ದೀಪ, ಆಕಾಶಬುಟ್ಟಿಗಳದ್ದೇ ಕಾರುಬಾರು, ಹೂವು-ಹಣ್ಣು ಬೆಲೆ ಇಳಿಕೆ
ಬೆಂಗಳೂರು, ಅಕ್ಟೋಬರ್ 26: ದೀಪಗಳ ಹಬ್ಬ ದೀಪಾವಳಿಗೆ ಕ್ಷಣಗಣನೆ ಆರಂಭವಾಗಿದೆ. ಮಾರುಕಟ್ಟೆ ತುಂಬಾ ಹೂವು-ಹಣ್ಣು, ದೀಪ, ಆಕಾಶಬುಟ್ಟಿಗಳದ್ದೇ ಕಾರುಬಾರು.
ಮಾರ್ಕೆಟ್ನ ಅಂಗಡಿಗಳಲ್ಲಿ ತೋರಣಗಳಂತೆ ಸಿಂಗಡಿಸಿಕೊಂಡ ವೈವಿಧ್ಯಮಯ ಆಕಾಶ ಬುಟ್ಟಿಗಳು, ರಸ್ತೆಯುದ್ದಕ್ಕೂ ವಿವಿಧ ನಮೂನೆಯ ದೀಪಗಳು , ಗೃಹಲಂಕಾರಿಕ ವಸ್ತುಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ.
ಇನ್ನು ಸತತವಾಗಿ ಸುರಿಯುತ್ತಿರುವ ಮಳೆಗೆ ತರಕಾರಿ , ಹೂವು ಹಾಗೂ ಹಣ್ಣಿನ ಬೆಲೆ ಇಳಿಕೆಯಾಗಿದೆ. ದಸರಾ ಹಬ್ಬಕ್ಕೆ ಹೋಲಿಸಿದರೆ ದೀಪಾವಳಿ ಹಬ್ಬಕ್ಕೆ ಹೂವುಗಳ ಬೆಲೆ ಶೇ.40ರಷ್ಟು ಕಡಿಮೆಯಾಗಿದೆ.
ಹಬ್ಬದ ಹಿಂದಿನ ದಿನ ಮಾರುಕಟ್ಟೆಯಲ್ಲಿ ನೂಕುನುಗ್ಗಲು ಹೆಚ್ಚಾಗುವುದರಿಂದ ಸಂಜೆಯಾಗುತ್ತಲೇ ಮಾರ್ಕೆಟ್ನತ್ತ ಜನಸಂದಣಿ ಹೆಚ್ಚಿರುತ್ತದೆ. ನಗರದ ಕೆಆರ್ ಮಾರುಕಟ್ಟೆ , ಮಲ್ಲೇಶ್ವರ, ಜಯನಗರ, ವಿಜಯನಗರ, ಗಾಂಧಿ ಬಜಾರ್ ಸೇರಿದಂತೆ ಪ್ರಮುಖ ವಹಿವಾಟು ಕೇಂದ್ರಗಳು ಜನರಿಂದ ತುಂಬಿ ತುಳುಕುತ್ತಿವೆ. ಆಕಾಶಬುಟ್ಟಿಗಳು 200ರಿಂದ 1000 ರೂ ವರೆಗೂ ಲಭ್ಯವಿದೆ.
ಮಳೆಯಿಂದಾಗಿ ಸೇವಂತಿಗೆ ಹೂವಿನ ದರದಲ್ಲಿ ಭಾರಿ ಕುಸಿತ ಕಂಡಿದೆ. ಏಲಕ್ಕಿ ಬಾಳೆ , ತರಕಾರಿ ಮತ್ತಿತರೆ ಪದಾರ್ಥಗಳೂ ಕಡಿಮೆ ಬೆಲೆಗೆ ದೊರಕುತ್ತಿವೆ. ದೀಪಾವಳಿ ಹಬ್ಬಕ್ಕೂ ಮುನ್ನ ಬರುವ ಮಹಾಲಕ್ಷ್ಮೀ ಗೌರಿ. ಗಣೇಶ ಹಾಗೂ ವಿಜಯದಶಮಿಗೆ ಹೂವಿನ ಬೆಲೆ ದುಬಾರಿಯಾಗಿತ್ತು. ದೀಪಾವಳಿಯಲ್ಲಿ ಹೂವಿನ ಬಳಕೆ ಕಡಿಮೆ ಇರುವುದರಿಂದ ಬೆಲೆ ಇಳಿಕೆಯಾಗಿದೆ. ಇನ್ನು ತರಕಾರಿ ಬೆಲೆಯೂ ಸಾಮಾನ್ಯವಾಗಿ ಎಲ್ಲವೂ 30 ರೂ. ಒಳಗಿದೆ.