ಕುಮಾರಸ್ವಾಮಿಯ ಭೇಟಿಯಾದ ಡಿಸಿಎಂ, ಡಿಕೆಶಿ: ಮಹತ್ವದ ಮಾತುಕತೆ
ಬೆಂಗಳೂರು, ಎಪ್ರಿಲ್ 25: ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಇಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಭೇಟಿಯಾದರು. ಈ ಸಮಯ ರಾಜ್ಯ ರಾಜಕಾರಣದ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ಉಂಟಾಗಿರುವ ಆತಂಕದ ಬಗ್ಗೆ ಪ್ರಮುಖವಾಗಿ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಪರಮೇಶ್ವರ್ ಅವರು ಸಂಧಾನ ಸೂತ್ರವನ್ನು ಮುಂದಿಟ್ಟಿದ್ದು, ಈ ಕುರಿತೆ ಡಿಕೆ.ಶಿವಕುಮಾರ್ ಹಾಗೂ ಸಿಎಂ ಚರ್ಚೆ ನಡೆಸಿದ್ದಾರೆ.
ರಮೇಶ್ ಜಾರಕಿಹೊಳಿ ಪರ ಡಿಕೆ.ಶಿವಕುಮಾರ್ ಬಳಿ ಪರಮೇಶ್ವರ್ ಮಾತುಕತೆ
ಪ್ರಸಕ್ತ ರಾಜಕೀಯ ಹೊರತುಪಡಿಸಿ, ಬೆಂಗಳೂರಿನಲ್ಲಿ ಮಳೆ ಎದುರಿಸಲು ಸಿದ್ಧತೆ, ಬೆಂಗಳೂರಿನ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಕುಡಿಯುವ ನೀರಿನ ಸಮಸ್ಯೆ, ರಾಜ್ಯದ ಜಲಾಶಯಗಳ ನೀರಿನ ಲಭ್ಯತೆ ಮತ್ತು ಹಲವು ವಿಷಯಗಳ ಕುರಿತು ಈ ಸಂದರ್ಭದಲ್ಲಿ ಚರ್ಚಿಸಿದರು ಎಂದು ಸಿಎಂ ಕಚೇರಿ ತಿಳಿಸಿದೆ.
ನಂತರ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಇಂದು ತಮ್ಮ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ಅವರೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಡಿಕೆಶಿ ಯಾವ ಲೆಕ್ಕ, ನಮ್ ರೇಂಜ್ ಏನಿದ್ರೂ ರಾಹುಲ್ ಗಾಂಧಿ: ಜಾರಕಿಹೊಳಿ
ರಾಜ್ಯದಲ್ಲಿ ನ ಬರ ಪರಿಸ್ಥಿತಿ, ಕೈತೊಳ್ಳುತ್ತಿರುವ ಪರಿಹಾರ ಕ್ರಮಗಳು, ವಿವಿಧ ಅಭವೃದ್ಧಿ ಕಾಮಗಾರಿಗಳು, ಶ್ರೀಲಂಕಾ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ, ಆಯವ್ಯಯದಲ್ಲಿ ಘೋಷಿಸಿದ ಕಾರ್ಯಕ್ರಮಗಳ ಅನುಷ್ಠಾನ ಮತ್ತಿತರ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಚರ್ಚಿಸಿದರು.
ಸ್ವಲ್ಪ ದಿನದಲ್ಲೇ ಒಳ್ಳೆಯ ಸುದ್ದಿ ಕೊಡ್ತೀನಿ ಎಂದ ರಮೇಶ್ ಜಾರಕಿಹೊಳಿ
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಾಲಮನ್ನಾ ಯೋಜನೆ ಪ್ರಗತಿ ಕುರಿತು ಮಾಹಿತಿ ಪಡೆದರು. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹಲವು ಗ್ರಾಮಗಳಲ್ಲಿ ರೈತರು ವಿದ್ಯುತ್ ಸಮಸ್ಯೆ ಕುರಿತು ತಮ್ಮ ಗಮನ ಸೆಳೆದ ಬಗ್ಗೆ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು ಈ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.