ಬುಡಕಟ್ಟು ಜನಾಂಗದ ಜೀವನೋಪಾಯಕ್ಕೆ ನೆರವು ನೀಡಲು ಕೇಂದ್ರಕ್ಕೆ ಮನವಿ
ಬೆಂಗಳೂರು, ಮೇ.12: ನೊವೆಲ್ ಕೊರೊನಾ ವೈರಸ್ ಸೋಂಕು ಮತ್ತು ಭಾರತ ಲಾಕ್ ಡೌನ್ ನಡುವೆ ಪರಿಶಿಷ್ಟ ಪಂಗಡ ಹಾಗೂ ಬುಡಕಟ್ಟು ಸಮುದಾಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಜನರ ಜೀವನೋಪಾಯ ಆರ್ಥಿಕ ಸ್ವಾವಲಂಬನೆಗೆ 155 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳ ಬಗ್ಗೆ ಕಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ರಾಜ್ಯ ಸರ್ಕಾರವು ಸಲ್ಲಿಸಿದ ಈ ಪ್ರಸ್ತಾವನೆಯನ್ನು ಶೀಘ್ರವಾಗಿ ಮಂಜೂರು ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಮನವಿ ಮಾಡಿಕೊಂಡಿದ್ದಾರೆ. ಕೇಂದ್ರ ಬುಡಕಟ್ಟು ಕಲ್ಯಾಣ ಸಚಿವ ಶ್ರೀ ಜುವಲ್ ಓರಾಂ ಜೊತೆ ವೀಡಿಯೋ ಸಂವಾದದಲ್ಲಿ ಅವರು ಚರ್ಚೆ ನಡೆಸಿದ್ದರು.
ಕೇರಳದಲ್ಲಿ ಕೊರೊನಾ ಸೋಂಕಿತರೆಲ್ಲ ಗುಣಮುಖ: ವಿಶ್ವಕ್ಕೆ ಮಾದರಿಯಾದ ಭಾರತ
ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವ ಬುಡಕಟ್ಟು ಜನರನ್ನು ಸಂಘಟಿಸಿ ತರಬೇತಿ ನೀಡಿ, ಸಾಮರ್ಥ್ಯ ವೃದ್ದಿಸುವ ಮೂಲಕ ಸ್ವಾವಲಂಬಿಗೊಳಿಸಬೇಕು. ಕಿರು ಅರಣ್ಯ ಉತ್ಪನ್ನಗಳನ್ನು ಹೆಚ್ಚಿನ ಬೆಂಬಲ ಬೆಲೆಯಲ್ಲಿ ಖರೀದಿಸುವುದಕ್ಕಾಗಿ 7 ಕೋಟಿ ಅನುದಾನ ಘೋಷಿಸಬೇಕು ಎಂದು ಡಿಸಿಎಂ ಮನವಿ ಮಾಡಿಕೊಂಡಿದ್ದಾರೆ.
2 ಕೋಟಿ ರೂಪಾಯಿ ವೆಚ್ಚದ 7 ಕಿರು ಅರಣ್ಯ ಉತ್ಪನ್ನ ಸಂಸ್ಕರಣಾ ಘಟಕಗಳನ್ನು ಸಿಆರ್ ಟಿಆರ್ಐ ಮೂಲಕ ಸ್ಥಾಪಿಸಿ ತಾಂತ್ರಿಕ ಸಹಕಾರದ ಜೊತೆಗೆ ಅನುಷ್ಟಾನಗೊಳಿಸಬೇಕು. 355 ಇ-ಕಾರ್ಟ್ ಒದಗಿಸಬೇಕು. 41 ಕೋಟಿ ರೂ. ವೆಚ್ಚದ ಕುರಿ ಮತ್ತು ಮೇಕೆ ಘಟಕಗಳ ಸ್ಥಾಪಿಸಬೇಕು. ನೀರಾವರಿ ಸೌಲಭ್ಯ, ಶಿಥಿಲಗೊಂಡ ಆಶ್ರಮ ಶಾಲೆಗಳ ದುರಸ್ಥಿಗೊಳಿಸುವ ಪ್ರಸ್ತಾವನೆ ಸೇರಿ ಒಟ್ಟು 155 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಕಿರು ಅರಣ್ಯ ಉತ್ಪನ್ನ ಸಂಗ್ರಹಣೆ, ಅಗತ್ಯ ಮೂಲಭೂತ ಸೌಲಭ್ಯ ಅಭಿವೃದ್ಧಿ, ಮೌಲ್ಯವರ್ಧನೆ, ಮಾರುಕಟ್ಟೆ ಸೃಜಿಸುವುದು, ಅಭಿವೃದ್ಧಿ ಪಡಿಸುವ ಹಿನ್ನೆಲೆ ವನ-ಧನ ವಿಕಾಸ ಕೇಂದ್ರಗಳನ್ನು ಸ್ಥಾಪಿಸುವುದು. ಈ ಮೂಲಕ ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವ ಬುಡಕಟ್ಟು ಜನರನ್ನು ಸಂಘಟಿಸಿ ತರಬೇತಿಗೊಳಿಸಬೇಕು.
ರಾಜ್ಯದಲ್ಲಿ 23 ಕಿರು ಅರಣ್ಯ ಉತ್ಪನ್ನಗಳು ದೊರಕುತ್ತಿವೆ. 23 ಲ್ಯಾಂಪ್ಸ್ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, 74,500 ಸದಸ್ಯರಿದ್ದಾರೆ. ಬುಡಕಟ್ಟು ಜನಾಂಗದವರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ, ಮಾಸ್ಕ್ ಗಳನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು.