"ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ವಿಪಕ್ಷಗಳದ್ದು ಯೂಟರ್ನ್ ಚಾಳಿ"
ಬೆಂಗಳೂರು, ಜನವರಿ.09: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ವಿರುದ್ಧ ಹೋರಾಟ ತೀವ್ರಗೊಂಡಿದೆ. ರಾಜ್ಯದಲ್ಲೂ ಈ ಸಂಬಂಧ ಜನರಲ್ಲಿ ತಪ್ಪು ಸಂದೇಶ ರವಾನೆ ಆಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ್ ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಅಭಿಯಾನದ ವೇಳೆ ನಡೆಯುತ್ತಿರುವ ಘರ್ಷಣೆ ಹಾಗೂ ಗೊಂದಲದ ಬಗ್ಗೆ ಡಿಸಿಎಂ ಡಾ. ಅಶ್ವತ್ ನಾರಾಯಣ, ಬೆಂಗಳೂರಿನ ತಮ್ಮ ಗೃಹ ಕಚೇರಿಯಲ್ಲಿ ಸ್ಪಷ್ಟನೆ ನೀಡಿದರು.
ಬಿಜೆಪಿಯಲ್ಲ ಮಿತ್ರಪಕ್ಷಗಳ ವಿರುದ್ಧವೂ ಸಿಡಿದೆದ್ದ ಮಮತಾ ಬ್ಯಾನರ್ಜಿ
ನೆರೆಯ ದೇಶಗಳಲ್ಲಿ ಕಿರುಕುಳ ಸಹಿಸಲಾಗದೇ ದೇಶಕ್ಕೆ ವಲಸೆ ಬಂದ ಭಾರತೀಯ ಮೂಲದವರಿಗೆ ಕಾನೂನಿನ ರಕ್ಷಣೆ ನೀಡಬೇಕಾಗಿತ್ತು. ಈ ನಿಟ್ಟಿನಲ್ಲಿ ಒತ್ತಾಯ ಕೇಳಿ ಬಂದ ಹಿನ್ನೆಲೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಆದರೆ, ಈಗ ಪ್ರತಿಪಕ್ಷಗಳೆಲ್ಲ ರಿವರ್ಸ್ ಗೇರ್ ಹಾಕುತ್ತಿವೆ ಎಂದು ಡಿಸಿಎಂ ಡಾ. ಅಶ್ವತ್ ನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು.
"ಅತಂತ್ರ ಸ್ಥಿತಿಯಲ್ಲಿ ಇರುವವರನ್ನು ರಕ್ಷಿಸಬಾರದೇ?"
ಅಖಂಡ ಭಾರತ ವಿಭಜನೆ ನಂತರ ಕೆಲವರು ಅಲ್ಲಿಯೇ ಉಳಿಯುವ ನಿರ್ಧಾರ ಮಾಡಿದ್ದರು. ಆದರೆ, ಧಾರ್ಮಿಕ ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಆ ದೇಶಗಳಲ್ಲಿ ಅವರು ಕಿರುಕುಳ ಅನುಭವಿಸುವಂತಾ ಸ್ಥಿತಿ ನಿರ್ಮಾಣವಾಗಿತ್ತು. ಆ ಹಿಂಸೆಯನ್ನು ತಡೆಯಲಾಗದೇ ಸಾವಿರಾರು ಜನರು ಭಾರತಕ್ಕೆ ವಲಸೆ ಬಂದಿದ್ದರು. ಯಾವುದೇ ದಾಖಲೆಗಳಿಲ್ಲದೆ ಅತಂತ್ರರಾಗಿದ್ದ ಅವರಿಗೆ ರಕ್ಷಣೆ ಕೊಡಬೇಕು ಎಂಬ ಕೂಗು ದೇಶದಲ್ಲಿತ್ತು. ಈ ಸಂಬಂಧ ಪೌರತ್ವ ತಿದ್ದುಪಡಿ ಕಾಯ್ದೆ ತಂದ ಬಳಿಕ ಪ್ರತಿಪಕ್ಷಗಳು ಈಗ ವರಸೆ ಬದಲಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
"ಶಾಂತಿ ಕೆಡಿಸಲು ಕಲ್ಲು ತೂರುವುದೇ ಕೆಲವರ ಚಾಳಿ"
ಕೆಲ ಸಂಘಟನೆಗಳು ಕಿರುಕುಳ ನೀಡಬೇಕು ಎನ್ನುವ ಕಾರಣದಿಂದ ಈ ರೀತಿ ಮಾಡುತ್ತಿವೆ. ಸಮಾಜದಲ್ಲಿ ಶಾಂತಿ, ಸಮಾಧಾನದಿಂದ ಇರಬಾರದು ಎಂಬುದೇ ಅವರ ಉದ್ದೇಶ. ಅದಕ್ಕಾಗಿ ಒಂದಲ್ಲ ಒಂದು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅವರ ಪ್ರಯತ್ನಗಳು ಯಾವಾಗಲೂ ಯಶಸ್ವಿ ಆಗುವುದಿಲ್ಲ. ಅವಕಾಶ ಸಿಕ್ಕ ಕೂಡಲೇ ಕಲ್ಲು ತೂರುವ ಚಾಳಿ ಕೆಲವರಿಗೆ ಇರುತ್ತದೆ. ಅಂಥವರ ಆಸೆ ಈಡೇರದು ಎಂದು ಕಿಡಿ ಕಾರಿದ್ದಾರೆ.
ಯಾವುದೇ ಕಾನೂನಿನ ಬಗ್ಗೆ ಸ್ಪಷ್ಟನೆ ನೀಡಬಾರದೇ ಎಂಬ ಪ್ರಶ್ನೆ
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದರೆ ಮುಸ್ಲಿಮರನ್ನು ದೇಶದಿಂದ ಹೊರ ಹಾಕಲಾಗುತ್ತದೆ ಎಂಬ ಅಪಪ್ರಚಾರ ವ್ಯಾಪಕವಾಗುತ್ತಿದೆ. ಈ ಬಗ್ಗೆ ಜನರಿಗೆ ಮಾಹಿತಿ ನೀಡಿ ತಪ್ಪು ಅಭಿಪ್ರಾಯ ಹೋಗಲಾಡಿಸುವ ಕೆಲಸ ಮಾಡುತ್ತಿದ್ದೇವೆ. ಇದನ್ನೇ ತಪ್ಪು ಎಂದರೆ ಹೇಗೆ ಎಂದು ಡಿಸಿಎಂ ಪ್ರಶ್ನಿಸಿದ್ದಾರೆ.
ಜನರ ಮನಸ್ಸಿನಲ್ಲಿ ದ್ವೇಷದ ಬೀಜ ಬಿತ್ತಬಾರದು ಎಂದ ಡಿಸಿಎಂ
ರಾಜ್ಯದಲ್ಲಿ ನಾವೆಲ್ಲ ಸೋದರತ್ವತದಲ್ಲಿ ಬಾಳುತ್ತಿದ್ದೇವೆ, ಜನರ ಮನಸ್ಸಿನಲ್ಲಿ ದ್ವೇಷ ಬಿತ್ತುವ ಕೆಲಸ ಆಗಬಾರದು. ಸಿಎಎ ವಿರುದ್ಧ ನಡೆಯುತ್ತಿರುವ ಘಟನೆಗಳು ನಿಜಕ್ಕೂ ಶೋಚನೀಯ. ದೇಶದ ಸಂಸ್ಕೃತಿಗೆ, ದೇಶಕ್ಕೆ ಅಗೌರವ ತೋರುವುದು ಸರಿ ಅಲ್ಲ. ಈ ವಿಚಾರದಲ್ಲಿ ರಾಜಕೀಯ ಬೇಡ. ದೇಶದ್ರೋಹದ ಕೆಲಸ ನಿಲ್ಲಿಸಿ, ಧರ್ಮ ಜಾತಿ ಮೀರಿ ಭಾರತವನ್ನು ಪ್ರೀತಿಸಿ ಎಂದು ಅಶ್ವತ್ ನಾರಾಯಣ್ ಕರೆ ನೀಡಿದರು.