ಗಣೇಶೋತ್ಸವ ವೇಳೆ ಶಾಂತಿಭಂಗ ಆದರೆ ಅಧಿಕಾರಿಗಳೆ ಹೊಣೆ ಎಂದ ಡಿಸಿಎಂ
ಬೆಂಗಳೂರು, ಸೆಪ್ಟೆಂಬರ್ 12: ಗಣೇಶ ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಆಯಾ ವಲಯದ ಡಿಸಿಪಿ ಹಾಗೂ ಎಸಿಪಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.
ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಹಾಯಕ ಪೊಲೀಸ್ ಆಯುಕ್ತರು ಮತ್ತು ಮೇಲ್ಮಟ್ಟ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಗಣೇಶ ಹಬ್ಬಕ್ಕೆ ಈಗಾಗಲೇ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯ ಸಿದ್ಧತೆ ನಡೆಸಿದೆ.
ಅದ್ದೂರಿ ಸ್ವರ್ಣಗೌರಿ ವ್ರತಕ್ಕೆ 16 ಸಲಹೆ: ಚಿತ್ರಮಾಹಿತಿ
ನಗರದಲ್ಲಿ ಎಸಿಪಿಗಳು ಕಡ್ಡಾಯವಾಗಿ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಬೇಕು. ಅಲ್ಲದೆ, ಕಡ್ಡಾಯವಾಗಿ ಗಸ್ತು ಹೋಗುವಂತೆ ಎಸಿಪಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಗೂಂಡಾಕಾಯಿದೆ ಅಡಿಯಲ್ಲಿ 14 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ 3 ಪ್ರಕರಣ ಡ್ರಗ್ ಮಾರಾಟಗಾರರ ಮೇಲೆ ಹಾಕಲಾಗಿದೆ. ಅದೇರೀತಿ ಸರಗಳ್ಳರ ಮೇಲೂ ಗೂಂಡಾಕಾಯಿದೆ ಪ್ರಯೋಗಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ 31.87 ಕೋಟಿ ರು. ಹಣ, ಚಿನ್ನ ವಶಕ್ಕೆ ಪಡೆಯಲಾಗಿದೆ. ನಗರದಲ್ಲಿ ಅಪರಾಧ ಪ್ರಕರಣಗಳು ಕೂಡ ಸಾಕಷ್ಟು ಇಳಿಕೆಯಾಗಿವೆ ಎಂದರು.
ವಿಸರ್ಜನೆಯ ಬಳಿಕವೂ ಗಿಡವಾಗಿ ನೆಲೆ ನಿಲ್ಲುವ ಪರಿಸರ ಸ್ನೇಹಿ ಗಣಪ
ಈ ಸಾಲಿನಲ್ಲಿ 151 ಗಾಂಜಾ ಕೇಸ್ಗಳು ದಾಖಲಾಗಿದ್ದು, 531 ಕೆಜಿ ಗಾಂಜಾ, ಕೊಕೇನ್ ವಶಕ್ಕೆ ಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ 298 ಜನರನ್ನು ಬಂಧಿಸಿದ್ದೇವೆ . ಈ ಪೈಕಿ 28 ವಿದೇಶಿಗರು ಇದ್ದಾರೆ ಎಂದರು. ಇನ್ನು, ವೀಸಾ ಅವಧಿ ಮುಗಿದರೂ ನಗರದಲ್ಲೇ ಇರುವ 107 ವಿದೇಶಿಗರ ವಿರುದ್ಧ ಪ್ರಕರಣ ದಾಖಲಿಸಿದ್ದು, ಶೀಘ್ರವೆ ಅವರನ್ನು ಅವರ ದೇಶಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಟ್ರಾಫಿಕ್ನಲ್ಲಿ 54, 86, 854 ಪ್ರಕರಣ ದಾಖಲಾಗಿದ್ದು, 55 ಕೋಟಿ ರು. ದಂಡ ಸಂಗ್ರಹಿಸಿದ್ದೇವೆ. ಟ್ರಾಫಿಕ್ ನಿರಗವಹಣೆಗಾಗಿ ಹೊಸದಾಗಿ ಅಡಾಪ್ಟಿವ್ ಸಿಗ್ನಲ್ ಕ್ಯಾಮರಾ ಅಳವಡಿಕೆ, ಟ್ರಾಫಿಕ್ ಪೊಲೀಸರಿಗೆ ಬಾಡಿ ಕ್ಯಾಮರಾ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಗೌರಿ - ಗಣೇಶನನ್ನು ಬರಮಾಡಿಕೊಳ್ಳಲು ಸಜ್ಜಾದ ಸಾಂಸ್ಕೃತಿಕ ನಗರಿ
ಪೊಲೀಸ್ ಕಾನ್ಸ್ಟೇಬಲ್ ಸಮಸ್ಯೆ ಆಲಿಸಲು ತಿಂಗಳಲ್ಲಿ ಕನಿಷ್ಠ 2 ವಾರ ಪೆರೇಡ್ ನಡೆಸಬೇಕೆಂದೂ ಸೂಚನೆ ನೀಡಿರುವುದಾಗಿ ಹೇಳಿದರು. ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಲೇ ಇದೆ ಎಂದರು.