ದಂಡುಪಾಳ್ಯ ಗ್ಯಾಂಗ್ ತಕ್ಷಣ ಬಿಡುಗಡೆಗೆ ಸೂಚನೆ
ಬೆಂಗಳೂರು, ಮಾ.14: ದಂಡುಪಾಳ್ಯ ಗ್ಯಾಂಗ್ ನ ಆರು ಜನ ಆರೋಪಿಗಳನ್ನು ಹೈಕೋರ್ಟ್ ಪ್ರಕರಣದಿಂದ ಖುಲಾಸೆಗೊಳಿಸಿದೆ. ಹಾಸನ ಹಾಗೂ ತುಮಕೂರಿನಲ್ಲಿ ನಡೆದಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಕೃಷ್ಣ, ದೊಡ್ಡ ಹನುಮ, ತಿಮ್ಮ, ವೆಂಕಟರಾಮ, ಮುನಿಕೃಷ್ಣ ಹಾಗೂ ಚಿಕ್ಕ ಮುನಿಯಪ್ಪ ಎಂಬವರಿಗೆ 2010ರಲ್ಲಿ ಸೆಷನ್ಸ್ ನ್ಯಾಯಾಲಯವು ಮರಣದಂಡನೆ ವಿಧಿಸಿ ಆದೇಶ ಹೊರಡಿಸಿತ್ತು.
ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಆರು ಜನ ಆರೋಪಿಗಳನ್ನು ತುಮಕೂರು ಹಾಗೂ ಹಾಸನ ಪ್ರಕರಣಗಳಲ್ಲಿ ಆರೋಪಮುಕ್ತಗೊಳಿಸಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ 1996ರಲ್ಲಿ ನಡೆದಿದ್ದ ಒಂಟಿ ಮಹಿಳೆಯರ ಸರಣಿ ಕೊಲೆ ಹಾಗೂ ದರೋಡೆ ಆರೋಪದಲ್ಲಿ ದಂಡುಪಾಳ್ಯದ ಡೊಡ್ಡಹನುಮ ಸೇರಿದಂತೆ ಆರು ಜನ ಅರೋಪಿಗಳಿಗೆ ಆಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ಗುರುವಾರ ರದ್ದು ಪಡಿಸಿದೆ.
ಅಧೀನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಕೆ. ಭಕ್ತವತ್ಸಲ ಹಾಗೂ ನ್ಯಾ.ಕೆ.ಎನ್. ಕೇಶವ ನಾರಾಯಣ ಅವರಿದ್ದ ವಿಭಾಗೀಯ ಪೀಠ ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ ನಡೆದಿದ್ದ ಒಂಟಿ ಮಹಿಳೆಯರ ಕೊಲೆ ದರೋಡೆ ಪ್ರಕರಣಗಳಿಗೆ ಸೂಕ್ತ ಸಾಕ್ಷಾಧಾರಗಳಿಲ್ಲದ ಕಾರಣ ಆರೋಪಿಗಳನ್ನು ಆರೋಪದಿಂದ ಮುಕ್ತಗೊಳಿಸಿದ್ದು, ಈ ಆರೋಪಿಗಳು ಕೆಳ ಹಂತದ ಇತರೆ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಅಗತ್ಯವಿಲ್ಲದಿದ್ದಲ್ಲಿ ತಕ್ಷಣ ಬಿಡುಗಡೆ ಮಾಡುವಂತೆ ಸೂಚಿಸಿದೆ.
ದಂಡುಪಾಳ್ಯ ಗ್ಯಾಂಗಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು
1996ರಿಂದ 1999ರ ವರೆಗೂ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಸರಣಿ ಕೊಲೆ, ದರೋಡೆ ಆರೋಪದಲ್ಲಿ ಬಂಧಿತರಾಗಿದ್ದ ದೊಡ್ಡಹನುಮ, ಕೃಷ್ಣಾ, ತಿಮ್ಮ, ವೆಂಕಟರಾಮು, ಮುನಿಕೃಷ್ಣ, ಚಿಕ್ಕಮುನಿಯ ಎಂಬವರನ್ನು ಅಧೀನ ನ್ಯಾಯಾಲಯ 2010ರ ಆಗಸ್ಟ್ 8ರಂದು ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿಲಾಗಿತ್ತು.
