ಬಡವರ ಮಕ್ಕಳ ಊಟಕ್ಕೆ ಕಲ್ಲು ಬಿತ್ತು: ಡಿಸಿಎಂ ಕಾರಜೋಳ
ಬೆಂಗಳೂರು, ಅ. 12: ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಬದಲಾವಣೆ ಮಾಡಲಾಗಿದೆ. ಅವರಲ್ಲಿದ್ದ ಆರೋಗ್ಯ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರಿಗೆ ವಹಿಸಲಾಗಿದೆ.
ಡಿಸಿಎಂ ಗೋವಿಂದ್ ಕಾರಜೋಳ ಅವರ ಬಳಿಯಿದ್ದ ಸಮಾಜ ಕಲ್ಯಾಣ ಖಾತೆಯನ್ನು ಶ್ರೀರಾಮುಲು ಅವರಿಗೆ ವಹಿಸಲಾಗಿದೆ. ಇಂದು ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಡಿಸಿಎಂ ಗೋವಿಂದ್ ಕಾರಜೋಳ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ನನ್ನ ಬಳಿ ಹೆಚ್ಚುವರಿಯಾಗಿತ್ತು ಅದನ್ನು ಈಗ ಶ್ರೀರಾಮುಲು ಅವರಿಗೆ ಕೊಡಲು ಸಿಎಂ ಉದ್ದೇಶಿಸಿದ್ದಾರೆ. ಸಮಾಜ ಕಲ್ಯಾಣ ಹಾಗು ಹಿಂದುಳಿದ ವರ್ಗಗಳ ಇಲಾಖೆ ಎರಡೂ ಒಂದೆ.
ಹಾಗಾಗಿ ಆ ಎರಡೂ ಇಲಾಖೆಗಳನ್ನು ಒಬ್ಬರೇ ನಿರ್ವಹಣೆ ಮಾಡುವುದು ಸೂಕ್ತ ಎಂದು ಶ್ರೀರಾಮುಲು ಅವರಿಗೆ ನೀಡಿದ್ದಾರೆ. ಅದೇ ರೀತಿ ಆರೋಗ್ಯ ಮತ್ರು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಎರಡೂ ಸಹ ಒಬ್ಬರಲ್ಲೇ ಇರುವುದು ಸೂಕ್ತ ಎಂದು ಗೋವಿಂದ ಕಾರಜೋಳ ಹೇಳಿಕೆ ಕೊಟ್ಟಿದ್ದಾರೆ.
ಆಡಳಿತದ ದೃಷ್ಟಿಯಿಂದ ಅನುಕೂಲವಾಗುತ್ತದೆ ಎಂದು ಅದನ್ನು ಡಾ. ಸುಧಾಕರ್ ಅವರಿಗೆ ನೀಡಿದ್ದಾರೆ. ಹೆಚ್ಚುವರಿಯಾಗಿದ್ದ ಖಾತೆ ನೀಡಿದ್ದರಿಂದ ನನಗೆ ಯಾವುದೇ ಬೇಸರವಿಲ್ಲ.
ಆದರೆ ಕೋವಿಡ್ ಕಾರಣದಿಂದಾಗಿ ಈ ವರ್ಷ ಬಡವರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮಕ್ಕಳ ಶಿಕ್ಷಣ ಹಾಳಾಯ್ತು ಅನ್ನೋದೊಂದೇ ನನಗೆ ಬೇಸರ.
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟಲ್ ಹಾಗೂ ವಸತಿ ಶಾಲೆಗಳಲ್ಲಿ ಸಾವಿರಾರು ಮಕ್ಕಳಿಗೆ ಶಿಕ್ಷಣ ಊಟ ಹಾಗು ವಸತಿ ಸಿಗುತ್ತಿತ್ತು, ಈ ವರ್ಷ ಅದಕ್ಕೆ ಕಲ್ಲು ಬಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.