ಸಿಎಂ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ: ಡಿಸಿಎಂ ಮಹತ್ವದ ಪ್ರತಿಕ್ರಿಯೆ!
ಬೆಂಗಳೂರು, ಅ. 29: ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಕುರಿತು ಬಿಜೆಪಿಯಲ್ಲಿ ಮತ್ತೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಆರ್ ಆರ್ ನಗರ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರದಲ್ಲಿ ಭಾಗವಹಿಸಿ ಡಾ. ಅಶ್ವಥ್ ನಾರಾಯಣ ಅವರು ಮಾತನಾಡಿದರು.
ಈ ಚುನಾವನೆ ಬಳಿಕ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುತ್ತಾರೆ ಎಂದು ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿಕೆ ನೀಡಿದ್ದರು. ಅದಾದ ಬಳಿಕ ಯತ್ನಾಳ್ ಹೇಳಿಕೆ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದರು.
ಬಿ.ವೈ. ವಿಜಯೇಂದ್ರ ಮೇಲೆ ದಿನೇಶ್ ಗುಂಡೂರಾವ್ ಗಂಭೀರ ಆರೋಪ!
ವಿರೋಧ ಪಕ್ಷಗಳ ನಾಯಕರ ಆರೋಪವನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ, ಆದರೆ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸ್ವತಃ ನಿಜೆಪಿ ನಾಯಕರು ಹೇಳಿದ್ದಾರೆ.
ಡಿಕೆಶಿ ವಿರುದ್ಧ ಡಾ. ಅಶ್ವಥ್ ನಾರಾಯಣ್ ಮಾತು
ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ಪ್ರಚಾರ ಮಾಡಿದ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರು, ಕಪಾಲ ಬೆಟ್ಟವೂ? ಏಸು ಬೆಟ್ಟವೋ ಎಂಬ ವಿಚಾರವನ್ನು ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಲಿ. ಸಚಿವ ಆರ್. ಅಶೋಕ್ ಅವರು ಒಳ್ಳೆಯ ಪ್ರಶ್ನೆಯನ್ನೇ ಮಾಡಿದ್ದಾರೆ. ಅಶೋಕ್ ಅವರ ಪ್ರಶ್ನೆಗೆ ಡಿಕೆಶಿ ಮೊದಲು ಉತ್ತರ ಕೊಡಲಿ ಎಂದರು.
ಸಿಎಂ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ?
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸದ್ಯದಲ್ಲೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರು ಮಹತ್ವದ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮೊದಲು ಅವರ ಪಕ್ಷದಲ್ಲಿ ಎಷ್ಟು ಗುಂಪುಗಳಿವೆ ಎಂಬುದನ್ನು ನೋಡಿಕೊಳ್ಳಲಿ. ಅವರ ಶಾಸಕರು ಅವರು ಸಿಎಂ, ಇವರು ಸಿಎಂ ಅಂತ ದಿನ ಬೆಳಗಾದರೆ ಹೇಳಿಕೆ ಕೊಡುತ್ತಿದ್ದಾರೆ. ಮೊದಲು ಅವರದನ್ನು ನೋಡಿಕೊಳ್ಳಲಿ ಎಂದು ಸಿಎಂ ಬದಲಾವಣೆ ಇಲ್ಲ ಎಂದರು.
ಮುನಿರತ್ನ ಪರ ಜನ ಬೆಂಬಲ
ಇನ್ನು ಮುನಿರತ್ನ ಪರ ಕ್ಷೇತ್ರದಲ್ಲಿ ಜನ ಬೆಂಬಲ ಎದ್ದು ಕಾಣುತ್ತಿದೆ. ನಮ್ಮ ಪಕ್ಷ ಬಹಳ ದೊಡ್ಡ ಅಂತರದಿಂದ ಆರ್ ಆರ್ ನಗರದಲ್ಲಿ ಗೆಲ್ಲುತ್ತದೆ. ಎಷ್ಟು ಮತದಾನ ಆಗುತ್ತೋ ಅಷ್ಟು ಗೆಲುವಿನ ಅಂತರ ಜಾಸ್ತಿ ಆಗಲಿದೆ. ಉಪಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಯಲ್ಲಿ ಬಿಜೆಪಿಗೆ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುನಿರತ್ನ ಅವರು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ಬಹಳ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಹೇಳಿದರು.
ಡಿಕೆ ಬ್ರದರ್ಸ್ ಜಾತಿ ಒಡೆಯುತ್ತಿದ್ದಾರೆ!
ಡಿ.ಕೆ. ಬ್ರದರ್ಸ್ ಈ ರೀತಿ ಮಾತನಾಡುವುದು ಸರಿಯಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಜಾತಿ ತರುತ್ತಿರೋದನ್ನು ನಾವು ಖಂಡಿಸುತ್ತೇವೆ. ಸಮಾಜದಲ್ಲಿ ಜಾತಿ ಆಧಾರಿತವಾಗಿ ಮತ ಕೇಳ್ತಿದ್ದಾರಲ್ವಾ? ಇಂಥ ಪರಿಸ್ಥಿತಿಗೆ ಕಾಂಗ್ರೆಸ್ ಬಂದಿದ್ದು ದುಃಖಕರ. ಸಮಾಜ ಒಡೆಯೋ ಪ್ರಯತ್ನವನ್ನು ಕಾಂಗ್ರೆಸ್ ಮಾಡಬಾರದು ಎಂದು ಡಿಸಿಎಂ ಅಶ್ವಥ್ ನಾರಾಯಣ ಅವರು ಹೇಳಿಕೆ ನೀಡಿದರು.