ಸ್ಪಷ್ಟ ಪುರಾವೆಗಳು ಲಭ್ಯವಿಲ್ಲದ ಕಾರಣ ಖುಲಾಸೆ
ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ವಿಭಾಗೀಯ ನ್ಯಾಯಪೀಠ, ಪ್ರಕರಣದಲ್ಲಿ ಭಾಗಿಯಾಗಿದ್ದರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಪುರಾವೆಗಳು ಲಭ್ಯವಿರಲ್ಲ. ಆದರೆ, ಅಧೀನ ನ್ಯಾಯಾಲಯ ಸಂಗ್ರಹಿಸಿದ್ದ ವೌಕಿಕ ಸಾಕ್ಷಿಗಳನ್ನು ಪರಿಗಣಿಸಿ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಹೈಕೋರ್ಟ್ ನ್ಯಾ ಕೆ.ಎನ್ ಕೇಶವನಾರಾಯಣ ಹಾಗೂ ನ್ಯಾ.ಕೆ ಭಕ್ತವತ್ಸಲ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ದರೋಡೆ ನಿಜ, ಕೊಲೆ ಮಾಡಿದ್ದಕ್ಕೆ ಸಾಕ್ಷಿಗಳಿಲ್ಲ
1996ರಲ್ಲಿ ನಡೆದ ಪ್ರಕರಣಗಳಿಗೆ 1999ರಲ್ಲಿ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಅಲ್ಲದೆ, ಈ ಆರೋಪಿಗಳ ವಿರುದ್ಧ ದರೋಡೆಗೆ ಸಂಬಂಧಿಸಿದ ಸಾಕ್ಷಗಳಿದ್ದರೂ, ಕೊಲೆ ಮಾಡಿರುವುದಕ್ಕೆ ಸಾಕ್ಷಗಳಿಲ್ಲ ಎಂದು ಅಭಿ ಪ್ರಾಯ ವ್ಯಕ್ತಪಡಿಸಿರುವ ಪೀಠ, ಆರೋಪಿಗಳನ್ನು ಬಿಡುಗಡೆ ಮಾಡುವಂತೆ ನ್ಯಾ ಕೆ.ಎನ್ ಕೇಶವನಾರಾಯಣ ಹಾಗೂ ನ್ಯಾ.ಕೆ ಭಕ್ತವತ್ಸಲ ಅವರಿದ್ದ ವಿಭಾಗೀಯ ಪೀಠ ಸೂಚಿಸಿ ಆದೇಶಿಸಿದೆ.
ಡೆಡ್ಲಿ ದಂಡುಪಾಳ್ಯ ಗ್ಯಾಂಗ್ ನ ಹಿನ್ನೆಲೆ ಏನು?
ರಾಜ್ಯದ ಹಲವೆಡೆ 1996ರಿಂದ 1999ರವರೆಗೂ ಒಂಟಿ ಮಹಿಳೆಯರನ್ನು ಅತ್ಯಾಚಾರ ನಡೆಸಿ ಕತ್ತು ಸೀಳಿ ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಿದ್ದ ಪ್ರಕರಣ ನಡೆದಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಏಳು ಜನ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ರಾಜ್ಯದ ಎಲ್ಲ ಭಾಗಗಳಲ್ಲಿ ನಡೆದ ಪ್ರಕರಣಗಳನ್ನು ಒಂದೇ ರೀತಿಯ ಪ್ರಕರಣಗಳನ್ನಾಗಿ ಪರಿಗಣಿಸಿ ವಿಚಾರಣೆ ನಡೆಸಿ, ಒಬ್ಬರನ್ನು ಖುಲಾಸೆ ಮಾಡಿತ್ತು. ಅಲ್ಲದೆ, ಇನ್ನುಳಿದ ಆರು ಮಂದಿ ಆರೋಪಿಗಳ ವಿರುದ್ಧ ಸೂಕ್ತ ಪುರಾವೆ ಗಳಿಲ್ಲದಿದ್ದರೂ, ವೌಖಿಕವಾಗಿ ಸಾಕ್ಷಗಳನ್ನು ಪಡೆದು ಗಲ್ಲು ಶಿಕ್ಷೆ ನೀಡಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿದ್ದ ಅಪರಾಧಿಗಳು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಹಲಸೂರಿನ ಕೊಲೆ ಪ್ರಕರಣದಲ್ಲೂ ಶಿಕ್ಷೆ
ಬೆಂಗಳೂರಿನ ಹಲಸೂರಿನ ರಾಮಕೃಷ್ಣಯ್ಯ(72) ಎಂಬುವರ ಹತ್ಯೆ 2003ರಲ್ಲಿ ಇದೇ ಗ್ಯಾಂಗಿನಿಂದ ನಡೆದಿದ್ದು ತಿಳಿದು ಜನತೆ ಮತ್ತೊಮ್ಮೆ ಬೆಚ್ಚಿ ಬಿದ್ದರು. ದಂಡು ಪಾಳ್ಯ ಗ್ಯಾಂಗಿಗೆ ಸಿಟಿ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೇ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್ ನ್ಯಾ. ವಿಜಿ ಸಭಾಹಿತ್ ಅವರಿದ್ದ ವಿಭಾಗೀಯ ಪೀಠ ಕೃಷ್ಣ, ನಲ್ಲತಿಮ್ಮ, ದೊಡ್ಡ ಹನುಮ ಅಲಿಯಾಸ್ ಹನುಮ, ಲಕ್ಷ್ಮಿ ಹಾಗೂ ವೆಂಕಟೇಶ್ ಅಲಿಯಾಸ್ ಚಂದ್ರ ಅವರಿಗೆ ಜೀವಾವಧಿ ಶಿಕ್ಷೆ ನೀಡಿದ್ದರು.