20 ಲಕ್ಷ ಕೋಟಿ ನವಭಾರತ ನಿರ್ಮಾಣಕ್ಕೆ ನಾಂದಿ ಎಂದ ಡಿಸಿಎಂ
ಬೆಂಗಳೂರು, ಮೇ.12: ನೊವೆಲ್ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ನಾಲ್ಕನೇ ಅವಧಿಯ ಭಾರತ ಲಾಕ್ ಡೌನ್ ಮುಂದುವರಿಕೆ ಆಗುತ್ತದೆ ಎಂದು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ಘೋಷಿಸಿದ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಗೆ ಡಿಸಿಎಂ ಆಶ್ವತ್ಥ್ ನಾರಾಯಣ್ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ರೈತರು, ಕಾರ್ಮಿಕರು ಮತ್ತು ಸಣ್ಣ ಉದ್ಯಮಿದಾರರಿಗೆ ಹೊಸ ಭರವಸೆ ಮತ್ತು ಚೈತನ್ಯ ತುಂಬಿಸಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥ ನಾರಾಯಣ್ ಪ್ರತಿಪಾದಿಸಿದ್ದಾರೆ.
20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಣೆಗೆ ಬಿಎಸ್ ವೈ ಅಭಿನಂದನೆ
ಲೋಕಲ್ ಸೇ ಗ್ಲೋಬಲ್ ಎನ್ನುವ ಮೋದಿ ಅವರ ಘೋಷಣೆ ಐತಿಹಾಸಿಕ. ಲೋಕಲ್ ಉತ್ಪನ್ನಗಳಿಗೆ ವೋಕೋಲ್ (ಬಾಯಿ ಮಾತಿನ ಪ್ರಚಾರ) ಬಲವಿರಲಿ ಎಂಬುದು ನಮ್ಮ ಆದ್ಯತೆಯಾಗಬೇಕು ಎಂದು ಅವರು ಪ್ರತಿಪಾದಿಸಿರುವುದು ನವಭಾರತದ ಉದಯಕ್ಕೆ ನಾಂದಿ ಹಾಡಿದ್ದಾರೆಂದು ಡಿಸಿಎಂ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವವನ್ನೇ ಒಂದು ಪರಿವಾರ ಎಂದ ಪ್ರಧಾನಿ ಬಗ್ಗೆ ಶ್ಲಾಘನೆ:
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ತತ್ವದ ಮಹತ್ವವನ್ನು ಇಡೀ ಜಗತ್ತಿಗೆ ಸಾರಿ ಹೇಳಿದ್ದಾರೆ. ಇಡೀ ಜಗತ್ತು ಒಂದು ಪರಿವಾರ ಎಂದು ಹೇಳುವ ಮೂಲಕ ಪ್ರಧಾನಿಯು ಕೃಷ್ಣಂ ವಂದೇ ಜಗದ್ಗುರಂ ಎಂಬ ಕೃಷ್ಣತತ್ವವನ್ನು ಇಡೀ ಜಗತ್ತಿಗೇ ಸಾರಿದ್ದಾರೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.
ಕೊರೊನಾ ನಂತರ ಹೊಸ ಭಾರತ, ಸ್ವಾವಲಂಬಿ ಭಾರತ ಉದಯವಾಗಲಿದೆ. ಸಶಕ್ತ ಭಾರತ ಉದಯವಾಗಲಿದೆ. ದೇಶದ ಪ್ರತಿಯೊಬ್ಬ ಪ್ರಜೆಯ ಆಶೋತ್ತರದಂತೆ ಪ್ರಧಾನಿ ಈ ಪ್ಯಾಕೇಜ್ ಘೋಷಿಸಿದ್ದಾರೆ. ದೇಶದ ರಕ್ತಗತ ಕಸುಬು ಆಗಿರುವ ಕೃಷಿ ಹಾಗೂ ಉತ್ಪಾದನಾ ಕ್ಷೇತ್ರಕ್ಕೆ ಪ್ಯಾಕೇಜ್ ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಇದನ್ನು ಪ್ರತಿಯೊಬ್ಬರು ಸ್ವಾಗತಿಸಬೇಕಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.
ದೇಶದ ಪ್ರತಿ ರಾಜ್ಯದ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿದ ನಂತರ ಪ್ರಧಾನಿ ಪ್ಯಾಕೇಜ್ ಘೋಷಿಸಿದ್ದಾರೆ. ಹೀಗಾಗಿ ಪ್ರತಿರಾಜ್ಯವೂ ಪ್ರಧಾನಿಯವರ ಆಶೋತ್ತರಗಳನ್ನು ಜನರಿಗೆ ತಲುಪಿಸಬೇಕು ಎಂಬುದು ನನ್ನ ಆಶಾ ಭಾವನೆಯಾಗಿದೆ ಎಂದು ಅಶ್ವತ್ಥ ನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ.