ಲೀಗಲ್ ಕೆಲಸಕ್ಕೆ ಲಂಚ ಕೇಳಿ ಸಿಕ್ಕಿಬಿದ್ದ ಬಿಬಿಎಂಪಿ ಇಂಜಿನಿಯರ್
ಬೆಂಗಳೂರು, ಏಪ್ರಿಲ್ 19: ಅಕ್ರಮವಾಗಿ ಕೆಲಸ ಮಾಡಿಕೋಡೋಕೆ ಲಂಚ ಪಡೆದು ಜೈಲು ಸೇರಿರುವ ಪ್ರಸಂಗ ನೋಡಿರುತ್ತೀರಿ. ಇಲ್ಲೊಬ್ಬ ಇಂಜಿನಿಯರ್ ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದು ಜೈಲಿಗೆ ಹೋಗಿದ್ದಾನೆ.
ಆತನ ಹೆಸರು ಪೂಜಾರಪ್ಪ. ಬಿಬಿಎಂಪಿ ಗಾಂಧಿನಗರ ಉಪ ವಿಭಾಗದ ಸಹಾಯಕ ಇಂಜಿನಿಯರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಐವತ್ತು ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪೂಜಾರಪ್ಪ ಹದಿನೈದು ಸಾವಿರ ರೂ. ಲಂಚ ಸ್ವೀಕರಿಸಿ ಬೆಂಗಳೂರು ನಗರ ಘಟಕದ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬೆಂಗಳೂರಿನ ರಾಘವೇಂದ್ರ ನಗರದ ನಿವಾಸಿಗೆ ಸಂಬಂಧಿಸಿದ ಜಾಗವೊಂದು ಶೇಷಾದ್ರಿಪುರಂ ಬಳಿ ಇತ್ತು. ಇವರ ಸಂಬಂಧಿಯೊಬ್ಬರಿಂದ ಅಕ್ರಮವಾಗಿ ಭೂಮಿ ಖರೀದಿ ಮಾಡಿ ವಿವಾದಿತ ಜಮೀನಿನಲ್ಲಿ ಖರೀದಿದಾರರು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ಭೂ ವಿವಾದ ನ್ಯಾಯಾಲಯದಲ್ಲಿದ್ದರೂ ಅಕ್ರಮವಾಗಿ ಕಟ್ಟಡ ಕಟ್ಟುತ್ತಿರುವ ಬಗ್ಗೆ ರಾಘವೇಂದ್ರನಗರದ ನಿವಾಸಿ ಬಿಬಿಎಂಪಿ ಗಾಂಧಿನಗರದ ಉಪ ವಿಭಾಗ ಕಚೇರಿಗೆ ದೂರು ನೀಡಿದ್ದರು.
ದೂರಿನ ಅನ್ವಯ ಕೆಎಂಸಿ ಕಾಯ್ದೆ ಉಲ್ಲಂಘನೆ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಲು 50 ಸಾವಿರ ರೂ.ಲಂಚ ನೀಡುವಂತೆ ಪೂಜಾರಪ್ಪ ಬೇಡಿಕೆ ಇಟ್ಟಿದ್ದಾನೆ. ಇಷ್ಟೊಂದು ಹಣ ನೀಡಲು ಸಾಧ್ಯವಿಲ್ಲ, ಕಂತುಗಳ ಮೂಲಕ ನೀಡುವುದಾಗಿ ಹೇಳಿ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು.
Recommended Video
ಮುಂಗಡವಾಗಿ ಈಗಾಗಲೇ ಹದಿನೈದು ಸಾವಿರ ರೂ. ಸ್ವೀಕರಿಸಿದ್ದ ಪೂಜಾರಪ್ಪ ಇಂದು ಎರಡನೇ ಕಂತಿನ ಹದಿನೈದು ಸಾವಿರ ರೂ. ಲಂಚ ಹಣವನ್ನು ಪಡೆಯುವಾಗ ಬೆಂಗಳೂರು ನಗರ ಘಟಕದ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಲಂಚದ ಹಣ ಸಮೇತ ಪೂಜಾರಪ್ಪ ಸಿಕ್ಕಿಬಿದ್ದಿದ್ದು ಬೆಂಗಳೂರು ನಗರ ಘಟಕದ ಎಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅಕ್ರಮವಾಗಿ ಕೆಲಸ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು, ಸಿಕ್ಕಿ ಬೀಳುವುದು ಸಾಮಾನ್ಯ. ಇಲ್ಲಿ ಕಾನೂನು ಪ್ರಕಾರ ಕೆಲಸ ಮಾಡಲಿಕ್ಕೆ ಲಂಚ ಕೇಳಿ ಇಂಜಿನಿಯರ್ ಜೈಲಿಗೆ ಹೋಗಿದ್ದಾನೆ.