ಲಾಕ್ಡೌನ್ ನಡುವೆ ನಿಖಿಲ್ ಕುಮಾರ್ ಮದುವೆ: ಡಿಸಿಎಂ ಅಶ್ವತ್ಥ್ ನಾರಾಯಣ ಎಚ್ಚರಿಕೆ
ಬೆಂಗಳೂರು, ಏಪ್ರಿಲ್ 16: ಎಲ್ಲ ಅಂದುಕೊಂಡಂತೆ ಆಗಿದ್ದರೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಮದುವೆ ಏಪ್ರಿಲ್ 17 ರಂದು ಅದ್ಧೂರಿಯಾಗಿ ನಡೆಯಬೇಕಿತ್ತು. ಆದರೆ, ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ಜಾಗತಿಕ ಮಟ್ಟದಲ್ಲಿ ಸಮಸ್ಯೆ ತಂದ ಹಿನ್ನಲೆ, ಸರಳ ವಿವಾಹ ಮಾಡಲು ನಿರ್ಧರಿಸಿದ್ದಾರೆ.
ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದು, ಸಭೆ ಮತ್ತು ಸಮಾರಂಭಗಳನ್ನು ಮಾಡಬಾರದು ಎಂದು ಸರ್ಕಾರ ಆದೇಶಿಸಿದೆ. ಸರಳ ವಿವಾಹಕ್ಕೆ ಅನುಮತಿ ಸಿಕ್ಕರೂ 20-30 ಜನರು ಸೇರುವಂತಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮಗನ ಮದುವೆ ಮುಂದೂಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ನಿಶ್ಚಿಯವಾಗಿದ್ದ ದಿನಾಂಕದಲ್ಲೆ ಮದುವೆ ನೆರವೇರಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ.
ನಿಖಿಲ್ ಮದುವೆಗೆ 2ದಿನ ಮುನ್ನ ಸ್ಥಳ ಬದಲಾವಣೆ ಮಾಡಿದ ಕುಮಾರಸ್ವಾಮಿ
ಈ ಕುರಿತು ಕರ್ನಾಟಕ ಉಪಮುಖ್ಯಮಂತ್ರಿ ಡಿಸಿಎಂ ಅಶ್ವತ್ಥ್ ನಾರಾಯಣ ರಾಮನಗರದ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಕೊವಿಡ್ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ನಿಗಾವಹಿಸಿ ಎಂದು ಸೂಚಿಸಿದ್ದಾರೆ. ಮುಂದೆ ಓದಿ....
ರಾಮನಗರದಲ್ಲಿ ನಿಖಿಲ್ ಕಲ್ಯಾಣ
ಏಪ್ರಿಲ್ 17 ರಂದು ರಾಮನಗರದ ಕೇತಿಗಾನಹಳ್ಳಿ ಫಾರಂ ಹೌಸ್ನಲ್ಲಿ ನಿಖಿಲ್ ಕುಮಾರ್ ಮತ್ತು ರೇವತಿ ಕಲ್ಯಾಣ ನಡೆಸಲು ಕುಮಾರಸ್ವಾಮಿ ಕುಟುಂಬ ನಿರ್ಧರಿಸಿದೆ. ಬೆಂಗಳೂರಿನಲ್ಲಿ ವಿವಾಹ ನಡೆಯಬೇಕಿತ್ತು. ಆದರೆ, ಕೊರೊನಾ ಹಾಟ್ಸ್ಪಾಟ್ನಲ್ಲಿ ಬೆಂಗಳೂರಿನ ಹೆಸರು ಇರುವುದರಿಂದ ಇಲ್ಲಿಂದ ರಾಮನಗರಕ್ಕೆ ಸ್ಥಳಾಂತರವಾಗಿದೆ. ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಪ್ರಧಾನಿ ಕುಟುಂಬದ ವಿವಾಹವಾಗಿರುವುದರಿಂದ, ಹೆಚ್ಚು ಜನರು ಭಾಗಿಯಾಗುವ ಸಾಧ್ಯತೆ ಇದೆ. ಹಾಗಾಗಿ, ಈ ಮದುವೆಗೆ ಕೊರೊನಾ ಸೋಂಕಿನ ಆತಂಕ ಕಾಡುತ್ತಿದೆ.
|
ಕೊವಿಡ್ ಮಾರ್ಗಸೂಚಿ ಉಲ್ಲಂಘಸಿದರೆ ಕ್ರಮ
'ನಿಖಿಲ್ ಕುಮಾರ್ ಮದುವೆ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಚಿತ್ರೀಕರಿಸಲು ಸ್ಥಳೀಯ ಅಧಿಕಾರಿಗಳು ಸೂಚಿಸಲಾಗುತ್ತೆ. ಒಂದು ವೇಳೆ ಕೊವಿಡ್ ಮಾರ್ಗಸೂಚಿ ಉಲ್ಲಂಘನೆಯಾದರೆ ಯಾವುದೇ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುತ್ತೆ' ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿಸಿಎಂ ಅಶ್ವತ್ಥ್ ನಾರಾಯಣ ಎಚ್ಚರಿಕೆ ನೀಡಿದ್ದಾರೆ.
