ಡಿಸಿಎಂಗಳ ನೇಮಕ ಮಾಡಿದ್ದು ಹೈಕಮಾಂಡ್, ನಾನಲ್ಲ:ಯಡಿಯೂರಪ್ಪ
ಬೆಂಗಳೂರು, ಅಕ್ಟೋಬರ್ 30: ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಿದ್ದು ಬಿಜೆಪಿ ಹೈಕಮಾಂಡ್, ನಾನಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಪ್ರೆಸ್ಕ್ಲಬ್ ಆಫ್ ಬೆಂಗಳೂರು ಹಾಗೂ ವರದಿಗಾರರ ಕೂಟ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಾಕ್ರಮದಲ್ಲಿ ಮಾತನಾಡಿದ ಅವರು, ಮೂವರು ಡಿಸಿಎಂಗಳ ನೇಮಕವನ್ನು ನಾನು ಮಾಡಿಲ್ಲ, ಹೈಕಮಾಂಡ್ ಮಾಡಿದೆ ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನನಗೆ ಹೈಕಮಾಂಡ್ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ. ರಾಷ್ಟ್ರೀಯ ಪಕ್ಷವಾದ್ದರಿಂದ ಇತಿಮಿತಿಗಳು ಇರುತ್ತವೆ ಅಷ್ಟೇ ಎಂದು ಹೇಳಿದ್ದಾರೆ.
ಪ್ರಾಣ ಹೋದರೂ ಬಿಟ್ಟು ಕೊಡಲ್ಲ: ಬಿಎಸ್ವೈಗೆ ಡಿ.ಕೆ.ಶಿವಕುಮಾರ್ ಚಾಲೆಂಜ್
ನೆರೆಪರಿಹಾರದ ವಿಚಾರದಲ್ಲಿ ಸರ್ಕಾರದಿಂದ ಜಾಹೀರಾತು ಕೊಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೆರೆ ಸಂತ್ರಸ್ತರ ಪರಿಹಾರದ ವಿಚಾರದಲ್ಲಿ ವಿಪಕ್ಷಗಳು ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿವೆ.
ಹಾಗಾಗಿ ಜಾಹೀರಾತು ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ನೆರೆ ಸಂತ್ರಸ್ತ್ರರ ವಿಚಾರವಾಗಿ ಏನೇ ಸಲಹೆ ಇದ್ದರೂ ನಮಗೆ ಮುಕ್ತವಾಗಿ ಸಲಹೆ ನೀಡಬಹುದು ಎಂದು ಹೇಳಿದರು. ಸ್ಪೀಕರ್ಗೆ ಸಲಹೆ ನೀಡುತ್ತೇನೆ.
ರಾಜ್ಯದಲ್ಲಿ ಹಿಂದೆಂದೂ ಕಾಣದ ಪ್ರವಾಹ ಬಂದಿದೆ
ರಾಜ್ಯದಲ್ಲಿ ಹಿಂದೆಂದೂ ಕಾಣದ ಪ್ರವಾಹ ಬಂದಿದೆ. ಸಂತ್ರಸ್ತರಿಗೆ ರಾಜ್ಯ ಸರ್ಕಾರ ಪುನರ್ವಸತಿ ಒದಗಿಸಿಕೊಡಲು ಆದ್ಯತೆ ನೀಡಿದೆ. ವಿಪರ್ಯಾಸವೆಂದರೆ 18 ಜಿಲ್ಲೆಗಳ 49 ತಾಲೂಕುಗಳು ಬರಪೀಡಿತವಾಗಿವೆ. ಬರಸಂತ್ರಸ್ತರ ನಿತ್ಯಬಳಕೆಯ ವೆಚ್ಚಕ್ಕಾಗಿ 10 ಸಾವಿರ ರೂಪಾಯಿ ನೀಡಲಾಗಿದೆ.
ಬೆಳೆ ಹಾನಿಗೆ ಪ್ರತಿ ಹೆಕ್ಟೇರ್ಗೆ 10 ಸಾವಿರ ರೂ
ಬೆಳೆಹಾನಿಗೆ ಪ್ರತಿ ಹೆಕ್ಟೇರ್ಗೆ 10 ಸಾವಿರ ರೂ.ಹೆಚ್ಚು ನೀಡಿದ್ದೇವೆ. ರಾಜ್ಯ ಸರ್ಕಾರ ನೆರೆಪ್ರವಾಹವನ್ನು ಸಮರ್ಪಕವಾಗಿ ನಿರ್ವಹಿಸಿದ್ದು 2949 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದರು.
ಆರ್ಥಿಕ ಪರಿಸ್ಥಿತಿ ಸುಧಾರಣೆ
ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಿದೆ. ನೆರೆ ಪರಿಹಾರಕ್ಕೆ ಹಣದ ಕೊರತೆ ಇಲ್ಲ. ಆಯಾ ಜಿಲ್ಲೆಗಳ ಜಿಲ್ಲಾಡಳಿತದ ಬಳಿ 1027 ಕೋಟಿ ರೂ.ಇದೆ. ರಾಜ್ಯದಲ್ಲಿ ಹೂಡಿಕೆದಾರರಿಗೆ ಕೊರತೆ ಇಲ್ಲ. ನಿರುದ್ಯೋಗ ಪ್ರಮಾಣ 0.7 ಶೇ.ರಷ್ಟಿದೆ. ಕೇಂದ್ರ ಗೃಹಸಚಿವ ಅಮಿತ್ ಷಾ ಮತ್ತು ನಿರ್ಮಲಾ ಸೀತಾರಾಮನ್ ವೈಮಾನಿಕ ಸಮೀಕ್ಷೆ ಮಾಡಿದ್ದು 2969 ಕೋಟಿ ರೂ.ನೆರೆ ಪರಿಹಾರ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹ
ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿತ್ತು. 5 ಜಿಲ್ಲೆಗಳಲ್ಲಿ ಬರ ಇತ್ತು. ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಎನ್ಡಿಆರ್ಎಫ್ ನಿಯಮಾವಳಿಗಿಂತ ಹಚ್ಚು ಮೊತ್ತ ನೀಡಲು ಸರ್ಕಾರ ತೀರ್ಮಾನ ಮಾಡಿದೆ. ದೇಶದ ಇತಿಹಾಸದಲ್ಲೇ ಎನ್ಡಿಆರ್ಎಫ್ ನಿಯಮಾವಳಿಗಿಂತ ಹೆಚ್ಚು ಪರಿಹಾರವನ್ನು ಯಾವುದೇ ಸರ್ಕಾರ ನೀಡಿರಲಿಲ್ಲ. ಬೆಳೆ ಹಾನಿಗೆ ಎನ್ಡಿಆರ್ಎಫ್ ನಿಯಮಾವಳಿಗಿಂತ ಪ್ರತಿ ಹೆಕ್ಟೇರ್ಗೆ 10,000 ರೂಪಾಯಿ ಹೆಚ್ಚು ನೀಡಿದ್ದೇವೆ ಎಂದು ಯಡಿಯೂರಪ್ಪ ಮಾಹಿತಿ ನೀಡಿದರು.