ಹೆಬ್ಬಾಳ ಚುನಾವಣೆ ಕಾಂಗ್ರೆಸ್ ನಾಯಕರಿಗೆ ಕಲಿಸಿದ್ದೇನು?
ಬೆಂಗಳೂರು, ಫೆಬ್ರವರಿ 17 : ಹೆಬ್ಬಾಳ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷದ ಒಳ ಜಗಳವನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. ಹಿರಿಯರು-ಕಿರಿಯರು, ಮೂಲ ಕಾಂಗ್ರೆಸಿಗರು-ವಲಸಿಗರ ನಡುವಿನ ವೈಯಕ್ತಿಕ ಪ್ರತಿಷ್ಠೆಯಿಂದಾಗಿ ಹೆಬ್ಬಾಳದಲ್ಲಿ ಕಮಲ ಅರಳಿದೆ. ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದೆ.
ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಬಿಜೆಪಿ ಹೆಬ್ಬಾಳ ಮತ್ತು ದೇವದುರ್ಗ ಕ್ಷೇತ್ರದಲ್ಲಿ ಜಯಗಳಿಸಿದೆ. ಬೀದರ್ನಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಯಶಸ್ಸು ಕಂಡಿದೆ. ಆದರೆ, ಹೆಬ್ಬಾಳದಲ್ಲಿ ಜಯಗಳಿಸಬೇಕು ಎಂಬ ಕಾಂಗ್ರೆಸ್ ತಂತ್ರ ಫಲ ಕೊಟ್ಟಿಲ್ಲ. [ಹೆಬ್ಬಾಳದಲ್ಲಿ ಕಾಂಗ್ರೆಸ್ ಬೀಳಲು ಏಳೇ 7 ಕಾರಣಗಳು!]
ಹೆಬ್ಬಾಳ ಕ್ಷೇತ್ರದ ಫಲಿತಾಂಶ ಕಾಂಗ್ರೆಸ್ ನಾಯರಿಗೆ ಕೆಲವೊಂದು ಪಾಠಗಳನ್ನು ಹೇಳಿಕೊಟ್ಟಿದೆ. ಕೆಲವು ಮುಖಂಡರ ವೈಯಕ್ತಿಕ ಪ್ರತಿಷ್ಠೆ, ಸಮನ್ವಯದ ಕೊರತೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಸಿ.ಕೆ.ಅಬ್ದುಲ್ ರೆಹಮಾನ್ ಷರೀಫ್ ಅವರ ಸೋಲಿಗೆ ಕಾರಣವಾಯಿತು ಎಂಬುದನ್ನು ಕಾಂಗ್ರೆಸ್ ನಾಯಕರು ಒಪ್ಪಿಕೊಳ್ಳಬೇಕು. [ಹೆಬ್ಬಾಳದಲ್ಲಿ ಸೋತ್ರೆ ರಾಜಕೀಯ ಭವಿಷ್ಯ ಮುಗಿದಂತೆ ಅಂದಿದ್ರು ಸಿದ್ದು!]
ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಫೆ.20ರಂದು 15 ಜಿಲ್ಲೆಗಳಲ್ಲಿ ನಡೆಯುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂಬ ನಂಬಿಕೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಹೆಬ್ಬಾಳ ಚುನಾವಣೆ ಕಾಂಗ್ರೆಸ್ ನಾಯಕರಿಗೆ ಕಲಿಸಿದ ಪಾಠವೇನು ಚಿತ್ರಗಳಲ್ಲಿ ನೋಡಿ..... [ಸಿದ್ದರಾಮಯ್ಯ ಸರ್ಕಾರಕ್ಕೆ ತೀವ್ರ ಮುಖಭಂಗ, ಟೈಂ ಸರಿ ಇಲ್ಲ ಕಂಡ್ರಿ!]
ಹಿರಿಯರು-ಕಿರಿಯರ ನಡುವಿನ ಸಮರ
ಹೆಬ್ಬಾಳ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಹಿರಿಯ ಮತ್ತು ಕಿರಿಯ ಕಾಂಗ್ರೆಸಿಗರ ನಡುವಿನ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೈರತಿ ಸುರೇಶ್ ಅವರಿಗೆ ಟಿಕೆಟ್ ನೀಡಲು ಬಯಸಿದ್ದರು. ಆದರೆ, ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಷರೀಫ್ ಅವರು ದೆಹಲಿಗೆ ಹೋಗಿ ಮೊಮ್ಮಗ ರೆಹಮಾನ್ ಷರೀಫ್ ಅವರಿಗೆ ಟಿಕೆಟ್ ಕೊಡಿಸಿದರು.
ಸಿದ್ದರಾಮಯ್ಯ ಅವರನ್ನು ದೂರಬಹುದು
ಚುನಾವಣೆ ಫಲಿತಾಂಶದ ಬಳಿಕ ಹಿರಿಯ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರನ್ನು ದೂರಬಹುದು. ತಾವು ಸೂಚಿಸಿದ ಅಭ್ಯರ್ಥಿಗೆ ಟಿಕೆಟ್ ಸಿಗಲಿಲ್ಲ ಎಂದು ಸಿದ್ದರಾಮಯ್ಯ ಮೌನವಾದರು. ಹೆಬ್ಬಾಳದಲ್ಲಿ ಅಭ್ಯರ್ಥಿಯ ಗೆಲುವಿಗಾಗಿ ಅವರು ಸಾಕಷ್ಟು ಪ್ರಯತ್ನ ನಡೆಸಿಲ್ಲ ಎಂದು ಆರೋಪಿಸಬಹುದು. ಇದು ಮತ್ತೊಂದು ಸುತ್ತಿನ ಅಸಮಾಧಾನಗಳಿಗೆ ಕಾರಣವಾಗಬಹುದು.
ಆಡಳಿತದತ್ತ ಗಮನ ಹರಿಸಿ
ಹೆಬ್ಬಾಳ ಚುನಾವಣಾ ಫಲಿತಾಂಶ ಕಾಂಗ್ರೆಸ್ ಆಡಳಿತದತ್ತ ಗಮನ ಹರಿಸಬೇಕು ಎಂಬುದನ್ನು ಸೂಚಿಸಿದೆ. ಅದರಲ್ಲೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ನದ್ದೇ ಆಡಳಿತವಿದೆ. ಬಿಬಿಎಂಪಿ ಆಡಳಿತ ಸಮರ್ಪಕವಾಗಿಲ್ಲ ಎಂಬುದನ್ನು ಬೆಂಗಳೂರು ಜನರು ಕಾಂಗ್ರೆಸ್ಗೆ ತೋರಿಸಿಕೊಟ್ಟಿದ್ದಾರೆ.
ಮೂಲ ಮತ್ತು ವಲಸಿಗ ಕಾಂಗ್ರೆಸಿಗರ ಸಮರ
ಹೆಬ್ಬಾಳ ಚುನಾವಣೆಯ ಫಲಿತಾಂಶ ಹಿರಿಯರು-ಕಿರಿಯರು, ಮೂಲ ಕಾಂಗ್ರೆಸಿಗರು ವಲಸಿಗರ ನಡುವಿನ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಪಕ್ಷದ ಹಲವು ಹಿರಿಯ ನಾಯಕರು ಸಿದ್ದರಾಮಯ್ಯ ಅವರನ್ನು ಇನ್ನೂ ವಲಸಿಗರು ಎಂಬಂತೆ ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಗೊಂದಲ ಮಾಡಿಕೊಳ್ಳಬಾರದು ಎಂಬುದು ಪಕ್ಷಕ್ಕೆ ಪ್ರಮುಖ ಪಾಠವಾಗಿದೆ.
ಗೆಲುವಿನ ಅಂತರವೆಷ್ಟು?
ಹೆಬ್ಬಾಳ ಕ್ಷೇತ್ರದಲ್ಲಿ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರು 19,149 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಪಡೆದ ಮತಗಳ ವಿವರ
*
ವೈ.ಎ.ನಾರಾಯಣಸ್ವಾಮಿ
-
60367
*
ರೆಹಮಾನ್
ಷರೀಫ್
-
41,218
(ಕಾಂಗ್ರೆಸ್)
*
ಇಸ್ಮಾಯಿಲ್
ಷರೀಫ್
-
3666
(ಜೆಡಿಎಸ್)
ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ
ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಫೆ.20ರಂದು 15 ಜಿಲ್ಲೆಗಳಲ್ಲಿ ನಡೆಯುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂಬ ನಂಬಿಕೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಈಗಾಗಲೇ 1 ಹಂತದ ಜಿಲ್ಲಾ ಮತ್ತು ತಾಲುಕು ಪಂಚಾಯಿತಿ ಚುನಾವಣೆ ಮುಗಿದಿದ್ದು, ಫೆ.23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.