ಪಕ್ಷಾಂತರ ಕಾನೂನು ಬದಲಾವಣೆಗೆ ಪ್ರಮುಖರ ಸಭೆ ಸೇರಿಸಿದ ಸ್ಪೀಕರ್ ಕಾಗೇರಿ
ಬೆಂಗಳೂರು, ಮೇ 28: ಪಕ್ಷಾಂತರ ನಿಷೇಧ ಕಾಯ್ದೆ ಬದಲಾವಣೆಗಾಗಿ ಲೋಕಸಭಾ ಸ್ಪೀಕರ್ ಅವರಿಂದ ರಚಿಸಲಾದ ಸಮಿತಿ ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ಸಭೆ ನಡೆಸಿತು.
ಸಮಿತಿಯ ಸದಸ್ಯರೂ ಆಗಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಹಿರಿಯ ಶಾಸಕರು, ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ಕೋವಿಡ್19 ಚಿಕಿತ್ಸೆಯಲ್ಲಿ ಹಗರಣ: ಸ್ಪೀಕರ್ ಸಾಹೇಬ್ರ ನಡೆ ಅನುಮಾನಕ್ಕೆ ಎಡೆ
''ದೇಶದ ರಾಜಕಾರಣದಲ್ಲಿ ಪಕ್ಷಾಂತರ ಎಂಬುದು ಪೆಡಂಬೂತವಾಗಿ ಕಾಡುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳ ಕಳವಳಕಾರಿ ವಿಷಯವಾಗಿದೆ. ಇದು ರಾಷ್ಟ್ರ ಮಟ್ಟದ ಚಿಂತನೆಯ ವಿಷಯವಾಗಿದ್ದು, ಈ ಪಕ್ಷಾಂತರ ಕಾಯಿದೆಯನ್ನು ಮತ್ತಷ್ಟು ಕಠಿಣಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಲೋಕಸಭಾಧ್ಯಕ್ಷರಾದ ಓಂ ಬಿರ್ಲಾ ಅವರು ರಾಜಸ್ಥಾನದ ವಿಧಾನಸಭಾಧ್ಯಕ್ಷರಾದ ಡಾ. ಸಿ.ಪಿ.ಜೋಷಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದಾರೆ. ಅದರ ಸದಸ್ಯರಾಗಿರುವ ತಮಗೆ ಪಕ್ಷಾಂತರ ಕಾಯಿದೆ ಬದಲಾವಣೆ ಅಂಶಗಳ ಕುರಿತು ವರದಿ ಸಲ್ಲಿಸಲು ಸೂಚಿಸಲಾಗಿದೆ'' ಎಂದು ಕಾಗೇರಿ ತಿಳಿಸಿದರು.
ಸಾರ್ವಜನಿಕರಿಗೂ ಅವಕಾಶ
''ರಾಜಕೀಯ ಆಸಕ್ತಿವುಳ್ಳ ಸಾರ್ವಜನಿಕರಿಂದ ಸಹ ಪಕ್ಷಾಂತರ ಕಾಯಿದೆ ಕುರಿತ ಬದಲಾವಣೆಗಳ ಕುರಿತು ಅಭಿಪ್ರಾಯಗಳನ್ನು ತಿಳಿಸಲು ಜೂನ್ 10ರ ವರೆಗೆ ಅವಕಾಶ ನೀಡಲಾಗಿದ್ದು, ಜನ ಪ್ರತಿನಿಧಿಗಳಿಂದ ಸಹ ಸಲಹೆ ಸೂಚನೆಗಳನ್ನು ಪಡೆಯಲು ಸಭೆಯನ್ನು ಕರೆಯಲಾಗಿದ್ದು, ಪಕ್ಷಬೇಧ ಮರೆತು ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ'' ಸ್ಪೀಕರ್ ಮನವಿ ಮಾಡಿದರು.
ಪಕ್ಷಾಂತರ ಒಂದು ಶಾಪ: ಯಡಿಯೂರಪ್ಪ
ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಆರೋಗ್ಯಕರ ಜನತಾಂತ್ರಿಕ ವ್ಯವಸ್ಥೆಗೆ ಪಕ್ಷಾಂತರ ಒಂದು ಶಾಪ. ಪಕ್ಷಾಂತರ ನಿಷೇಧ ಕಾಯ್ದೆಯು ಎಂದಿಗಿಂತಲೂ ಇಂದು ಪ್ರಸ್ತುತವಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆಯು ಅಪ್ರಸ್ತುತ ಎಂಬ ವಿಚಾರವನ್ನು ನಾನು ಒಪ್ಪುವುದಿಲ್ಲ ಎಂದರು.
ರಾಜಕೀಯ ಅಧಿಕಾರ ಅನುಭವಿಸದಂತೆ ನೋಡಿಕೊಳ್ಳಬೇಕು
''ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವ ಅಧಿಕಾರ ವಿಧಾನಸಭೆಯ ಅಧ್ಯಕ್ಷರಿಗೇ ಇರಬೇಕು. ಅನರ್ಹಗೊಂಡ ಶಾಸಕರು ಹತ್ತು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಹಾಗೂ ಯಾವುದೇ ರಾಜಕೀಯ ಅಧಿಕಾರ ಅನುಭವಿಸದಂತೆ ನೋಡಿಕೊಳ್ಳಬೇಕು'' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.
ಸ್ಪೀಕರ್ ಪರಿಗಣಿಸುತ್ತಿಲ್ಲ; ಡಿಕೆ ಶಿವಕುಮಾರ್
''ಪಕ್ಷಾಂತರ ವಿಚಾರವಾಗಿ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪು, ಸಲಹೆಗಳು, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಆಗುತ್ತಿರುವ ಚರ್ಚೆ ಅಭಿಪ್ರಾಯಗಳ ಬಗ್ಗೆ ಸಮಿತಿ ರಚನೆಯಾಗಿ ನಮ್ಮ ಅಭಿಪ್ರಾಯ ಪಡೆಯಲು ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರು ಭಾಗವಹಿಸಿರಲಿಲ್ಲ. ಈ ವಿಚಾರದಲ್ಲಿ ಸ್ಪೀಕರ್ ಕಾಗೇರಿ ಅವರು ಯಾಕೆ ಅವರನ್ನು ಪರಿಗಣಿಸಿಲ್ಲವೊ ಗೊತ್ತಿಲ್ಲ. ಅವರೂ ಕೂಡ ಶಾಸಕರಂತೆ ಪ್ರತಿನಿಧಿಗಳಾಗಿದ್ದು, ಅವರ ಅಭಿಪ್ರಾಯ ಪರಿಗಣಿಸಬೇಕು'' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