ಬೆಂಗಳೂರಿನ ಸ್ಯಾಂಕಿ ಕೆರೆಗೆ 12 ವರ್ಷಗಳ ಬಳಿಕ ಬಾಗಿನ ಅರ್ಪಣೆ
ಬೆಂಗಳೂರು, ಅ. 22: ಕೆರೆಗಳು ಅಳಿದು ಬೆಂಗಳೂರು ಬೆಳೆಯುತ್ತಿದೆ. ಬೆಂಗಳೂರಿನ ಪ್ರಮುಖ ಜಲಮೂಲಗಳಾಗಿದ್ದ ಕೆರೆಗಳಲ್ಲಿ ಕೆಲವು ಮಾತ್ರ ಈಗ ಉಳಿದಿವೆ. ಹಾಗೆ ಉಳಿದುಕೊಂಡಿರುವ ಕೆಲವೇ ಕೆರೆಗಳಿಂದ ಬೆಂಗಳೂರಿನಲ್ಲಿ ಅಲ್ಪಸ್ವಲ್ಪವಾದರೂ ಪರಿಸರ ಸಮತೋಲನವಾಗುತ್ತಿದೆ. ಹೀಗೆ ಪರಿಸರ ರಕ್ಷಣೆಗೆ ತನ್ನದೇ ಆದ ಕೊಡುಗೆ ಕೊಡುತ್ತಿರುವ ಪ್ರಮುಖ ಕೆರೆಗಳಲ್ಲಿ ಒಂದು ಸ್ಯಾಂಕಿ ಟ್ಯಾಂಕಿ.
ಹನ್ನೆರಡು ವರ್ಷಗಳ ನಂತರ ತುಂಬಿ ಕೋಡಿ ಹರಿದಿರುವ, ಮೈತುಂಬಾ ಮಂಜು ಹೊದ್ದುಕೊಂಡು ನೋಡುಗರ ಮನ ಸೂರೆಗೊಳ್ಳುತ್ತಿರುವ ಬೆಂಗಳೂರಿನ ಮಲ್ಲೇಶ್ವರದ ಈ ಸ್ಯಾಂಕಿ ಕೆರೆಗೆ ಸ್ಥಳೀಯ ಶಾಸಕ, ಡಿಸಿಎಂ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು ಇಂದು ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು. ಸ್ಯಾಂಕಿ ಕೆರೆಗೆ ಪೂಜೆ ಸಲ್ಲಿಸಿದ ಅವರು, ನಗರದಲ್ಲಿ ಉತ್ತಮ ಮಳೆಯಾಗಿ ಇಡೀ ನಗರ ಹಚ್ಚಹಸಿರಿನಿಂದ ಕಂಗೊಳಿಸಲಿ. ಇಡೀ ರಾಜ್ಯದಲ್ಲಿ ಸಮೃದ್ಧಿ ಮೂಡಲಿ. ಮಲ್ಲೇಶ್ವರ ಜನರ ಉಸಿರಾಗಿರುವ ಈ ಕೆರೆ ಸದಾ ಹಸಿರಾಗಿರಲಿ ಎಂದು ಪ್ರಾರ್ಥಿಸಿದರು.
ದಾವಣಗೆರೆಯಲ್ಲಿ ಧಾರಾಕಾರ ಮಳೆ: ನದಿ ತೀರದ ಜನರಿಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ
ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿಯಂತೆ, ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಂತೆ ಹಾಗೂ ದಕ್ಷಿಣ ಭಾರತದ ಹೆಸರಾಂತ ಪ್ರವಾಸಿ ತಾಣ ಊಟಿಯಂತೆ ದಟ್ಟವಾದ ಮಂಜಿನಿಂದ ಕಂಗೊಳಿಸುತ್ತಿದ್ದ ಸ್ಯಾಂಕಿ ಕೆರೆಯನ್ನು ಕಂಡು ಸ್ಥಳೀಯರೂ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಎಲ್ಲೆಡೆ ಇಂಗು ಗುಂಡಿ ಮಾಡಲಾಗುವುದು
ನಗರದಲ್ಲಿ ಉತ್ತಮ ಮಳೆಯಾಗಿದ್ದರಿಂದ ಸ್ಯಾಂಕಿ ಕೆರೆ ಕೆರೆ ತುಂಬಿದೆ. ಇದರಿಂದ ಈ ಭಾಗದ ಜನರಿಗೆ ಸಂತೋಷವಾಗಿದೆ. ಇಂಥ ಸಂದರ್ಭದಲ್ಲಿ ತಾಯಿ ಗಂಗೆಗೆ ಪೂಜೆ ಸಲ್ಲಿಸಿದ್ದು ಸಂತಸ ಉಂಟು ಮಾಡಿದೆ. ಭವಿಷ್ಯದಲ್ಲಿ ನಗರದಲ್ಲಿ ಸುರಿಯುವ ನೀರು ವ್ಯರ್ಥವಾಗದಂತೆ ಸಂಗ್ರಹ ಮಾಡಲು ಎಲ್ಲೆಡೆ ಇಂಗು ಗುಂಡಿಗಳನ್ನು ಮಾಡಲಾಗುವುದು. ಕೆರೆಗಳಲ್ಲಿ ನೀರು ಸಂಗ್ರಹಣ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು. ಪ್ರತಿ ವರ್ಷ ಈ ಕೆರೆಯೂ ಸೇರಿ ಎಲ್ಲ ಕೆರೆಗಳೂ ಕೋಡಿ ಹರಿಯಲಿ ಎಂದರು.
