ಜೆಪಿನಗರದ ದಾಲ್ಮಿಯಾ ಜಂಕ್ಷನ್ ಮೇಲ್ಸೇತುವೆ ಸಾರ್ವಜನಿಕರಿಗೆ ಮುಕ್ತ
ಬೆಂಗಳೂರು, ಮಾರ್ಚ್ 03: ಜೆಪಿನಗರದ ದಾಲ್ಮಿಯಾ ಜಂಕ್ಷನ್ ಮೇಲ್ಸೇತುವೆಯನ್ನು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮತ್ತು ಗೇಹ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಉದ್ಘಾಟಿಸಿದರು.
ಈ ಸೇತುವೆಯು ದ್ವಿಮುಖ ಸಂಚಾರದ ನಾಲ್ಕು ಪಥಗಳನ್ನು ಹೊಂದಿದೆ. ಸೇತುವೆಯಿಂದಾಗಿ ಮೈಸೂರು ರಸ್ತೆ ಹಾಗೂ ಕನಕಪುರ ರಸ್ತೆ ಕಡೆಯಿಂದ ಬನ್ನೇರುಘಟ್ಟ ರಸ್ತೆ ಕಡೆಗೆ ಹೋಗುವವರು ಹಾಗೂ ಬನ್ನೇರುಘಟ್ಟ ರಸ್ತೆ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಹೋಗುವವರಿಗೆ ಅನುಕೂಲವಾಗಲಿದೆ.
ಕಾಮಗಾರಿ ಪೂರ್ಣವಾಗದಿದ್ದರೂ ಮೇಲ್ಸೇತುವೆ ಉದ್ಘಾಟನೆ?
ಮುಖ್ಯಮಂತ್ರಿ ಅವರ ನಗರೋತ್ಥಾನ ಅನುದಾನದಡಿ ಈ ಮೇಲ್ಸೇತುವೆ ಕಾಮಗಾರಿ ಕೈಗೊಳ್ಳಲಾಗಿತ್ತು. ಎಂ.ವೆಂಕಟರಾವ್ ಇನ್ಫ್ರಾ ಪ್ರಾಜೆಕ್ಟ್ ಕಂಪನಿಯು ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿತ್ತು.
2015ರ ಸೆಪ್ಟೆಂಬರ್ 1ರಂದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 19 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗಡುವು ವಿಧಿಸಲಾಗಿತ್ತು. ಆದರೆ, ಎರಡೂವರೆ ವರ್ಷಗಳ ಬಳಿಕ ಕಾಮಗಾರಿ ಪೂರ್ಣಗೊಂಡಿದೆ. ಸೇತುವೆಯು 291 ಮೀಟರ್ ಉದ್ದವಿದ್ದು 25.89ಕೋಟಿ ವೆಚ್ಚಮಾಡಲಾಗಿದೆ.
'ಡಾಲರ್ಸ್ ಕಾಲೊನಿಯಲ್ಲಿ ರಾಜಕಾಲುವೆಗಳನ್ನು ನಿರ್ಮಿಸಿಲ್ಲ. ಇದರಿಂದ ಮಳೆಗಾಲದಲ್ಲಿ ಈ ಪ್ರದೇಶವು ಮುಳುಗಡೆಯಾಗುತ್ತದೆ. ರಾಜಕಾಲುವೆ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಕೈಗೊಳ್ಳಬೇಕು ಎಂದು ಶಾಸಕ ಬಿ.ಎನ್.ವಿಜಯಕುಮಾರ್ ಅವರು ಮನವಿ ಮಾಡಿದರು.