ಕೆ.ಆರ್.ಮಾರುಕಟ್ಟೆಯಲ್ಲಿ ವಿದ್ಯಾರ್ಥಿಗಳಿಗೆ ಕೊಲೆ ಬೆದರಿಕೆ
ಪ್ರತಿ ಸೋಮವಾರ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬಿಬಿಎಂಪಿಯ ಅಧಿಕಾರಿಗಳು ನಗರದ ಕೆ.ಆರ್.ಮಾರುಕಟ್ಟೆಯನ್ನು ಸ್ವಚ್ಛಗೊಳಿಸುತ್ತಾರೆ. ಅದರಂತೆ ಇಂದು ಜ್ಯೋತಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳು ಮಾರುಕಟ್ಟೆ ಸ್ಚಚ್ಛತೆಗೆ ತೆರಳಿದ್ದಾರೆ.
ಈ ವೇಳೆ ತರಕಾರಿ ವ್ಯಾಪಾರಿಗಳಾದ ಬಸವರಾಜ್ ಮತ್ತು ರೋಹಿತ್ ಎಂಬುವವರು ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಮತ್ತು ಅವ್ಯಾಚ್ಯಾ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ ಮತ್ತು ಬಿಬಿಎಂಪಿಯ ಹಿರಿಯ ಅಧಿಕಾರಿಗಳ ಜೊತೆಯೂ ವ್ಯಾಪಾಸ್ಥರು ಮಾತಿನ ಚಕಮಕಿ ನಡೆಸಿದ್ದಾರೆ. ಈ ಘಟನೆ ಹಿನ್ನಲೆಯಲ್ಲಿ ಮೇಯರ್ ಕೆ.ಆರ್.ಮಾರುಕಟ್ಟೆ ವ್ಯಾಪಾರಸ್ಥರ ಅಸೋಶಿಯೇಷನ್ ತುರ್ತು ಸಭೆಯನ್ನು ಕರೆದಿದ್ದಾರೆ.
ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಕಳೆದ 6 ವಾರಗಳಿಂದ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳು ಕೆ.ಆರ್.ಮಾರುಕಟ್ಟೆಯನ್ನು ಸ್ವಚ್ಛಗೊಳಿಸುತ್ತಿದ್ದರು. ಅದರಂತೆ ಈ ಸೋಮವಾರ ಸಹ ಜ್ಯೋತಿ ಕಾಲೇಜಿನ ವಿದ್ಯಾರ್ಥಿಗಳು ಮಾರುಕಟ್ಟೆ ಸ್ವಚ್ಛಗೊಳಿಸಲು ಆಗಮಿಸಿದ್ದರು.
ಮಾರುಕಟ್ಟೆ ಬಂದ್ ಎಚ್ಚರಿಕೆ : ಮಾರುಕಟ್ಟೆ ವ್ಯಾಪಾರಿಗಳು ಸ್ವಚ್ಛತಾ ಕಾರ್ಯಕ್ಕೆ ಆಡಚಣೆ ಉಂಟುಮಾಡಿದರೆ, ಮಾರುಕಟ್ಟೆಯನ್ನು ಒಂದು ವಾರಗಳ ಕಾಲ ಮುಚ್ಚುವುದಾಗಿ ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ ಎಚ್ಚರಿಕೆ ನೀಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಬಿಬಿಬಿಂಪಿ ಅಧಿಕಾರಿಗಳು ಸ್ವಚ್ಚತಾ ಕಾರ್ಯಕ್ಕೆ ಬಂದಾಗ ವ್ಯಾಪಾರಿಗಳು ಸಹಕಾರ ನೀಡುವುದಿಲ್ಲ ಎಂದು ಮೇಯರ್ ದೂರಿದ್ದಾರೆ.