ಬಲೆಗೆ ಬಿದ್ದವರು. ಲಂಚ ಹಣ ವಶಕ್ಕೆ ಪಡೆದು ಇಬ್ಬರು ಆರೋಪಿತ ಅಧಿಕಾರಿಗಳನ್ನು ಬಂಧಿಸಲಾಗಿದೆ.
ವ್ಯಕ್ತಿಯೊಬ್ಬರು ದಾಸನಪುರ ಹೋಬಳಿಯ ಕಾಚೋಹಳ್ಳಿಯಲ್ಲಿ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲು ಪರವಾನಗಿ ನೀಡುವಂತೆ ಕೋರಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ದಾಸರಹಳ್ಳಿ ವಿಭಾಗದ ಪ್ರಾದೇಶಿಕ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್ ನಲ್ಲಿ ಅರ್ಜಿ ಸಲ್ಲಿಸಿದರೂ ಪರವಾನಗಿ ನೀಡಿರಲಿಲ್ಲ. ಹೊಸ ನೀರಿನ ಘಟಕ ಸ್ಥಾಪಿಸಲು ಪರವಾನಗಿ ನೀಡಲು ಐವತ್ತು ಸಾವಿರ ರೂಪಾಯಿ ಲಂಚ ನೀಡುವಂತೆ ಪರಿಸರ ಅಧಿಕಾರಿ ಶಿವಕುಮಾರ್ ಬೇಡಿಕೆ ಇಟ್ಟಿದ್ದಾರೆ.
ಮಂಗಳವಾರ ಬೆಳಗ್ಗೆ ಮುಂಗಡವಾಗಿ ಇಪ್ಪತ್ತೈದು ಸಾವಿರ ಲಂಚ ಸ್ವೀಕರಿಸುವಾಗ ಪರಿಸರ ಅಧಿಕಾರಿ ಕೆ.ವಿ. ಶಿವಕುಮಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಇದೇ ವೇಳೆ ಪ್ರಾದೇಶಿಕ ಕಚೇರಿಯ ಉಪ ಪರಿಸರ ಅಧಿಕಾರಿ ಸೋಮಶೇಖರ್ ಮತ್ತಷ್ಟು ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟು ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಆರೋಪಿತ ಅಧಿಕಾರಿಗಳನ್ನು ಬಂಧಿಸಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿದೆ. ಆರೋಪಿಗಳಿಂದ ಲಂಚ ಹಣ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.