ಜಯದೇವ ಬಳಿ ರಸ್ತೆ ದಾಟಲು ಬೇಕೇಬೇಕು 'ವಾಕ್' ಬಟನ್
ಬೆಂಗಳೂರು, ಡಿಸೆಂಬರ್ 12 : ಇದು ಜಯದೇವ ಆಸ್ಪತ್ರೆ ಸಿಗ್ನಲ್ ನಲ್ಲಿ ಪ್ರತಿನಿತ್ಯ ಕಂಡುಬರುವ ದೃಶ್ಯ. ಸಾವಿರಾರು ಜನರು ಸದಾ ವಾಹನನಿಬಿಡವಾಗಿರುವ ಬನ್ನೇರುಘಟ್ಟ ರಸ್ತೆಯನ್ನು ದಾಟುತ್ತಲೇ ಇರುತ್ತಾರೆ.
ಅವರಲ್ಲಿ ಒಂದಿಷ್ಟು ಮಂದಿ ಜಯದೇವ ಆಸ್ಪತ್ರೆ ಚಿಕಿತ್ಸೆಗೆಂದು ಬರುವವರು, ಅವರ ಸಂಬಂಧಿಕರು, ಆಸ್ಪತ್ರೆಯಲ್ಲಿ ದಾಖಲಾಗಿರುವವರನ್ನು ನೋಡಲು ಬರುವವರು. ಇವರಲ್ಲಿ ಎಷ್ಟೋ ಮಂದಿ ಹಿರಿಯ ನಾಗರಿಕರು ಕೈಯಲ್ಲಿ ಬ್ಯಾಗನ್ನು ಹಿಡಿದು ದಾಟುತ್ತಿರುವುದನ್ನು ಕೂಡ ನೋಡಿರುತ್ತೇವೆ.
ಬೆಂಗಳೂರು ಟ್ರಾಫಿಕ್ ಸಂತೆಯ ಗದ್ದಲದಲ್ಲಿ ಸದ್ದಿಲ್ಲ!
ಆ ರಸ್ತೆಯಲ್ಲಿ ಅಡ್ಡಾಡುವ ವಾಹನ ಚಾಲಕರಿಗೆ ಒಂದೇ ಲಕ್ಷ್ಯ, ಗುರಿಯನ್ನು ಶರವೇಗದಲ್ಲಿ ತಲುಪಬೇಕು. ಗಮ್ಯವನ್ನು ಆದಷ್ಟು ಬೇಗ ಸೇರಿಕೊಳ್ಳಬೇಕು. ಅಂಡರ್ ಪಾಸ್ ನಲ್ಲಿ ವೇಗವಾಗಿ ಬರುವವರು ಮಸೀದಿಯ ಬಳಿ ನಿಧಾನ ಮಾಡುತ್ತಾರಾದರೂ, ರಸ್ತೆ ದಾಟುವವರ ಕಣ್ಣಲ್ಲಿ ಎಲ್ಲಿ ಗುದ್ದಿಬಿಡುತ್ತಾರೋ ಎಂಬ ಭಯ ಆವರಿಸಿಕೊಂಡೇ ಇರುತ್ತದೆ.
ಈ ಪರಿಸ್ಥಿತಿಯನ್ನು ತಿಳಿಗೊಳಿಸುವುದು ಹೇಗೆ?
ಎ) ರಸ್ತೆ ದಾಟುವವರಿಗಾಗಿ ಸ್ಕೈವಾಕ್ ನಿರ್ಮಿಸುವುದು. ಈ ರಸ್ತೆಯಲ್ಲಿ ಹಿರಿಯ ನಾಗರಿಕರು ಅಡ್ಡಾಡುವುದರಿಂದ, ಅವರು ಮೆಟ್ಟಿಲು ಹತ್ತಬೇಕಾಗಿರುವುದರಿಂದ ಇದು ಅವರಿಗೆ ಕಷ್ಟವಾಗಬಹುದು. ಹಾಗಿಲ್ಲದಿದ್ದರೆ...
ಬಿ) 60 ಸೆಕೆಂಡುಗಳ ಕಾಲ ರಸ್ತೆ ದಾಟಲು ಅನುವು ಮಾಡಿಕೊಡಲೆಂದು 'ನಡೆಯಿರಿ (Walk)' ಬಟನ್ ಇರುವ ಸಿಗ್ನಲ್ ಲೈಟನ್ನು ಅಳವಡಿಸುವುದು. (ಇಂಥ ಸಿಗ್ನಲ್ ಗಳನ್ನು ಸಿಂಗಪುರದಲ್ಲಿ ಕಾಣಬಹುದು.).
