ಆರ್ ಅಶೋಕ್ 1998 ಉಪ ಚುನಾವಣೆಯಲ್ಲಿ ಗೆದ್ದಿದ್ದು ಕಳ್ಳ ವೋಟಿನಿಂದ!
ಬೆಂಗಳೂರು, ಮೇ. 22: "1998ರ ವಿಧಾನಸಭೆ ಉಪ ಚುನಾವಣೆಯಲ್ಲಿ ಆರ್ . ಅಶೋಕರನ್ನು ಗೆಲ್ಲಿಸಲು ಯಲಹಂಕದಿಂದ ಒಂದು ಸಾವಿರ ಕಾರ್ಯಕರ್ತರನ್ನು ತರಿಸಿ ವೋಟು ಮಾಡಿಸಿ ಗೆಲ್ಲಿಸಲಾಗಿತ್ತು" ಎಂಬ ಮಾಜಿ ಶಾಸಕ ಮುನಿರಾಜು ಹೇಳಿಕೆ ಬಿಜೆಪಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ.
ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕ ಮುನಿರಾಜು, ಪಕ್ಷ ಸಂಘಟನೆಗೆ ಹಾಕಿದ ಪರಿಶ್ರಮದ ಬಗ್ಗೆ ಹೇಳಿಕೆ ನೀಡಿದ್ದರು.
ಈ ವೇಳೆ, "1998 ರಲ್ಲಿಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಯಲಹಂಕದಿಂದ ಒಂದು ಸಾವಿರ ಕಾರ್ಯಕರ್ತರನ್ನು ತರಿಸಿ ಬೆಳಗಿನಿಂದ ಸಂಜೆ ವರೆಗೂ ಕಳ್ಳ ವೋಟು ಹಾಕಿಸಿ ಗೆಲ್ಲಿಸಲಾಗಿತ್ತು" ಎಂದು ಹೇಳಿಕೆ ನೀಡಿದ್ದರು.
ಮುನಿರಾಜು ಈ ಹೇಳಿಕೆ ವಿಡಿಯೋ ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ, "ಸಾಮ್ರಾಟರ ಬೆತ್ತಲೆ ಸತ್ಯವನ್ನು ಮುನಿರಾಜು ತೆರೆದಿಟ್ಟಿದ್ದಾರೆ. ಅಶೋಕ್ ಅವರು ಸಾಮ್ರಾಟರಾಗಿ ಬೆಳೆಯಲು ಕಾರಣಾದ ಬೆತ್ತಲೆ ಸತ್ಯದ ಹುತ್ತ ಬಿಚ್ಚಿಕೊಂಡಿದೆ. ಇದಕ್ಕೇನು ಹೇಳುತ್ತೀರಿ?" ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
2006ರಲ್ಲಿ ಜೆಡಿಎಸ್ ದೆಸೆಯಿಂದ ಅಧಿಕಾರದ ರುಚಿ ಕಂಡ ಬಿಜೆಪಿಗೆ ಅಡ್ಡದಾರಿಯಲ್ಲಿ ಅಧಿಕಾರ ಹಿಡಿಯುವುದು ಚಾಳಿ ಆಗಿಬಿಟ್ಟಿದೆ. ಆ ನಂತರ ʼಆಪರೇಷನ್ ಕಮಲʼ ಎಂಬ ಅನೈತಿಕ ದಾರಿಯಲ್ಲಿ ಅಧಿಕಾರಕ್ಕೆ ಬಂದು ಪ್ರಜಾಪ್ರಭುತ್ವದ ಅಡಿಪಾಯವನ್ನೇ ಬಿಜೆಪಿ ಅಭದ್ರಗೊಳಿಸಿದೆ. 1/6#ಬಿಜೆಪಿ_ಮತ್ತು_ಕಳ್ಳವೋಟು#ಕಳ್ಳ_ವೋಟುಗಳ_ಕಮಲ pic.twitter.com/CO9fBia4Eg
— H D Kumaraswamy (@hd_kumaraswamy) May 21, 2022
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, "1998ರ ವಿಧಾನಸಭೆ ಉಪ ಚುನಾವಣೆಯಲ್ಲಿ ಉತ್ತರಹಳ್ಳಿ ಕ್ಷೇತ್ರದಿಂದ ಕಂದಾಯ ಸಚಿವ ಆರ್. ಅಶೋಕ ಸ್ಪರ್ಧಿಸಿದಾಗ, ಯಲಹಂಕದಿಂದ 1 ಸಾವಿರ ಕಾರ್ಯಕರ್ತರು ತಲಾ ಐದು, ಹತ್ತು ಕಳ್ಳ ಓಟು ಹಾಕಿ ಗೆಲ್ಲಿಸಿದ್ದರು. ಅಂತಹ ಕೃತ್ಯಗಳಿಂದಲೇ ಇಂದು ಬಿಜೆಪಿ ಗೆದ್ದು ಬಹುಮತದಿಂದ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಅವರ ಪಕ್ಷದ ನಾಯಕರೇ ತುಂಬಿದ ಸಭೆಯಲ್ಲಿ ಹೇಳಿದ್ದಾರೆ" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿ ಕಾಲು ಎಳೆದಿದ್ದಾರೆ.
"ಅಲ್ಲದೇ 2006 ರಲ್ಲಿ ಜೆಡಿಎಸ್ ದೆಸೆಯಿಂದ ಅಧಿಕಾರ ರುಚಿಕಂಡ ಬಿಜೆಪಿಗೆ ಅಡ್ಡದಾರಿಯಲ್ಲಿ ಅಧಿಕಾರ ಹಿಡಿಯುವ ಚಾಳಿ ಆಗಿ ಬಿಟ್ಟಿದೆ. ಆ ನಂತರ ಆಪರೇಷನ್ ಕಮಲ ಮೂಲಕ ಅನೈತಿಕ ದಾರಿಯಲ್ಲಿ ಅಧಿಕಾರಕ್ಕೆ ಬಂದು ಪ್ರಜಾಪ್ರಭುತ್ವದ ಅಡಿಪಾಯವನ್ನೇ ಬಿಜೆಪಿ ಅಭದ್ರಗೊಳಿಸಿದೆ" ಎಂದು ಕುಮಾರಸ್ವಾಮಿ ಆರೋಪ ಮಾಡಿದರು.
ಮುನಿರಾಜು ಹೇಳಿಕೆ ವೈರಲ್: ಸಾರ್ವಜನಿಕ ಸಭೆಯಲ್ಲಿ ಮಾಜಿ ಶಾಸಕ ಮುನಿರಾಜು ನೀಡಿರುವ ಉತ್ತರಹಳ್ಳಿ ವಿಧಾನಸಭೆ ಉಪ ಚುನಾವಣೆ ಗೆಲುವಿನ ಸೀಕ್ರೇಟ್ ಹೇಳಿಕೆ ವಿಡಿಯೋ ವೈರಲ್ ಆಗಿದೆ. ಇದು ಒಂದು ರೀತಿಯಲ್ಲಿ ಬಿಜೆಪಿಗೆ ಇರುಸು ಮುರುಸು ತಂದಿಟ್ಟಿದೆ.
Recommended Video