ನಮ್ಮ ಸ್ಟ್ರಾಟಜಿ ವರ್ಕೌಟ್ ಆಗಿದೆ ಎಂದ ಡಿಸಿಎಂ ಪರಮೇಶ್ವರ
ಬೆಂಗಳೂರು, ಜುಲೈ 22: ನಮ್ಮ ಸ್ಟ್ರಾಟಜಿ ವರ್ಕೌಟ್ ಆಗಿದೆ ಎಂದು ಉಪ ಮುಖ್ಯಮಂತ್ರಿ ಜಿ ಪರಮೇಶ್ವರ ಹೇಳಿದ್ದಾರೆ.
ವಿಧಾನಸಭೆ ಕಲಾಪಕ್ಕೂ ತೆರಳುವ ಮುನ್ನ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತಣಾಡಿದ ಅವರು, ನಮ್ಮ ಸ್ಟ್ರಾಟಜಿ ಫರ್ಸ್ಟ್ ಕ್ಲಾಸ್ ಆಗಿ ವರ್ಕೌಟ್ ಆಗಿದೆ ಎಂದು ಹೇಳಿದ್ದಾರೆ.
ಹಾಗಾದರೆ ಅವರ ಸ್ಟ್ರಾಟಜಿ ಏನಾಗಿತ್ತು ಎಂದು ಗಮನಿಸುವುದಾದರೆ ಹೀಗೆ ದಿನಾ ದಿನ ಕಲಾಪವನ್ನು ಮುಂದೂಡುವುದು, ಕೊನೆಗೆ ಹೇಗಾದರೂ ಮಾಡಿ ಅಂತ್ಯದಲ್ಲಿ ರಾಜೀನಾಮೆ ನೀಡಿರುವ ಶಾಸಕರನ್ನು ಮತ್ತೆ ವಿಶ್ವಾಸಕ್ಕೆ ಪಡೆದುಕೊಳ್ಳುವ ಆಲೋಚನೆಯಲ್ಲಿ ದೋಸ್ತಿ ಸರ್ಕಾರವಿತ್ತು.
ಇದೀಗ ಸುಪ್ರೀಂಕೋರ್ಟ್ ಅತೃಪ್ತ ಶಾಸಕರ ಅರ್ಜಿಯನ್ನು ಇಂದು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವುದು ದೋಸ್ತಿ ಸರ್ಕಾರಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ.
ಆದರೆ ಕಲಾಪಕ್ಕೂ ಮುನ್ನ ಸ್ಪೀಕರ್ ರಮೇಶ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ಇಂದು ಏನೇ ಆಗಲಿ ವಿಶ್ವಾಸಮತವನ್ನು ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದರು.
ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಅತೃಪ್ತ ಶಾಸಕರ ಅರ್ಜಿಯನ್ನು ವಿಚಾರಣೆ ನಡೆಸಲು ಇಂದು ಸಾಧ್ಯವಿಲ್ಲ ಎಂದು ಹೇಳಿದೆ. ಮಂಗಳವಾರವಾದರೂ ಅರ್ಜಿ ವಿಚಾರಣೆಗೆ ಬರಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಕಲಾಪ ಆರಂಭವಾಗಿದೆ. ತಮ್ಮ ಶಾಸಕರಿಗೆ ವಿಪ್ ಕೊಡುವ ಅಧಿಕಾರ ಇದೆ ಎಂದು ಸ್ಪೀಕರ್ ಹೇಳಿದ್ದಾರೆ.
ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರು ವಿಶ್ವಾಸಮತ ಯಾಚನೆಗೆ ಎರಡು ದಿನ ಕಾಲಾವಕಾಶ ಬೇಕು ಎಂದು ಕೇಳಿದ್ದಾರೆ. ಆದರೆ ಸ್ಪೀಕರ್ ರಮೇಶ್ ಕುಮಾರ್ ವಿಶ್ವಾಸಮತ ವಿಳಂಬದ ಕುರಿತು ಬೇಸರ ವ್ಯಕ್ತಪಡಿಸಿದ್ದು, ಮಧ್ಯಾಹ್ನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.