ಒನ್ಇಂಡಿಯಾ ಫಲಶ್ರುತಿ : ಆವಲಹಳ್ಳಿ ಜಂಕ್ಷನ್ ನಲ್ಲಿ ಪೇದೆ ಪ್ರತ್ಯಕ್ಷ
ಬೆಂಗಳೂರಿನ ನಾಗರಿಕರಿಗಾಗಿ 'ಸಿಟಿಜನ್ಸ್ ಫಾರ್ ಬೆಂಗಳೂರು' ಸಂಘಟನೆ ಇಂದು ಬಿಡಗಡೆ ಮಾಡುತ್ತಿರುವ 'ಬೇಕು ಬೇಡ ಸಂತೆ' ಪ್ರಣಾಳಿಕೆಯಲ್ಲಿ ಎರಡನೇ ಸೌಲಭ್ಯ ಇರಬೇಕೆಂದು ಅನುಮೋದಿಸಲಾಗಿದೆ.
ರಸ್ತೆ ವಾಹನಗಳಿಗೆ ಮಾತ್ರ ಸೇರಿರುವುದಿಲ್ಲ. ಅದು ಪಾದಚಾರಿಗಳ ಹಕ್ಕು ಕೂಡ. ಆದ್ದರಿಂದ, ವಾಹನ ಸಂಚಾರವನ್ನು 60 ಸೆಕೆಂಡುಗಳ ಕಾಲ ನಿಲ್ಲಿಸಿ ರಸ್ತೆ ದಾಟಲು ಅವಕಾಶ ಸಿಗಬೇಕು. ವಾಹನಗಳು ವಿರಳವಾದಾಗ ಮಾತ್ರ ಅತ್ತಿತ್ತ ನೋಡಿಕೊಂಡು ರಸ್ತೆ ದಾಟುವಂತಾಗಬಾರದು.
ಬೆಂಗಳೂರಿನಲ್ಲಿ ಸ್ಕೈವಾಕ್ ಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಅವನ್ನು ಬಳಸುವವರು ಮತ್ತು ಅದರಿಂದ ಆಗುತ್ತಿರುವ ಅನುಕೂಲಗಳು ಕೂಡ ಕಡಿಮೆಯೆ. ಅಲ್ಲದೆ, ಹಲವಾರು ಸ್ಕೈವಾಕ್ ಗಳು ಬರೀ ಜಾಹೀರಾತಿಗಾಗಿ ಮಾತ್ರ ಮೀಸಲಾಗಿವೆ. ಆದ್ದರಿಂದ 'ವಾಕ್' ಬಟನ್ ಅಳವಡಿಸಲು ಹಕ್ಕೊತ್ತಾಯ ಕೇಳಿಬಂದಿದೆ.
ಬೆಂಗಳೂರಿನ ನಾಗರಿಕರೆ, ನಿಮ್ಮ ಆಯ್ಕೆ ಕೂಡ 'ಬಿ' ಆಗಿದ್ದರೆ, ಮಂಗಳವಾರ ಮಧ್ಯಾಹ್ನ 3 ಗಂಟೆಗೆ, ರಿಚ್ಮಂಡ್ ರಸ್ತೆಯ ಬಳಿಯ, ಲ್ಯಾಂಗ್ ಫೋರ್ಡ್ ರಸ್ತೆಯಲ್ಲಿರುವ, ಸೇಂಟ್ ಜೋಸೆಫ್ ಕಾಲೇಜಿಗೆ ದೊಡ್ಡ ಸಂಖ್ಯೆಯಲ್ಲಿ ಬನ್ನಿ ಮತ್ತು ಈ ಅಭಿಯಾನಕ್ಕೆ ದನಿಗೂಡಿಸಿ.
ತೊಂಬತ್ತೊಂಬತ್ತು ವರ್ಷದ ಹಿರಿಯ ನಾಗರಿಕ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿರುವ ಎಚ್ ಎಸ್ ದೊರೆಸ್ವಾಮಿ ಅವರು ಬೆಂಗಳೂರಿಗಾಗಿ ಬೇಕು ಬೇಡ ಸಂತೆ ಸಿಟಿಜನ್ ಮ್ಯಾನಿಫೆಸ್ಟೋವನ್ನು ಬಿಡುಗಡೆ ಮಾಡಲಿದ್ದಾರೆ. ಸಿಟಿಜನ್ಸ್ ಫಾರ್ ಬೆಂಗಳೂರಿನ ಈ ಬೇಡಿಕೆಯನ್ನು ರಾಜಕಾರಣಿಗಳಿಗೆ ಸಲ್ಲಿಸಲಿದ್ದಾರೆ. ಈ ಅಭಿಯಾನದಲ್ಲಿ ವಿದ್ಯಾರ್ಥಿಗಳೂ ಭಾಗವಹಿಸುತ್ತಿದ್ದಾರೆ.