ಕೆರೆ ತುಂಬಿದ್ದು ಹೇಗೆ?
ಕೆರೆಯ ಜಲಾನಯನ ಪ್ರದೇಶವಾದ ಸದಾಶಿವನಗರ, ಅರಣ್ಯ ಭವನ ಸೇರಿದಂತೆ ವಿವಿಧ ಭಾಗಗಳಲ್ಲಿ ಸುರಿದ ಮಳೆನೀರು ವ್ಯರ್ಥವಾಗಿ ಹರಿದುಹೋಗುತ್ತಿತ್ತು. ಆ ಭಾಗಗಳಿಂದ ನೀರು ಹರಿದುಬರಲು ಇದ್ದ ಕಾಲುವೆಗಳು ಹೂಳು, ಕಸದಿಂದ ಮುಚ್ಚಿ ಹೋಗಿದ್ದವು. ಅವುಗಳನ್ನು ಸರಿಮಾಡಿ ಕೆರೆ ಕಡೆಗೆ ನೀರು ಹರಿಸುವ ಹಾಗೆ ಮಾಡಿದ್ದರಿಂದ ಇದೀಗ ಸ್ಯಾಂಕಿ ಕೆರೆ ತುಂಬಿದೆ.
ಕಾಮಗಾರಿ ಪರಿಶೀಲನೆ ಮಾಡಿದ ಡಿಸಿಎಂ
ಬಾಗಿನ ಅರ್ಪಿಸಿದ ನಂತರ ಕೆರೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸ್ಯಾಂಕಿ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷ ರಂಗನಾಥ, ಪಾಲಿಕೆ ಮುಖ್ಯ ಎಂಜಿನಿಯರ್ ಮೋಹನ್ ಕೃಷ್ಣ, ಬಿಬಿಎಂಪಿ ಜಂಟಿ ಆಯುಕ್ತ (ಪಶ್ಚಿಮ) ಚಿದಾನಂದ, ಬಿಬಿಎಂಪಿ ಮಾಜಿ ಸದಸ್ಯೆ ಸುಮಂಗಲ ಮುಂತಾದವರು ಉಪಸ್ಥಿತರಿದ್ದರು.
ರಾಜಕೀಯದ ಮಾತು
ಇದೇ ಸಂದರ್ಭದಲ್ಲಿ ಉಪ ಚುನಾವಣೆಯ ಕುರಿತು ಹಾಗೂ ಪ್ರವಾಹ ಪರಿಸ್ಥಿತಿಯ ಕುರಿತು ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರು ಮಾತನಾಡಿರು. ರಾಜ್ಯದಲ್ಲಿ ಸ್ಥಿರ ಸರಕಾರವಿದ್ದು ಅಭಿವೃದ್ಧಿ ಸರಿಯಾದ ದಿಕ್ಕಿನಲ್ಲಿಯೇ ನಡೆಯುತ್ತಿದೆ. ನಗರದಲ್ಲಿ ಮಳೆಯಿಂದ ಉಂಟಾಗಿರುವ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಲಾಗುವುದು. ಜನರಿಗೆ ಯಾವುದೇ ತೊಂದರೆ ಆಗದಂತೆ ಸರಕಾರ ನೋಡಿಕೊಳ್ಳುತ್ತದೆ ಎಂದರು.
Recommended Video