ದಾಸಿಮಯ್ಯರ ಮುದನೂರಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಒತ್ತಾಯ
ಬೆಂಗಳೂರು, ಅಕ್ಟೋಬರ್, 30 : ಆದ್ಯ ವಚನಕಾರ ದೇವರ ದಾಸಿಮಯ್ಯರ ಜನ್ಮಸ್ಥಳವಾದ ಮುದನೂರು ಸಮಗ್ರ ಅಭಿವೃದ್ಧಿಗಾಗಿ 'ಮುದನೂರು ಅಭಿವೃದ್ಧಿ ಪ್ರಾಧಿಕಾರ' ರಚಿಸಬೇಕೆಂದು ಹಂಪೆ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ದಯಾನಂದಪುರಿ ಸ್ವಾಮೀಜಿ ಅಕ್ಟೋಬರ್ 29ರ ಗುರುವಾರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ದೇವಾಂಗ ಸಮಾಜದ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿವರಿಸಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,'ರಾಜ್ಯ ಸರ್ಕಾರ ಈಗಾಗಲೇ ಕಾಗಿನೆಲೆ ಹಾಗೂ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸಿದೆ. ಅದೇ ಮಾದರಿಯಲ್ಲಿ ಯಾದಗಿರಿ ಜಿಲ್ಲೆಯ ಶಹಾಪೂರದಲ್ಲಿರುವ ಮುದನೂರು ಅಭಿವೃದ್ಧಿಗೂ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು. ಮುಂಬರುವ ಬಜೆಟ್ ನಲ್ಲಿ ಇದಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಶ್ರೀಗಳು ಒತ್ತಾಯಿಸಿದ್ದಾರೆ.[ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ]
ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಎಎಸ್, ಐಎಎಸ್ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುವ ಪರೀಕ್ಷೆಗಳಲ್ಲಿ ಭಾಗವಹಿಸುವ ದೇವಾಂಗ ಸಮಾಜದ ವಿದ್ಯಾರ್ಥಿಗಳಿಗೆ ಅಗತ್ಯವಾದ ಉಚಿತ ವಸತಿ ಮತ್ತು ಕೋಚಿಂಗ್ ಒದಗಿಸಿಕೊಡಲು ಕರ್ನಾಟಕ ರಾಜ್ಯ ದೇವಾಂಗ ಸಂಘ ಮುಂದಾಗಿದೆ ಎಂದು ಸಂಘದ ನೂತನ ಅಧ್ಯಕ್ಷ ನಿವೃತ್ತ ಡಿಐಜಿ ಡಾ.ಜಿ. ರಮೇಶ್ ವಿವರಿಸಿದರು.[ದಾಸಿಮಯ್ಯ ವಿವಾದಕ್ಕೆ ಮುರುಘಾ ಶ್ರೀಗಳಿಂದ ಸ್ಪಷ್ಟನೆ]
ದೇವಾಂಗ ಸಮಾಜದ ಪ್ರಧಾನ ಕಾರ್ಯದರ್ಶಿ ರವೀಂದ್ರ ಕಲ್ಬುರ್ಗಿ ಮಾತನಾಡಿ, 'ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಬಲಿಷ್ಠವಾಗಿರುವ ಸಮುದಾಯಗಳೊಂದಿಗೆ ರಾಜ್ಯ ದೇವಾಂಗ ಸಂಘವು ಸಂಪರ್ಕ ಸಾಧಿಸಿಕೊಂಡಿದೆ. ಸಮಾಜದ ಅಭಿವೃದ್ಧಿಯಲ್ಲಿ ಅಳವಡಿಸಿಕೊಂಡಿರುವ ಕ್ರಮಗಳನ್ನು ಗುರುತಿಸಿ ಅವರ ಬೆಂಬಲದೊಂದಿಗೆ ನಮ್ಮ ಸಮುದಾಯವನ್ನು ಮುನ್ನಡೆಸಿಕೊಂಡು ಹೋಗುವುದು ಮತ್ತು ರಾಜ್ಯವ್ಯಾಪಿ ದೇವಾಂಗ ಜನಾಂಗದ ಜನಗಣತಿಯನ್ನು ಜಿಲ್ಲಾವಾರು ನಡೆಸಲು ಕ್ರಮಕೈಗೊಳ್ಳಲಾಗುವುದು' ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ದೇವಾಂಗ ಸಮಾಜದ ಕೋಶಾಧಿಕಾರಿ ಕೆ. ನಾರಾಯಣ, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಬಿ. ನಾಗರಾಜು, ಡಿ.ಎಸ್. ಸೂರ್ಯನಾರಾಯಣ, ಎ. ನಾರಾಯಣಸ್ವಾಮಿ, ಸಿ.ಎಲ್. ಧನಪಾಲ್, ಎ. ವಿಜಯ್ಕುಮಾರ್, ಎಂ.ಪಿ. ಉಮಾಶಂಕರ್ ಹಾಗೂ ಇತರರು ಉಪಸ್ಥಿತರಿದ್ದರು.