ಅಸೆಂಬ್ಲಿ ಚುನಾವಣೆಗೆ ಎಸ್ಸೆಂ ಕೃಷ್ಣ ಅವರ ಪುತ್ರಿ ಶಾಂಭವಿ ಸ್ಪರ್ಧೆ?
ಬೆಂಗಳೂರು, ಅಕ್ಟೋಬರ್ 23: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪುತ್ರಿ ಶಾಂಭವಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪ್ರವೇಶ ಮಾಡಲಿದ್ದು, ಬೆಂಗಳೂರು ನಗರದಲ್ಲಿ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಮತ್ತೊಮ್ಮೆ ಹರಡಿದೆ.
ಬಹುಶಃ ಮದ್ದೂರು ಲೋಕಸಭಾ ಕ್ಷೇತ್ರದ ಚುನಾವಣೆ ಸಂದರ್ಭ ಇರಬೇಕು, ಎಸ್ಸೆಂ ಕೃಷ್ಣ ಅವರ ಸಂಬಂಧಿ ಎಸ್ ಗುರುಚರಣ್ ಅವರ ಪರ ಪ್ರೇಮಾ ಕೃಷ್ಣ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಅಗ ಮೊದಲ ಬಾರಿಗೆ ಮುಂದಿನ ಚುನಾವಣೆಯಲ್ಲಿ ತಮ್ಮ ಮಗಳು (ಶಾಂಭವಿ) ಸ್ಪರ್ಧಿಸುವ ಬಗ್ಗೆ ಮಾತನಾಡಿದ್ದರು. ಆದರೆ, ಶಾಂಭವಿ ರಾಜಕೀಯ ಪ್ರವೇಶಿಸಲಿಲ್ಲ. ಇದಾದ ಬಳಿಕ ಅಸೆಂಬ್ಲಿ ಚುನಾವಣೆಯೂ ನಡೆಯಿತು ಸರ್ಕಾರಗಳು ಬದಲಾದವು.
ಆದರೆ, ಈಗ ಮತ್ತೊಮ್ಮೆ ಶಾಂಭವಿ ಅವರು ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಒಕ್ಕಲಿಗರ ಸಂಖ್ಯೆ ಅಧಿಕವಾಗಿರುವ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆ ಎಂದು ಮೂಲಗಳು ಹೇಳಿವೆ.
ಇದೇ ಕ್ಷೇತ್ರದಿಂದ ಚಲನಚಿತ್ರ ನಟ ಗಣೇಶ್ ಪತ್ನಿ ಶಿಲ್ಪಾ ಗಣೇಶ್, ಜೆಡಿಎಸ್ನಿಂದ ಪ್ರಜ್ವಲ್ ರೇವಣ್ಣ ಅವರು ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್ ಶಾಸಕ ಮುನಿರತ್ನ ಅವರ ವಿರುದ್ಧ ಪ್ರಬಲ ಸ್ಪರ್ಧಿಗಾಗಿ ಮಿಕ್ಕ ಪಕ್ಷಗಳು ಹುಡುಕಾಟ ಜೋರಾಗಿ ನಡೆಸಿವೆ.
ಕೃಷ್ಣ ಅವರು ಮಂಡ್ಯ ಜಿಲ್ಲೆಯಲ್ಲಿ ಹಿಡಿತ ಹೊಂದಿರುವುದರಿಂದ ಆ ಜಿಲ್ಲೆಯಲ್ಲಿ ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸೂಚಿಸುವ ಸಾಧ್ಯತೆ ಇದೆ ಎಂಬ ಸುದ್ದಿಯೂ ಹರಿದಾಡಿದೆ. ಸದ್ಯಕ್ಕೆ ಈ ಬಗ್ಗೆ ಬಿಜೆಪಿಯಾಗಲಿ, ಎಸ್ಸೆಂ ಕೃಷ್ಣ ಕುಟುಂಬದವರಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ.