ಟ್ವಿಟ್ಟರ್ ಹ್ಯಾಕ್ ಆಗಿಲ್ಲ, ಇದು ನನ್ನದೇ ಖಾತೆ : ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಖಾತೆಯನ್ನೂ ಯಾರೋ ಹ್ಯಾಕ್ ಮಾಡಿದ್ದು, ಸುದೀಪ್ ವಿರುದ್ಧ ಗೆಳತನವನ್ನು ಕತ್ತರಿಸಿಕೊಂಡಿದ್ದಾರೆ ಎಂದು ಯಾರೋ ಟ್ವೀಟ್ ಮಾಡಿ ಅವರಿಬ್ಬರ ಗೆಳೆತನದ ನಡುವೆ ಹುಳಿ ಹಿಂಡಲು ಯತ್ನಿಸಿದ್ದಾರೆ ಎಂದು ಅಂದುಕೊಳ್ಳಲಾಗಿತ್ತು
ಬೆಂಗಳೂರು, ಮಾರ್ಚ್ 06 : ಪಾಸ್ವರ್ಡ್ ಗಳು ದುರ್ಬಲವಾಗಿದ್ದರೆ ಟ್ವಿಟ್ಟರ್ ಖಾತೆಗಳನ್ನು ಈಗಿನ ಕಾಲದಲ್ಲಿ ಯಾರು ಬೇಕಾದರೂ ಹ್ಯಾಕ್ ಮಾಡಬಹುದಾದಂಥ ಸಂದರ್ಭದಲ್ಲಿ ಜನಪ್ರಿಯ ಸೋಷಿಯಲ್ ಮೀಡಿಯಾ ಜಾಲತಾಣದಲ್ಲಿ ಹಲವಾರು ಅಪಸವ್ಯಗಳು ನಡೆಯುತ್ತಲೇ ಇವೆ.
ಕೆಲ ದಿನಗಳಿಂದ ಸುಚಿತ್ರಾ ಕಾರ್ತಿಕ್ ಎಂಬ ಮಲ್ಲು ಸಂಗೀತಗಾರ್ತಿಯ ಟ್ವೀಟ್ ಖಾತೆ, ಹಲವರ ಲೈಂಗಿಕ ಹಗರಣಗಳನ್ನು ಬಯಲಿಗೆಳೆದಿದ್ದು ಮಾತ್ರವಲ್ಲ, ಚಿತ್ರರಂಗದ ವಿರುದ್ಧ ಮಾತ್ರವಲ್ಲ ಸೋಷಿಯಲ್ ತಾಣದ ಮೇಲೆ ಕೂಡ ಅಸಹ್ಯ ಬರುವಂತೆ ಮಾಡಿದೆ.[ಜಗ್ಗೇಶ್ ಕರೆದರೆಂದು ದರ್ಶನ್ ಮೈಸೂರಿಗೆ ಬಂದದ್ದು ಯಾಕೆ ಅಂತ ತಿಳ್ಕಳಿ]
ಇದರಲ್ಲಿ ಕನ್ನಡತಿ ಸಂಚಿತಾ ಶೆಟ್ಟಿ ಸೇರಿದಂತೆ ಹಲವರ ಅಸಹ್ಯಕರ ವಿಡಿಯೋಗಳು ಹರಿದಾಡುತ್ತಿವೆ. ಇದು ನನ್ನ ಕೆಲಸವಲ್ಲ, ನನ್ನ ಟ್ವಿಟ್ಟರ್ ಖಾತೆಯನ್ನು ಯೋರೋ ಹ್ಯಾಕ್ ಮಾಡಿದ್ದಾರೆ ಎಂದು ಸುಚಿತ್ರಾ ಸಮಜಾಯಿಷಿ ಕೊಟ್ಟಿದ್ದಾರೆ. ಸಂಚಿತಾ ಕೂಡ ಆ ವಿಡಿಯೋ ನನ್ನದಲ್ಲವೇ ಅಲ್ಲ ಎಂದು ತಲೆಯಲ್ಲಾಡಿಸುತ್ತಿದ್ದಾರೆ.
