ಬೆಂಗಳೂರಲ್ಲಿ ರೂಪಾಂತರ ತಳಿ: ಮೈ ಮರೆತರೆ ಅಂಟಿಕೊಳ್ಳುತ್ತೆ "ಡೆಲ್ಟಾ"!
ಬೆಂಗಳೂರು, ಜೂನ್ 08: ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ನಿಟ್ಟುಸಿರು ಬಿಡುವಂತಿಲ್ಲ. ಬೆಂಗಳೂರಿನ ಕೊವಿಡ್-19 ಸೋಂಕಿತರಲ್ಲಿ ಸಂಗ್ರಹಿಸಿದ ಮಾದರಿಯಲ್ಲಿ B.1.617.2 ರೂಪಾಂತರ ತಳಿ ಪತ್ತೆಯಾಗಿದೆ.
ಭಾರತದಲ್ಲಿ ಮೊದಲು ಕಾಣಿಸಿಕೊಂಡಿರುವ B.1.617.2 ರೂಪಾಂತರ ತಳಿಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಡೆಲ್ಟಾ ಎಂದು ಹೆಸರಿಸಿದೆ. ಕರ್ನಾಟಕ ರಾಜಧಾನಿಯಲ್ಲಿ ಈ ರೂಪಾಂತರ ವೈರಸ್ ಸೋಂಕು ಹಲವರಲ್ಲಿ ಪತ್ತೆ ಆಗಿರುವುದು ಆತಂಕವನ್ನು ಹೆಚ್ಚಿಸಿದೆ.
ಭಾರತದಲ್ಲಿ ಪತ್ತೆಯಾದ ಕೊರೊನಾವೈರಸ್ ರೂಪಾಂತರ ತಳಿಗೆ ಹೊಸ ಹೆಸರು!
ಸಾಮಾನ್ಯ ಕೊರೊನಾವೈರಸ್ ಸೋಂಕು, B.1.617.2 ರೂಪಾಂತರ ತಳಿಯ ನಡುವಿನ ವ್ಯತ್ಯಾಸವೇನು. ಈ ತಳಿ ಹಾಗೂ ಮೂಲ ರೋಗಾಣುವಿನಲ್ಲಿ ಯಾವುದು ಹೆಚ್ಚು ಅಪಾಯಕಾರಿ. ಬೆಂಗಳೂರಿಗರು ಈ ಹೊಸ ರೂಪಾಂತರಿ ಕೊರೊನಾವೈರಸ್ ರೋಗಾಣುವಿನಿಂದ ರಕ್ಷಿಸಿಕೊಳ್ಳುವುದು ಹೇಗೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಹೊಸ ರೂಪಾಂತರಿ ಬಗ್ಗೆ ಹೇಳುವುದೇನು ಎಂಬುದರ ಮಾಹಿತಿಯನ್ನು ಇಲ್ಲಿ ಓದಿ.
ಸಿಲಿಕಾನ್ ಸಿಟಿಯಲ್ಲಿ ಕೊವಿಡ್-19 ರೂಪಾಂತರ ಡೆಲ್ಟಾ ಪತ್ತೆ
ಕರ್ನಾಟಕದ ಸಚಿವರ ಕೊವಿಡ್-19 ಕಾರ್ಯಪಡೆಯು ನಡೆಸಿ ಸಲ್ಲಿಸಿರುವ ಜಿನೋಮಿಕ್ ನಡೆಸಿರುವ ಅಧ್ಯಯನದ ವರದಿ ಪ್ರಕಾರ, "93ರಷ್ಟು ಸೋಂಕಿತರ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಕೊರೊನಾವೈರಸ್ ಸೋಂಕಿತರಲ್ಲಿ "ಡೆಲ್ಟಾ" ಮಾದರಿ ಪತ್ತೆಯಾಗಿದೆ" ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ತಿಳಿಸಿದ್ದಾರೆ.
ಕೊರೊನಾ ಲಸಿಕೆ ಬಗ್ಗೆ ಜನರಲ್ಲಿ "143": ಭಾರತದಲ್ಲಿ ಹೇಗಿದೆ ಲೆಕ್ಕಾಚಾರ!?
ಡೆಲ್ಡಾ ರೂಪಾಂತರಕ್ಕೆ ಹರಡುವಿಕೆ ಸಾಮರ್ಥ್ಯ ಹೆಚ್ಚು
ಪ್ರಸ್ತುತ B.1.617.2 ರೂಪಾಂತರ ತಳಿಯು ದೇಹದ ಪ್ರೋಟೀನ್ ಶಕ್ತಿಯನ್ನು ತೊಡೆದು ಹಾಕುವ ಹೆಚ್ಚುವರಿ ಅಂಶವನ್ನು ಒಳಗೊಂಡಿರುತ್ತದೆ ಅಂತಾ ನಾವು ಭಾವಿಸುತ್ತೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕೊವಿಡ್-19 ತಾಂತ್ರಿಕ ವಿಭಾಗದ ಮುಖ್ಯಸ್ಥೆ ಮಾರಿಯಾ ವ್ಯಾನ್ ಕರ್ಖೊವೆ ತಿಳಿಸಿದ್ದಾರೆ. B.1.617.2 ಹಾಗೂ ಡೆಲ್ಟಾ ರೂಪಾಂತರವು ಹೆಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಅಂಟಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಡೆಲ್ಟಾ ರೂಪಾಂತರ ಪತ್ತೆ ಮಾಡಲು ಜಾಗರೂಕತೆ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯು ಹೆಚ್ಚು ಅಪಾಯಕಾರಿ ಎಂಬುದನ್ನು ತಿಳಿದಿದ್ದರೂ, ಜನರು ಈ ಸೋಂಕಿನ ಬಲೆಗೆ ಸಿಲುಕಿ ಹಾಕಿಕೊಳ್ಳುತ್ತಿರುವುದು ಆತಂಕವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ ಎಂದು ಹೆಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸೆಂಟರ್ ಆಫ್ ಅಕೆಡೆಮಿಕ್ ರಿಸರ್ಚ್ ಡೀನ್ ಡಾ. ವಿಶಾಲ್ ರಾವ್ ಹೇಳಿದ್ದಾರೆ. ಹೊಸ ರೂಪಾಂತರ ವೈರಸ್ ಮೊದಲಿಗಿಂತ ಅಪಾಯಕಾರಿ ಹಾಗೂ ಕ್ಷಿಪ್ರಗತಿಯಲ್ಲಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಈ ಡೆಲ್ಟಾ ರೋಗಾಣುವಿನ ಪತ್ತೆಗೆ ಉನ್ನತ ಮಟ್ಟದ ತಂತ್ರಜ್ಞಾನ ಹಾಗೂ ಆರೋಗ್ಯ ತಜ್ಞರನ್ನು ಹೊಂದುವ ಅಗತ್ಯವಿದೆ ಎಂದು ಡಾ. ರಾವ್ ಸಲಹೆ ನೀಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಅಂಕಿ-ಸಂಖ್ಯೆ
ಸಿಲಿಕಾನ್ ಸಿಟಿಯಲ್ಲಿ ಕಳೆದೊಂದು ದಿನದಲ್ಲಿ 1992 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 199 ಜನರು ಕೊವಿಡ್-19 ಸೋಂಕಿಗೆ ಬಲಿಯಾಗಿದ್ದು, ಇದೇ ಅವಧಿಯಲ್ಲಿ 11,488 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಈವರೆಗೂ 11,85,118 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 10,62,398 ಸೋಂಕಿತರು ಗುಣಮುಖರಾಗಿದ್ದಾರೆ. ಸಿಲಿಕಾನ್ ಸಿಟಿಯಲ್ಲೇ 15,074 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಕರ್ನಾಟಕದ ಶೇ.44ರಷ್ಟು ಕೊವಿಡ್-19 ಪ್ರಕರಣಗಳು ಹಾಗೂ ಶೇ.53ರಷ್ಟು ಸಾವಿನ ಪ್ರಕರಣಗಳು ಬೆಂಗಳೂರಿಗೆ ಸಂಬಂಧಿಸಿದ್ದಾಗಿದೆ.
ಪ್ರತಿಕಾಯ ವ್ಯವಸ್ಥೆ ವೃದ್ಧಿಸುವ ನಿಟ್ಟಿನಲ್ಲಿ ಲಸಿಕೆ ವಿತರಣೆ
ಬೆಂಗಳೂರಿನಲ್ಲಿ ಕೊರೊನಾವೈರಸ್ ರೂಪಾಂತರ ತಳಿಯ ವಿರುದ್ಧ ಹೋರಾಟಬಲ್ಲ ಪ್ರತಿಕಾಯ ವ್ಯವಸ್ಥೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸುವುದು. ಅಗತ್ಯವಿರುವ ಫಲಾನುಭವಿಗಳಿಗೆ ಲಸಿಕೆ ಜೊತೆಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಡಿಸಿಎಂ ಅಶ್ವತ್ಥ ನಾರಾಯಣ್ ನೇತೃತ್ವದ ತಂಡವು ಚರ್ಚಿಸುತ್ತಿದೆ. ಲೈಫ್ ಸ್ಟ್ರಾಂಡ್ ಸೈನ್ಸಸ್ ಮುಖ್ಯಸ್ಥ ಡಾ. ವಂಶಿ ವೀರಮಚಾನೇನಿ ಮತ್ತು ರೋಹನ್ ಪೈಸ್ ರನ್ನು ಒಳಗೊಂಡ ತಂಡವು ಈ ನಿಟ್ಟಿನಲ್ಲಿ ಸಲಹೆ ನೀಡಿದೆ.
ಹಳೆ ಲಸಿಕೆಗೆ ಹೊಸ ರೂಪಾಂತರವನ್ನು ತಡೆಯುವ ಶಕ್ತಿ?
"ದೇಶದಲ್ಲಿ ಸದ್ಯಕ್ಕೆ ವುಹಾನ್ ನಗರದಲ್ಲಿ ಮೊದಲ ಪತ್ತೆಯಾಗಿರುವ ಕೊರೊನಾವೈರಸ್ ಸೋಂಕಿನ ತಳಿಯ ವಿರುದ್ಧ ಹೋರಾಡಬಲ್ಲ ಲಸಿಕೆಯನ್ನು ನೀಡಲಾಗುತ್ತಿದೆ. ರೂಪಾಂತರ ತಳಿಯ ವೈರಸ್ ಈ ಲಸಿಕೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳುವ ಶಕ್ತಿಯನ್ನು ಹೊಂದಿರುವ ಸಾಧ್ಯತೆಯಿದ್ದು, ರೂಪಾಂತರ ರೋಗಾಣುವಿನ ಮೇಲೆ ಹಳೆ ಲಸಿಕೆ ಅಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಕಷ್ಟಸಾಧ್ಯ. ಹೀಗಾಗಿ ಸದ್ಯಕ್ಕಿರುವ ಕೊವಿಡ್-19 ಲಸಿಕೆಗೆ ಮತ್ತಷ್ಟು ಶಕ್ತಿ ತುಂಬುವ ಅಥವಾ ಮತ್ತಷ್ಟು ಪರಿಣಾಮಕಾರಿಯಾದ ಲಸಿಕೆಯನ್ನು ಕಂಡು ಹಿಡಿಯಬೇಕಾದ ಅಗತ್ಯವಿದೆ" ವೈದ್ಯಕೀಯ ತಜ್ಞರ ತಂಡವು ಸಲಹೆ ನೀಡಿದೆ.
ಕೊರೊನಾದ ರೂಪಾಂತರ "ಡೆಲ್ಟಾ" ತಳಿಯಿಂದ ಯಾರಿಗೆ ಅಪಾಯ?
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಆದರೆ ಡೆಲ್ಟಾ ರೂಪಾಂತರ ತಳಿಯು ಮಕ್ಕಳಿಗೆ ಮಾತ್ರ ಹೆಚ್ಚು ಅಪಾಯವನ್ನು ಉಂಟು ಮಾಡುತ್ತದೆ, ಮಕ್ಕಳಲ್ಲಿ ಹೆಚ್ಚು ಸೋಂಕು ಅಂಟಿಕೊಳ್ಳುತ್ತದೆ ಎಂಬುದನ್ನು ಖಾತ್ರಿಪಡಿಸುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಮಕ್ಕಳು ಮಾತ್ರ ಡೆಲ್ಟಾ ರೂಪಾಂತರದಿಂದ ಹೆಚ್ಚು ಅಪಾಯವನ್ನು ಎದುರಿಸುತ್ತಾರೆ ಎಂಬುದಕ್ಕೆ ಪೂರಕವಾದ ಯಾವುದೇ ಸುಳಿವುಗಳು ಸಿಕ್ಕಿಲ್ಲ" ಎಂದು ಹೆಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸೆಂಟರ್ ಆಫ್ ಅಕೆಡೆಮಿಕ್ ರಿಸರ್ಚ್ ಡೀನ್ ಡಾ. ವಿಶಾಲ್ ರಾವ್ ಹೇಳಿದ್ದಾರೆ.
ರಾಜ್ಯದಲ್ಲಿ ಹೇಗಿದೆ ಕೊರೊನಾವೈರಸ್ ಸೋಂಕಿತ ಪ್ರಕರಣ
ಕರ್ನಾಟಕದಲ್ಲಿ ಒಂದು ದಿನದಲ್ಲಿ 11,958 ಮಂದಿಗೆ ಕೊವಿಡ್-19 ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 27,07,481ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 340 ಜನರು ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 31,920ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೂ 24,36,716 ಸೋಂಕಿತರು ಗುಣಮುಖರಾಗಿದ್ದು, 2,38,824 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Recommended Video
ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟು ಕೊವಿಡ್-19
ರಾಜ್ಯದಲ್ಲಿ ಒಟ್ಟು 11488 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 112, ಬಳ್ಳಾರಿ 267, ಬೆಳಗಾವಿ 355, ಬೆಂಗಳೂರು ಗ್ರಾಮಾಂತರ 292, ಬೆಂಗಳೂರು 1992, ಬೀದರ್ 13, ಚಾಮರಾಜನಗರ 209, ಚಿಕ್ಕಬಳ್ಳಾಪುರ 282, ಚಿಕ್ಕಮಗಳೂರು 365, ಚಿತ್ರದುರ್ಗ 294, ದಕ್ಷಿಣ ಕನ್ನಡ 408, ದಾವಣಗೆರೆ 380, ಧಾರವಾಡ 313, ಗದಗ 141, ಹಾಸನ 1108, ಹಾವೇರಿ 179, ಕಲಬುರಗಿ 67, ಕೊಡಗು 230, ಕೋಲಾರ 298, ಕೊಪ್ಪಳ 155, ಮಂಡ್ಯ 597, ಮೈಸೂರು 1213, ರಾಯಚೂರು 64, ರಾಮನಗರ 48, ಶಿವಮೊಗ್ಗ 1224, ತುಮಕೂರು 420, ಉಡುಪಿ 394, ಉತ್ತರ ಕನ್ನಡ 364, ವಿಜಯಪುರ 137, ಯಾದಗಿರಿ 37 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.