ಬಿಬಿಎಂಪಿ ಖಾತೆಯಲ್ಲಿ 67 ಲಕ್ಷ ಎಗರಿಸಿದ ಕಿಲಾಡಿ ಡಾಟಾ ಆಪರೇಟರ್
ಬೆಂಗಳೂರು, ನ.11: ಅವನು ಸಾಮಾನ್ಯ ಡಾಟಾ ಎಂಟ್ರಿ ಆಪರೇಟರ್. ಬೆಂಗಳೂರು ಮಹಾನಗರ ಪಾಲಿಕೆ ಖಾತೆಗೆ ಜಮೆಯಾಗಬೇಕಿದ್ದ 67 ಲಕ್ಷ ರೂ. ಹಣವನ್ನು ಯಾಮಾರಿಸಿ ಸಿಕ್ಕಿಬಿದ್ದಿದ್ದಾನೆ. ಆನ್ಲೈನ್ ಪರವಾನಗಿ ಪಡೆಯುವ ಸಂಬಂಧ ಅರ್ಜಿದಾರರು ಕಟ್ಟಿದ ಹಣದಲ್ಲಿ 67 ಲಕ್ಷ ರೂ. ಹಣ ಸ್ವಂತ ಖಾತೆಗೆ ವರ್ಗಾಯಿಸಿಕೊಂಡು ಬೆಂಗಳೂರು ಮಹಾನಗರ ಪಾಲಿಕೆಗೆ ನಾಮ ಹಾಕಿದ್ದಾನೆ.
ಯಾವುದೇ ವಹಿವಾಟು ನಡೆಸಬೇಕಾದರೆ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೀಡುವ ಟ್ರೇಡ್ ಲೈಸನ್ಸ್ ಕಡ್ಡಾಯವಾಗಿ ಪಡೆಯಬೇಕು. ಇಂತಿಷ್ಟು ಶುಲ್ಕ ಪಾವತಿಸಿ ಪರವಾನಗಿಯನ್ನು ಪಡೆಲಾಗುತ್ತಿದೆ. ಟ್ರೇಡ್ ಲೈಸನ್ಸ್ ನೀಡುವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಉದ್ಯಮಿಗಳಿಂದ ಹಣ ಸಂಗ್ರಹಿಸಿ ಪರವಾನಗಿ ನೀಡುವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. 2014 ಮತ್ತು 2018ರ ನಡುವೆ ಆನ್ಲೈನ್ ವ್ಯವಹಾರಗಳಿಗೆ ಟ್ರೇಡ್ ಲೈಸೆನ್ಸ್ ನೀಡುವ ಸಂದರ್ಭದಲ್ಲಿ 13 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿತ್ತು.
ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಡಾಟಾ ಎಂಟ್ರಿ ಆಪರೇಟರ್ ತನ್ನ ಕೈಚಳಕ ತೋರಿ 67 ಲಕ್ಷ ರೂಪಾಯಿ ವಂಚಿಸಿದ್ದಾನೆ. ಈ ಸಂಬಂಧ ಬೊಮ್ಮನಹಳ್ಳಿ ವಲಯದ ಆರೋಗ್ಯಾಧಿಕಾರಿ ಡಾ.ನಾಗೇಂದ್ರಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮೂಲಕ ಅಕ್ರಮ ಬೆಳಕಿಗೆ ಬಂದಿದೆ.
ಸುಮಾರು 10,598 ಉದ್ಯಮಿಗಳಿಂದ ಟ್ರೇಡ್ ಲೈಸೆನ್ಸ್ಗಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಲೈಸನ್ಸ್ ನೀಡುವ ಸಂಬಂಧ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಡಾಟಾ ಎಂಟ್ರಿ ಅಪರೇಟರ್ ಬಿಬಿಎಂಪಿ ಆಯುಕ್ತರ ಖಾತೆಗೆ ಪಾವತಿಯಾಗಬೇಕಿದ್ದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದು, ದಾಖಲೆಗಳನ್ನು ಆಧರಿಸಿ ದೂರು ನೀಡಲಾಗಿದೆ.
ಹೊರಗುತ್ತಿಗೆ ಡೇಟಾ-ಎಂಟ್ರಿ ಆಪರೇಟರ್ ಖಾತೆ ಪುಸ್ತಕಗಳನ್ನು ಸೂಕ್ತವಾಗಿ ನಿರ್ವಹಿಸಲಿಲ್ಲ ಮತ್ತು ಪಾಲಿಕೆಗೆ ಸೇರಿದ 67 ಲಕ್ಷ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಅವುಗಳನ್ನು ಲೆಕ್ಕಪರಿಶೋಧನೆಗೆ ಒಪ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಡಾ.ನಾಗೇಂದ್ರ ದೂರಿನಲ್ಲಿ ತಿಳಿಸಿದ್ದಾರೆ.
ಬೆಂಗಳೂರು ನಾಗರಿಕ ಸಂಸ್ಥೆಯ ಮುಖ್ಯ ಲೆಕ್ಕ ಪರಿಶೋಧಕರು 2014-15, 2015-16, 2016-17, ಮತ್ತು 2017-18 ರ ಆರ್ಥಿಕ ವರ್ಷಗಳ ಲೆಕ್ಕಪರಿಶೋಧನೆ ಮಾಡಿದ್ದಾರೆ. ಲೆಕ್ಕಪರಿಶೋಧನೆಯ ಪ್ರಕ್ರಿಯೆಯಲ್ಲಿ, ಆರೋಪಿ ಡೇಟಾ-ಎಂಟ್ರಿ ಆಪರೇಟರ್ ಬಿಬಿಎಂಪಿ ಆಯುಕ್ತರ ಬ್ಯಾಂಕ್ ಖಾತೆಗೆ ಶುಲ್ಕ, ದಂಡ, ರವಾನೆ ಮತ್ತು ಡಿಡಿಗಳನ್ನು ಜಮಾ ಮಾಡದೇ ಮೋಸ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ. ಬೊಮ್ಮನಹಳ್ಳಿ ವಲಯದ ಆರೋಗ್ಯಾಧಿಕಾರಿ ಡಾ.ನಾಗೇಂದ್ರ, ಅಕ್ಟೋಬರ್ 12 ರಂದು ಬಿಬಿಎಂಪಿ ವಿಶೇಷ ಆಯುಕ್ತರು (ಹಣಕಾಸು) ನಡೆಸಿದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಅದರಂತೆ ಡಾಟಾ ಎಂಟ್ರಿ ಅಪರೇಟರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯ ವೈಖರಿಯ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕಿತ್ತು. ಉದ್ಯಾನವನ ಮತ್ತು ಆಟದ ಮೈದಾನಗಳ ಜಾಗ ಒತ್ತುವರಿ, ಅಕ್ರಮ ಕಟ್ಟಡಗಳ ತೆರವು, ಗುಂಡಿ ಮುಚ್ಚುವ ವಿಚಾರದಲ್ಲಿ ಹೈಕೋರ್ಟ್ ಕೆಂಡಾಮಂಡಲವಾಗಿತ್ತು. ಬಿಬಿಎಂಪಿ ಅಧಿಕಾರಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡಿದ್ದರು.