ಮಾನನಷ್ಟ ಮೊಕದ್ದಮೆ; ಸಂಸದ ಪ್ರತಾಪ್ ಸಿಂಹಗೆ ವಾರಂಟ್
ಬೆಂಗಳೂರು, ಫೆಬ್ರವರಿ 24: ಜನ ಪ್ರತಿನಿಧಿಗಳಿಗಾಗಿ ಇರುವ ನಗರ ವಿಶೇಷ ನ್ಯಾಯಾಲಯವು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ವಾರಂಟ್ ಜಾರಿ ಮಾಡಿದೆ. ನಟ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿರುವ ಪ್ರಕಾಶ್ ರಾಜ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಾರಂಟ್ ನೀಡಲಾಗಿದೆ.
ಮೈಸೂರು ನಗರ ಕಮಿಷನರ್ ಗೆ ವಾರಂಟ್ ಜಾರಿ ಮಾಡುವಂತೆ ಕೋರ್ಟ್ ನಿರ್ದೇಶಿಸಿದೆ. ಮತ್ತು ಬಿಜೆಪಿ ಸಂಸದ ಪ್ರತಾಪ್ ಸಿಂಹರನ್ನು ಮಾರ್ಚ್ 19ರಂದು ಹಾಜರುಪಡಿಸಬೇಕು ಎಂದು ತಿಳಿಸಲಾಗಿದೆ. ಈ ಹಿಂದೆ ಜನವರಿ 21ರಂದು ಆದೇಶ ನೀಡಿ, ಫೆಬ್ರವರಿ 23ರಂದು ಕೋರ್ಟ್ ಮುಂದೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಪ್ರತಾಪ್ ಸಿಂಹ ಕೋರ್ಟ್ ಗೆ ಬಂದಿರಲಿಲ್ಲ.
ಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ ಮಾನನಷ್ಟ ಮೊಕದ್ದಮೆ
ಕಳೆದ ವರ್ಷ ಮೈಸೂರು ಕೋರ್ಟ್ ನಲ್ಲಿ ಪ್ರಕಾಶ್ ರಾಜ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪ್ರತಾಪ್ ಸಿಂಹ ವಿರುದ್ಧ ಒಂದು ರುಪಾಯಿ ಮಾನ ನಷ್ಟ ಪರಿಹಾರಕ್ಕಾಗಿ ಕೇಳಿದ್ದರು. ಪ್ರಕಾಶ್ ರಾಜ್ ಅವರು ಖಾಸಗಿತನವನ್ನು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಉಲ್ಲಂಘಿಸಿದ್ದಾರೆ ಎಂದು ಪ್ರಕಾಶ್ ರಾಜ್ ಆರೋಪ ಮಾಡಿದ್ದರು.
ಪ್ರತಾಪ್ ಸಿಂಹ ಹಾಲಿ ಸಂಸದರಾಗಿರುವುದರಿಂದ ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಈ ಪ್ರಕರಣವನ್ನು ಬೆಂಗಳೂರು ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು.