ಆರೆಸ್ಸೆಸ್ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಆಯ್ಕೆ
ಬೆಂಗಳೂರು, ಮಾರ್ಚ್ 20: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ಶನಿವಾರ ನೇಮಿಸಲಾಗಿದೆ. 2009ರಿಂದ ದಾಖಲೆಯ 12 ವರ್ಷಗಳಿಂದ ಈ ಸ್ಥಾನದಲ್ಲಿದ್ದ ಸುರೇಶ್ 'ಭಯ್ಯಾಜಿ' ಜೋಶಿ ಅವರ ಜಾಗಕ್ಕೆ ಕರ್ನಾಟಕದವರಾದ ದತ್ತಾತ್ರೇಯ ಹೊಸಬಾಳೆ ನೇಮಕವಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಆರೆಸ್ಸೆಸ್ನ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಅರೆಸ್ಸೆಸ್ನ ಪ್ರಧಾನ ಕಾರ್ಯದರ್ಶಿಯ ಆಯ್ಕೆ ನಡೆಯುತ್ತದೆ. 2018ರಲ್ಲಿ ಸತತ ನಾಲ್ಕನೆಯ ಅವಧಿಗೆ ಆಯ್ಕೆಯಾಗಿದ್ದ ಭಯ್ಯಾಜಿ ಅವರ ಅವಧಿ ಈ ವರ್ಷ ಅಂತ್ಯಗೊಂಡಿದೆ.
ಸಾಮಾನ್ಯವಾಗಿ ಪ್ರತಿ ಬಾರಿಯೂ ಆರೆಸ್ಸೆಸ್ನ ವಾರ್ಷಿಕ ಸಭೆ ಅದರ ಕೇಂದ್ರ ಕಚೇರಿ ನಾಗಪುರದಲ್ಲಿ ನಡೆಯುತ್ತಿತ್ತು. ಆದರೆ ಈ ಬಾರಿ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚಾದ ಕಾರಣ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.
ಸರಕಾರ್ಯನಿರ್ವಾಹ ಹುದ್ದೆಯನ್ನು ಆರೆಸ್ಸೆಸ್ನ ಉನ್ನತ ಹುದ್ದೆಯೆಂದು ಪರಿಗಣಿಸಲಾಗಿದ್ದು, ಅವರು ಮಾರ್ಗದರ್ಶಕರಾಗಿ ಸಂಘದ ದೈನಂದಿನ ಚಟುವಟಿಕೆಗಳನ್ನು ನಿರ್ವಹಣೆ ಮಾಡುತ್ತಾರೆ. ಈ ಹಿಂದೆ ಕರ್ನಾಟಕದ ಹೋ.ವೇ. ಶೇಷಾದ್ರಿ ಅವರು ಸರಕಾರ್ಯವಾಹ ಹುದ್ದೆಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದರು.
ದತ್ತಾತ್ರೇಯ ಹೊಸಬಾಳೆ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮದವರಾಗಿದ್ದಾರೆ. ಆರೆಸ್ಸೆಸ್ ಕುಟುಂಬ ಹಿನ್ನೆಲೆಯಿಂದ ಬಂದ ಅವರು, 1968ರಲ್ಲಿ ಸಂಘ ಸೇರ್ಪಡೆಯಾಗಿದ್ದರು. 15 ವರ್ಷ ಎಬಿವಿಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇದುವರೆಗೂ ಅವರು ಆರೆಸ್ಸೆಸ್ನ ಸಹ ಸರಕಾರ್ಯವಾಹರಾಗಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸರಕಾರ್ಯವಾಹರಾಗಿ ಶ್ರೀ ದತ್ತಾತ್ರೇಯ ಹೊಸಬಾಳೆ ಅವರು ನಿಯುಕ್ತಿಗೊಂಡಿದ್ದಾರೆ. ಹಲವು ದಶಕಗಳಿಂದ ಅವಿರತವಾಗಿ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶ್ರೀ ದತ್ತಾತ್ರೇಯ ಹೊಸಬಾಳೆ ಅವರು ಕರ್ನಾಟಕದವರು ಎಂಬದು ಎಲ್ಲ ಕನ್ನಡಿಗರಿಗೂ ಹೆಮ್ಮೆಯ ವಿಷಯ ಎಂದು ಸಚಿವ ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.
Recommended Video
ಶಿವಮೊಗ್ಗದ ಸೊರಬದಲ್ಲಿ ಹುಟ್ಟಿ ಬೆಳೆದು ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ದೇಶಾದ್ಯಂತ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಶ್ರೀ ದತ್ತಾತ್ರೇಯ ಹೊಸಬಾಳೆ ಜಿ ಅವರು RSS ನ ಎರಡನೇ ಅತಿದೊಡ್ಡ ಜವಾಬ್ದಾರಿ ಸರಕಾರ್ಯವಾಹ (General Secretary) ಆಗಿ ನೇಮಕವಾಗಿರುವುದು ಸಂಘದ ಮತ್ತು ಬಿಜೆಪಿ ಕಾಯ೯ಕತ೯ರಿಗೆ ಹೆಮ್ಮೆಯ ಮತ್ತು ಗವ೯ದ ವಿಷಯ ಎಂದು ಶಾಸಕ ರೇಣುಕಾಚಾರ್ಯ ಅಭಿನಂದಿಸಿದ್ದಾರೆ.