ನಮಗೇನು ಆಸೆ ಇರಲಿಲ್ಲ, ದೆಹಲಿ ನಾಯಕರು ನಿಮ್ಮ ಮಗನನ್ನು ಸಿಎಂ ಮಾಡ್ಬೇಕು ಅಂದಿದ್ರು: ದೇವೇಗೌಡ
ಬೆಂಗಳೂರು, ಜೂನ್ 21: ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ನಮಗೆ ಮೈತ್ರಿ ಸರ್ಕಾರವನ್ನು ರಚನೆ ಮಾಡಬೇಕು ಎಂದೇನು ಇರಲಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಹೊಸ ವರಸೆ ಆರಂಭಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರವನ್ನು ರಚನೆ ಮಾಡಬೇಕೆಂಬ ಯಾವ ಆಸೆಯೂ ನಮಗಿರಲಿಲ್ಲ, ದೆಹಲಿ ನಾಯಕರು ಬಂದು ನಿಮ್ಮ ಮಗನನ್ನು ಸಿಎಂ ಮಾಡಬೇಕು ಎಂದರು ವಿಧಿಯಿಲ್ಲದೆ ಒಪ್ಪಿಕೊಂಡೆವು ಎಂದು ಎಂದರು.
ಮೈತ್ರಿ ಸರ್ಕಾರ ಮಾಡಲು ನಾನು ಹೇಳಿರಲಿಲ್ಲ: ದೇವೇಗೌಡ ಅಸಮಾಧಾನ
ರಾಜ್ಯ ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ, ಎಲ್ಲವೂ ಕಾಂಗ್ರೆಸ್ ಪಕ್ಷದ ಮುಖಂಡರ ಕೈಯಲ್ಲಿದೆ, ರಾಜಕಾರಣದಲ್ಲಿ ಏಳು ಬೀಳು ಇದ್ದೇ ಇರುತ್ತದೆ ನನ್ನ ಜೊತೆ ಇದ್ದು, ನನ್ನ ಜೊತೆ ಬೆಳೆದವರು ಇಂದು ಬಿಟ್ಟು ಹೋಗಿದ್ದಾರೆ. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಬಾರದು ಎಂದು ಕಾಂಗ್ರೆಸ್ನವರು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಓಡೋಡಿ ಬಂದಿದ್ದರು ಎಂದು ವ್ಯಂಗ್ಯವಾಡಿದ್ದಾರೆ.
ಒಂದು ಮಂತ್ರಿ ಸ್ಥಾನವನ್ನೂ ಹೆಚ್ಚುವರಿಯಾಗಿ ಕಾಂಗ್ರೆಸ್ಗೆ ನಾವು ಬಿಟ್ಟುಕೊಟ್ಟಿದ್ದೇವೆ,ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಲೋಕಸಭಾ ಚುನಾವಣೆ ಬಳಿಕ ಸ್ವಲ್ಪ ಶಕ್ತಿ ಕಳೆದುಕೊಂಡಿದೆ. ನಾವು ಹೇಗೋ ಸಹಿಸಿಕೊಂಡು ಹೋಗುತ್ತಿದ್ದೇವೆ, ಮಧ್ಯಂತರ ಚುನಾವಣೆ ನಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ದೆಹಲಿಯಲ್ಲಿ ಕೂತು ಸಿದ್ದರಾಮಯ್ಯ ಹೂಡಿದ ದಾಳಕ್ಕೆ ಗಿರ್ರನೇ ತಿರುಗಿದ ರಾಜ್ಯ ಕಾಂಗ್ರೆಸ್ಸಿಗರು
ಶಾಸಕ ಮುನಿರತ್ನ ಮಾತನಾಡಿ, ಒನ್ ಥರ್ಡ್ ನಿಯಮ ಪಾಲಿಸುತ್ತಿಲ್ಲವೆಂದು ಅವರೇ ಹೇಳಿದ ಮೇಲೆ ಚುನಾವಣೆ ನಡೆಯಲಿ ಬಿಡಿ, ನೀವೇ ಮನೆ ಬಾಗಿಲಿಗೆ ಬಂದಿದ್ರಿ ಅನ್ನೋದನ್ನು ಬಿಡಬೇಕು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಎಲ್ಲರ ಮನಸ್ಸಿನಲ್ಲಿ ಮಧ್ಯಂತರ ಚುನಾವಣೆ ನಡೆಸುವ ಆಲೋಚನೆಯೇ ಇದ್ದಂತಿದೆ.