ನಿಖಿಲ್ ಮದುವೆ ಮುಂದಕ್ಕೆ ಹೋಗುತ್ತಾ? ಕುಮಾರಸ್ವಾಮಿ ಪ್ರತಿಕ್ರಿಯೆ
ದೊಡ್ಡ ಕುಟುಂಬ, ದೊಡ್ಡ ವಿವಾಹ
ಒಂದು ಕಡೆ ಕುಮಾರಸ್ವಾಮಿ, ದೇವೇಗೌಡ ಕುಟುಂಬ, ಮತ್ತೊಂದು ಕಡೆ ಶಾಸಕ ಕೃಷ್ಣಪ್ಪ ಅವರ ಕುಟುಂಬ. ಈ ಎರಡು ಕುಟುಂಬಗಳು ರಾಜಕೀಯವಾಗಿ ಹೆಚ್ಚು ಪ್ರಾಬಲ್ಯ ಹೊಂದಿರುವುದರಿಂದ ಬರಿ ಸಂಬಂಧಿಕರೇ ಎಂದುಕೊಂಡರು, ಎರಡೂ ಕುಟುಂಬದಿಂದ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಈ ಸಮಾರಂಭದಿಂದ ಕೊರೊನಾ ಸೋಂಕು ಹರಡಬಹುದು ಎಂಬ ಆತಂಕ ಈಗ ಸಹಜವಾಗಿ ಕಾಡುತ್ತಿದೆ.
ಕುಮಾರಸ್ವಾಮಿ ಏನಂದ್ರು?
"ಮನೆಯಲ್ಲಿ ಸರಳವಾಗಿ ಮದುವೆ ನಡೆಸಲು ನಿರ್ಧರಿಸಲಾಗಿದೆ. ಆದರೂ, ನನ್ನ ಹತ್ತಿರದ ಸಂಬಂಧಿಗಳು, ಅಂದರೆ ಅಣ್ಣಂದಿರು, ಅಕ್ಕತಂಗಿ, ಬಾವಂದಿರನ್ನು ಕರೆದರೂ, ಜನ ಅರವತ್ತು, ಎಪ್ಪತ್ತರ ಮೇಲೆ ಹೋಗುತ್ತದೆ. ರಾಮನಗರ ದೇವರ ದಯೆಯಿಂದ ಗ್ರೀನ್ ಝೋನ್ ನಲ್ಲಿದೆ. ನಮ್ಮ ಕುಟುಂಬದ ಕಾರ್ಯಕ್ರಮದ ಮೂಲಕವೂ ರಾಮನಗರಕ್ಕೆ ಯಾವುದೇ ಸಮಸ್ಯೆಯಾಗಬಾರದು. ನಮ್ಮೆಲ್ಲರ ಕಾರ್ಯಕರ್ತರಿಗೆ ನನ್ನ ಮನವಿ, ಏಪ್ರಿಲ್ ಹದಿನೇಳನೇ ತಾರೀಕಿನ ದಿನ, ನಿಮ್ಮ ಮನೆಯಲ್ಲೇ ಇದ್ದು, ನಮಗೆ ಆಶೀರ್ವದಿಸಿ. ಮುಂದೆ ಎಲ್ಲರ ಜೊತೆ ಸೇರಿ ಆರಕ್ಷತೆ ನಡೆಸುವ ತೀರ್ಮಾನಕ್ಕೆ ಬರುತ್ತೇನೆ' ಎಂದು ಕುಮಾರಸ್ವಾಮಿ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದರು.
ರಾಮನಗರ ಗ್ರೀನ್ ಝೋನ್
ಕೊರೊನಾ ವೈರಸ್ಗೆ ಸಂಬಂಧಪಟ್ಟಂತೆ ಕೇಂದ್ರ ಆರೋಗ್ಯ ಇಲಾಖೆ ಕರ್ನಾಟಕದಲ್ಲಿ 8 ರಜಿಲ್ಲೆಗಳನ್ನು ರೆಡ್ ಝೋನ್ ಎಂದು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ರಾಮನಗರ ಇಲ್ಲ. ರಾಮನಗರ ಗ್ರೀನ್ ಝೋನ್ ನಲ್ಲಿದೆ. ಇದುವರೆಗೂ ಇಲ್ಲಿ ಕೊರೊನಾ ಸೋಂಕು ಪತ್ತೆಯಾಗಿಲ್ಲ. ಬಹುಶಃ ಈ ಕಾರಣದಿಂದ ಕುಮಾರಸ್ವಾಮಿ ಮಗನ ಮದುವೆಗೆ ಅಡ್ಡಿಯಿಲ್ಲ. ಆದರೂ ಮುಂಜಾಗ್ರತೆವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವುದು ಅವರ ಕರ್ತವ್ಯ.