ಬ್ಯಾಕ್ಲಾಗ್ ಹುದ್ದೆ ಭರ್ತಿ ಮಾಡದಿದ್ದರೆ ಸರ್ಕಾರ ಏನೂ ಮಾಡುತ್ತೆ ಗೊತ್ತಾ?
ಬೆಂಗಳೂರು. ಜ.17 : ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು, ಸಹಕಾರ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ 2508 ಬ್ಯಾಕ್ ಲಾಗ್ ಹುದ್ದೆಗಳನ್ನು ಒಂದು ತಿಂಗಳೊಳಗೆ ನೇಮಕಾತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ಇದಲ್ಲದೆ ಅನುದಾನಿತ ಕಾಲೇಜುಗಳಲ್ಲಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು 2 ತಿಂಗಳೊಳಗೆ ಭರ್ತಿ ಮಾಡಬೇಕು. ಇಲ್ಲದಿದ್ದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನಿತ ಸಂಸ್ಥೆಗಳಲ್ಲಿನ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂಬ ಎಚ್ಚರಿಯನ್ನು ಕಾರಜೋಳ ಅವರು ಕೊಟ್ಟಿದ್ದಾರೆ.
ಮಾಜಿ ಅನರ್ಹರಿಗೆ ಸಚಿವ ಸ್ಥಾನ: ಉಲ್ಟಾ ಹೊಡೆದ ಉಪ ಮುಖ್ಯಮಂತ್ರಿ
ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿ ಕುರಿತು ಇಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯ ಬಳಿಕ ಅವರು ಮಾತನಾಡಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ 882 ಹುದ್ದೆ, ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ 432, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ 346, ಲೋಕೋಪಯೋಗಿ ಇಲಾಖೆಯಲ್ಲಿ 184, ಸಾರಿಗೆ ಇಲಾಖೆಯಲ್ಲಿ 178, ಸಹಕಾರ ಇಲಾಖೆಯಲ್ಲಿ 132, ರೇಷ್ಮೆ ಇಲಾಖೆಯಲ್ಲಿ 120, ನಗರಾಭಿವೃದ್ಧಿ ಇಲಾಖೆಯಲ್ಲಿ 34, ತೋಟಗಾರಿಕೆ ಇಲಾಖೆಯಲ್ಲಿ 34, ಐಟಿಬಿಟಿಯಲ್ಲಿ 32, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 27, ಇಂಧನ ಇಲಾಖೆಯಲ್ಲಿ 25, ಅರಣ್ಯ ಇಲಾಖೆಯಲ್ಲಿ 23, ಕೃಷಿ ಇಲಾಖೆಯಲ್ಲಿ 20, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 18, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ 7, ಗೃಹ ಇಲಾಖೆಯಲ್ಲಿ 5, ಪಶುಸಂಗೋಪನೆ ಇಲಾಖೆ, ಡಿಪಿಎಆರ್, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ತಲಾ 2 ಹುದ್ದೆ ಹಾಗೂ ಹಣಕಾಸು ಇಲಾಖೆಯಲ್ಲಿ 1 ಹುದ್ದೆಯು ಬ್ಯಾಕ್ ಲಾಗ್ ಹುದ್ದೆಗಳಾಗಿವೆ.
ಈ ಹುದ್ದೆಗಳನ್ನು ಒಂದು ತಿಂಗಳೊಳಗೆ ಭರ್ತಿ ಮಾಡಬೇಕು. ಅನುದಾನಿತ ಕಾಲೇಜುಗಳಲ್ಲಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು 2 ತಿಂಗಳೊಳಗೆ ಭರ್ತಿ ಮಾಡಬೇಕು. ಅನುದಾನಿತ ಶಿಕ್ಷಣ ಸಂಸ್ಥೆಗಳು ಮುಂದಾಗದಿದ್ದರೆ ಸಮಾಜ ಕಲ್ಯಾಣ ಇಲಾಖೆಯಿಂದ ಭರ್ತಿ ಮಾಡಲಾಗುವುದು. ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗೆ 15 ದಿನಗಳೊಳಗೆ ಅನುಮತಿ ನೀಡಬೇಕು. ಲೋಕೋಪಯೋಗಿ ಇಲಾಖೆಯಲ್ಲಿರುವ ಬ್ಯಾಕ್ ಲಾಗ್ ಹುದ್ದೆಗಳು ಸಿ ಗುಂಪಿನ ತಾಂತ್ರಿಕೇತರ ಹುದ್ದೆಗಳಾಗಿರುವುದರಿಂದ ಇಲಾಖೆಯಿಂದಲೇ ಕೂಡಲೇ ಮೆರಿಟ್ ಆಧಾರದಡಿ ನೇಮಕಾತಿ ಪ್ರಕ್ರಿಯೆಗೆ ಕ್ರಮಕೈಗೊಳ್ಳಬೇಕು. ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ವಿಶೇಷ ನಿಯಮಾವಳಿ ರೂಪಿಸಲಾಗಿದೆ. ವಿನಾಯಿತಿಯನ್ನು ನೀಡಲಾಗಿದೆ. ಹಣಕಾಸು ಇಲಾಖೆಯ ಅನುಮತಿಯ ಅಗತ್ಯವೂ ಇಲ್ಲ. ಈ ಹುದ್ದೆಗಳ ನೇಮಕಾತಿಗೆ ಯಾವುದೇ ತಾಂತ್ರಿಕ ತೊಡಕು ಇರುವುದಿಲ್ಲ. ಕೂಡಲೇ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲು ಕ್ರಮಕೈಗೊಳ್ಳಬೇಕು. ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗೆ ಯಾವುದೇ ತಾಂತ್ರಿಕ ಕಾರಣ ಹೇಳದೇ ಭರ್ತಿ ಮಾಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.