ಈಗ ಕನ್ನಡ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಖಾತೆಯನ್ನೂ ಯಾರೋ ಹ್ಯಾಕ್ ಮಾಡಿದ್ದು, ಸುದೀಪ್ ವಿರುದ್ಧ ತಮ್ಮ ಗೆಳತನವನ್ನು ಕತ್ತರಿಸಿಕೊಂಡಿದ್ದಾರೆ ಎಂದು ಯಾರೋ ಟ್ವೀಟ್ ಮಾಡಿ ಅವರಿಬ್ಬರ ಗೆಳೆತನದ ನಡುವೆ ಹುಳಿ ಹಿಂಡಲು ಯತ್ನಿಸಿದ್ದಾರೆ ಎಂದು ಅಂದುಕೊಳ್ಳಲಾಗಿತ್ತು. [ಒತ್ತುವರಿ ತೆರವು ಪ್ರಶ್ನಿಸಿ ನಟ ದರ್ಶನ್ ರಿಟ್ ಅರ್ಜಿ]
ಯಾರೇನು ಹ್ಯಾಕ್ ಮಾಡಿಲ್ಲ : ದರ್ಶನ್
ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ದರ್ಶನ್ ಅವರೇ, "ಕೆಲ ಚಾನೆಲ್ಸ್ ಹೇಳುವಂತೆ ಯಾರೇನು ಹ್ಯಾಕ್ ಮಾಡಿಲ್ಲ. ಇದು ನನ್ನ ಖಾತೆ, ನನ್ನ ಮಾತುಗಳೇ. ನನ್ನ ಗಮನಕ್ಕೆ ಬಂದ ಸಂಗತಿಗಳನ್ನು ಆಲೋಚಿಸಿಯೇ ನಾನು ಹೇಳಲು ಬಯಸುವ ವೇದಿಕೆ" ಎಂದು ಸ್ವತಃ ದರ್ಶನ್ ಅವರೇ ಟ್ವೀಟ್ ಮಾಡಿದ್ದು ಅವರಿಬ್ಬರ ಸ್ನೇಹಕ್ಕೆ ಮತ್ತೆ ಚ್ಯುತಿಯುಂಟಾಗಿದೆ. [ದರ್ಶನ್ ಹೆಸರು ಹೇಳುತ್ತಲೇ ಮುಖ ತಿರುಗಿಸಿ ನಡೆದ ಸುದೀಪ್!]
ಅಪಾರ್ಥಗಳಿಗೆ, ಅನರ್ಥಗಳಿಗೆ ಕಾರಣ
ಇದಕ್ಕೆಲ್ಲ ಕಾರಣ, ಯಾವುದೋ ಹಳೆಯದಾದ ವಿಡಿಯೋದಲ್ಲಿ ಸುದೀಪ್ ಅವರು, ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ನಾನೇ ಕಾರಣ ಎಂದು ಹೇಳಿರುವುದು ಈ ಎಲ್ಲ ಅಪಾರ್ಥಗಳಿಗೆ, ಅನರ್ಥಗಳಿಗೆ, ಸ್ನೇಹ ಒಡೆಯಲು ಕಾರಣವಾಗಿದೆ. ಆ ವಿಡಿಯೋವನ್ನು ದರ್ಶನ್ ಅಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತಾ ಎಂಬುದು ಪ್ರಶ್ನೆ.
ಅಭಿಮಾನಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ
ದರ್ಶನ್ ಮತ್ತು ಸುದೀಪ್ ಅವರ ಅಭಿಮಾನಿಗಳು ಇದನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಒಬ್ಬರು, "ಯಾವುದೋ ಹಳೆ ವಿಡಿಯೋ ನೋಡಿ ಈ ಮಾತು ಹೇಳುತ್ತಿದ್ದೀರಲ್ಲ, ಅದೇ ವಿಡಿಯೋಲಿ ನಿಮ್ ಬಗ್ಗೆ ಎಷ್ಟೋ ಒಳ್ಳೆ ಮಾತುಗಳು ಆಡಿದ್ದಾರೆ ಅದು ನಿಮ್ಮ ಮನಸಿಗೆ ಮುಟ್ಟಿಲ್ಲ ಅಲ್ವಾ?" ಎಂದು ದರ್ಶನ್ ಅವರನ್ನು ಪ್ರಶ್ನಿಸಿದ್ದಾರೆ.
ಅನರ್ಥ ಮಾಡಿಕೊಂಡ್ರಿ ಸಾವಿರ ಅರ್ಥಗಳು ಹುಟ್ತವೆ
"ನಾನೇ ಚಾನ್ಸ್ ಕೊಡಿಸಿದ್ದು ಅಂತ ಹೇಳಿಲ್ಲ. ನನಗೆ ಮಾಡೋಕೆ ಆಗಲ್ಲ, ಅಲ್ಲಿ ಒಬ್ರು ಇದಾರೆ ಅವರನ್ನ ನೀವು ಯಾಕ್ ಅಪ್ರೋಚ್ ಮಾಡಬಾರದು ಅಂತ ಹೇಳಿದ್ದು. ಹಾಗ್ ಅರ್ಥ ಮಾಡಿಕೊಂಡರೆ 1000 ಅರ್ಥಗಳು ಹುಟ್ಟುತ್ತಾವೆ ಫ್ರೆಂಡ್ಸ್". ದಯವಿಟ್ಟು ನಿಮ್ಮ ಸ್ನೇಹವನ್ನು ತ್ಯಜಿಸಬೇಡಿ ಎಂದು ರವಿ ಕಟ್ಟಿಮನಿ ಎಂಬುವವರು ಪುಗಸಟ್ಟೆ ಸಲಹೆ ನೀಡಿದ್ದಾರೆ.
ನಟರಿಬ್ಬರು ಕಿತ್ತಾಡಿಕೊಳ್ಳುತ್ತಿರವಾಗ
ಕಿಚ್ಚ ದಚ್ಚುರನ್ನು ದೂರ ಮಾಡಲು ಕೆಲವರು ಕಾಯ್ತಿರ್ತಾರೆ. ಇವರಿಬ್ಬರೂ ದೂರವಾದರೂ, ಅವರಿಬ್ಬರ ಅಭಿಮಾನಿಗಳು ಮಾತ್ರ ದೂರವಾಗುವುದಿಲ್ಲ ಎಂದು ಇಬ್ಬರ ಕಟ್ಟಾ ಅಭಿಮಾನಿಯೊಬ್ಬರು ಟ್ವೀಟಿಸಿದ್ದಾರೆ. ಇದು ನಿಜಕ್ಕೂ ಅಪರೂಪ. ನಟರಿಬ್ಬರು ಸರಿಯಾಗಿದ್ದರೂ ಅವರ ಅಭಿಮಾನಿಗಳು ಕಿತ್ತಾಡಿಕೊಳ್ಳುವುದು ಸಾಮಾನ್ಯ. ಇಲ್ಲಿ ನಟರಿಬ್ಬರು ಕಿತ್ತಾಡಿಕೊಳ್ಳುತ್ತಿರುವಾಗ ಅಭಿಮಾನಿಗಳು ಒಗ್ಗಟ್ಟಾಗಿರುವುದು ಅಪರೂಪವಲ್ಲವೆ?
ದರ್ಶನ್ ರವರ ಶ್ರಮಕೆ ಏನು ಬೆಲೆ ಇಲ್ಲವಾ?
ಕಷ್ಟ ಪಟ್ಟು ಮೇಲೆ ಬಂದಿರೋ ವ್ಯಕ್ತಿ ದರ್ಶನ್, ಅದ್ನ ಸೈಲೆಂಟ್ ಆಗಿ ನಾನೇ ಮಾಡಿದ್ದು ಅಂದ್ರೆ ಹೆಂಗೆ ಆಗಬಾರದು.. ದರ್ಶನ್ ರವರ ಶ್ರಮಕೆ ಏನು ಬೆಲೆ ಇಲ್ಲವಾ? ಎಂದು ಒಬ್ಬರು ಅವರ ಪರವಾಗಿ ನಿಂತಿದ್ದರೆ, ಮತ್ತೊಬ್ಬರು, ಐದು ವರ್ಷಗಳ ಹಿಂದೆ ನೀಡಿದ್ದ ಸಂದರ್ಶದಲ್ಲಿ ಆಡಿರುವ ಮಾತಿಗೆ ಈಗ ಪ್ರತಿಕ್ರಿಯಿಸುವ ಹರಕತ್ತೇನಿದೆ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಲೈವ್ ಬಂದು ಹೇಳಿ, ಆವಾಗ್ಲೇ ನಂಬೋದು
ಹ್ಯಾಕ್ ಬಗ್ಗೆ ತಿಳಿದುಕೊಂಡಿರುವ ವ್ಯಕ್ತಿಯೊಬ್ಬರು, "ಒಂದು ಸಲ ಲೈವ್ ಬಂದು ಹೇಳಿ, ಇಲ್ಲ ಒಂದು ವಿಡಿಯೋ ಮಾಡಿ ಕಳುಹಿಸಿ. ಅವಾಗ್ಲೇ ನಾವು ನಂಬೋದು ಈ ನ್ಯೂಸ್ ಚಾನೆಲ್ ಗಳು ಅಲ್ಲಿಯವರೆಗೆ #Hacked ಅಂತ ಹೇಳ್ತಾರೆ" ಎಂದು ನುಡಿದಿದ್ದಾರೆ. ಇದಕ್ಕೆ ದರ್ಶನ್ ಅವರೇ ಯಾವುದೋ ಚಾನಲ್ಲಿಗೆ ಬಂದು ಅಥವಾ ವಿಡಿಯೋ ಮಾಡಿ, ನಮ್ಮಿಬ್ಬರ ಸ್ನೇಹ ಇಲ್ಲಿಗೆ ಮುಗಿಯಿತು ಎಂದು ಹೇಳುತ್ತಾರೆಯೆ?