ವಿಪಕ್ಷ ನಾಯಕ ಸಿದ್ದರಾಮಯ್ಯರ ಟೀಕೆ ಅಚ್ಚರಿ ತಂದಿದೆ
ಬೆಂಗಳೂರು, ಜು. 16: ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಹೊರಡಿಸಲಾಗಿರುವ ಸುಗ್ರೀವಾಜ್ಞೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಡಿಸಿಎಂ ಡಾ. ಸಿ.ಎನ್. ಅಶ್ವಥ್ ನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಜತೆ ಮಾತನಾಡಿದ ಅವರು, ಪ್ರಗತಿಗೆ ಪೂರಕವಾದ ಈ ತಿದ್ದುಪಡಿ ಕಾಯ್ದೆಯನ್ನು ಹಿಂದೆ ಸದನದಲ್ಲಿ ಕಾಂಗ್ರೆಸ್ ಸದಸ್ಯರೇ ಬೆಂಬಲಿಸಿದ್ದರು. ಈಗ ನೋಡಿದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮಾಡುತ್ತಿರುವುದು ಅಚ್ಚರಿ ತಂದಿದೆ ಎಂದರು.
'ಕೊರೊನಾದಿಂದ ದೇವರೇ ಕಾಪಾಡಬೇಕು' ಹೇಳಿಕೆಗೆ ಶ್ರೀರಾಮುಲು ಸ್ಪಷ್ಟನೆ
ಇಡೀ ದೇಶದಲ್ಲೇ ಒಂದು ಕಾಯ್ದೆ ಇದ್ದರೆ, ನಮ್ಮ ರಾಜ್ಯದಲ್ಲೇ ಒಂದು ಕಾಯ್ದೆ ಇತ್ತು. ಅದರಿಂದ ರೈತರಿಗೆ, ಜನರಿಗೆ ಅನುಕೂಲವಾಗಿದ್ದು ಏನೂ ಇಲ್ಲ. ಈವರೆಗೂ ಇದರ ದುರ್ಬಳಕೆ ಆಗಿ ವಿಪರೀತ ಭ್ರಷ್ಟಾಚಾರಕ್ಕೆ ಕಾರಣವಾಗಿತ್ತು. ಇದರಿಂದಾಗಿಯೇ ರಾಜ್ಯಕ್ಕೆ ಸಾಕಷ್ಟು ಹಾನಿಯಾಗಿದೆ. ಹಾಗೆ ನೋಡಿದರೆ ಈ ತಿದ್ದಪಡಿ ಕಾಯ್ದೆಯೂ ಪ್ರಗತಿಗೆ ಪೂರಕವಾದ ಕ್ರಮವಾಗಿದೆ ಎಂದು ಡಿಸಿಎಂ ಕಾಯ್ದೆಯನ್ನು ಸಮರ್ಥಿಸಿಕೊಂಡರು.
ವಿಧಾನಸಭೆಯಲ್ಲಿ ಚರ್ಚೆ ನಡೆಯಬೇಕಾದರೆ, ಇದೊಂದು ಅತ್ಯುತ್ತಮ ಕಾಯ್ದೆ. ಇದು ಜಾರಿಗೆ ಬರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದರು. ಈ ಬಗ್ಗೆ ಬಗ್ಗೆ ಟೀಕೆ ಮಾಡುತ್ತಿರುವವರು ಎದೆ ಮುಟ್ಟಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಲಿ. ಇದು ಖಂಡಿತಾ ರೈತ ವಿರೋಧಿಯಲ್ಲ. ಕೆಲವರು ತಮ್ಮ ಏನೇನೋ ರಾಜಕೀಯ ಹುನ್ನಾರಗಳ ಕಾರಣಕ್ಕೆ ಭಿನ್ನಸ್ವರ ಹಾಡುತ್ತಿದ್ದಾರೆ. ಜನರನ್ನು ಹಾಳು ಮಾಡುವುದೇ ಕೆಲವರ ನಿತ್ಯ ಕೆಲಸವಾಗಿದೆ ಎಂದು ಡಿಸಿಎಂ ಹರಿಹಾಯ್ದರು.