ಬಿಬಿಎಂಪಿ ಬಜೆಟ್ ಅನುಷ್ಠಾನಗೊಳಿಸದಂತೆ ದಲಿತ ಸಂಘಟನೆಗಳ ಆಗ್ರಹ
ಬೆಂಗಳೂರು ಮೇ 29: ಪ್ರಸಕ್ತ ಸಾಲಿನ ಬಿಬಿಎಂಪಿ ಬಜೆಟನ್ನು ಅನುಷ್ಠಾನಗೊಳಿಸಲು ಅವಕಾಶ ನೀಡಬಾರದು ಎಂದು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಹಾಗೂ ಜಾಗೃತಿ ಮತ್ತು ಉಸ್ತವಾರಿ ಸಮಿತಿ ಸದಸ್ಯರು ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ಡಾ. ಸಿ ಎಸ್ ರಘು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ದಲಿತರು ಹಾಗೂ ಹಿಂದುಳಿದ ವರ್ಗಗಳ ಅಭ್ಯುದಯಕ್ಕೆ ಹಾಗೂ ಪ್ರತಿ ಆಯವ್ಯಯದಲ್ಲೂ ಶೇಕಡಾ 24.10 ರಷ್ಟು ಹಣವನ್ನು ಮೀಸಲಿಡಬೇಕು ಎನ್ನುವ ಕಾನೂನನ್ನು 2020-21 ನೇ ಸಾಲಿನ ಬಿಬಿಎಂಪಿ ಆಯವ್ಯಯದಲ್ಲಿ ಪಾಲಿಸಲಾಗಿಲ್ಲ.
ನಗರ ಸ್ಥಳೀಯ ಸಂಸ್ಥೆಗಳ ತೆರಿಗೆ ಹೆಚ್ಚಳಕ್ಕೆ ಖಂಡನೆ
800 ಕೋಟಿಗಳಿಗೂ ಅಧಿಕ ಹಣವನ್ನು ಮೀಸಲಿಡಬೇಕಾಗಿದ್ದ ಆಯವ್ಯಯದಲ್ಲಿ ಕೇವಲ 400 ಕೋಟಿ ರೂಪಾಯಿಗಳನ್ನು ದಲಿತರ ಅಭಿವೃದ್ದಿ ಅನುದಾನವನ್ನು ಮೀಸಲಿಟ್ಟಿದ್ದು, ಕಾನೂನು ಪಾಲಿಸದೇ ಇರುವ ಬಿಬಿಎಂಪಿ ಬಜೆಟನ್ನು ಅನುಷ್ಠಾನಗೊಳಿಸಬಾರದು ಎಂದಿದ್ದಾರೆ.
ಬಿಬಿಎಂಪಿ ಆಯುಕ್ತರಾದ ಅನಿಲ್ ಗೆ ಮನವಿ
ಈ ಬಗ್ಗೆ ಸ್ಪಷ್ಟಿಕರಣ ನೀಡುವಂತೆ ಆಗ್ರಹಿಸಿ ಬಿಬಿಎಂಪಿ ಆಯುಕ್ತರಾದ ಅನಿಲ್ ಕುಮಾರ್ ಅವರಿಗೆ ಪತ್ರವನ್ನು ಬರೆದಿದ್ದು, ಇದಕ್ಕೆ ಆಯುಕ್ತರು ತಮ್ಮ ಉತ್ತರದಲ್ಲಿ ಸ್ಪಷ್ಟ ಉತ್ತರ ನೀಡದೆ ಜಾರಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ, ಆಯವ್ಯಯವನ್ನು ಪರಿಷ್ಕರಣೆ ಮಾಡದೆ ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನ ಆಯವ್ಯಯವನ್ನು ಅನುಷ್ಠಾನಗೊಳಿಸಲು ಅವಕಾಶ ನೀಡದಂತೆ ಆಗ್ರಹಿಸಿ ಇಂದು ಡಾ ಸಿ ಎಸ್ ರಘು ನೇತೃತ್ವದ ತಂಡ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ, ಪರಿಶಿಷ್ಟ ಜಾತಿ ಹಾಗೂ ಪಂಡಗಳ ಆಯೋಗ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದರು.
ಡಾ ಸಿ ಎಸ್ ರಘು ಮಾತನಾಡಿ
ನಂತರ ಮಾತನಾಡಿದ ಡಾ ಸಿ ಎಸ್ ರಘು, ದೇಶದ ಸಂವಿಧಾನದಲ್ಲೇ ದಲಿತರ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗಾಗಿ ಆಯವ್ಯಯದಲ್ಲಿ ಶೇಕಡಾ 24.10 ರಷ್ಟು ಮೀಸಲಿಡುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಇದರ ಬಗ್ಗೆ ಜಾಣ ಮರೆವು ತೋರಿಸುತ್ತಿರುವ ಬಿಬಿಎಂಪಿ 800 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಮೀಸಲಿಡುವ ಜಾಗದಲ್ಲಿ ಕೇವಲ 400 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಇದು ದೇಶದ ಸಂವಿಧಾನ ಹಾಗೂ ಕಾನೂನಿನ ವಿರುದ್ದವಾಗಿದೆ. ಮೂಲಭೂತ ಅಂಶಗಳನ್ನೇ ಪಾಲಿಸದೇ ಇರುವ ಆಯವ್ಯಯವನ್ನು ಅನುಷ್ಠಾನಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.
ಕೊರೊನಾ ನಿಯಂತ್ರಣದಲ್ಲಲ್ಲ, ಭ್ರಷ್ಟಾಚಾರದಲ್ಲಿ ಬಿಬಿಎಂಪಿ ಮುಂದು: ಎಎಪಿ
ಉಡಾಫೆ ಉತ್ತರವನ್ನು ನೀಡಿದ್ದಾರೆ
ಈ ಬಗ್ಗೆ ಆಯುಕ್ತರಾದ ಅನಿಲ್ ಕುಮಾರ್ ಅವರಿಗೆ ಸ್ಪಷ್ಟಣೆ ಕೋರಿ ಬರೆದಿರುವ ಪತ್ರಕ್ಕೆ ಉತ್ತರವಾಗಿ ಎಸ್.ಟಿ/ಎಸ್.ಸಿ ವರ್ಗದ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಡಬೇಕಾದ ಅನುದಾದಲ್ಲಿ ವ್ಯತ್ಯಾಸವುಂಟಾದಲ್ಲಿ ಸದರಿ ವ್ಯತ್ಯಾಸವನ್ನು ಪಾಲಿಕೆಯ ಪರಿಷ್ಕೃತ ಆಯವ್ಯಯದಲ್ಲಿ ಅಳವಡಿಕೊಳ್ಳವುದಾಗಿ ಉಡಾಫೆ ಉತ್ತರವನ್ನು ನೀಡಿದ್ದಾರೆ. ಸಂವಿಧಾನದ ಮೂಲ ಅಂಶಗಳನ್ನೇ ಗಾಳಿಗೆ ತೂರುವಂತಹ ಕ್ರಮಕ್ಕೆ ಮುಂದಾಗಿರುವುದರ ವಿರುದ್ದ ಇಂದು ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ, ಪರಿಶಿಷ್ಟ ಜಾತಿ ಹಾಗೂ ಪಂಡಗಳ ಆಯೋಗ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ದೂರ ನೀಡಿದ್ದೇವೆ.
ಸರಕಾರವೂ ಉದಾಸೀನ ಮನೋಭಾವನೆ ತೋರಿದೆ
ರಾಜ್ಯ ಸರಕಾರ ಈ ಆಯವ್ಯಯಕ್ಕೆ ಅನುಮೋದನೆ ನೀಡುವ ಮುನ್ನ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕಲ್ಯಾಣ ನಿಧಿಗೆ ಮೀಸಲಿಟ್ಟಿರುವ ನಿಧಿಯ ಬಗ್ಗೆ ಸರಿಯಾದ ತನಿಖೆ ಮಾಡಬೇಕಾಗಿತ್ತು. ಆದರೆ, ಈ ಬಗ್ಗೆ ರಾಜ್ಯ ಸರಕಾರವೂ ಉದಾಸೀನ ಮನೋಭಾವನೆಯನ್ನು ತೋರಿಸಿದೆ. ತಕ್ಷಣ ಈ ಆಯವ್ಯಯವನ್ನು ಪರಿಷ್ಕರಣೆ ಮಾಡಬೇಕು. ಇಲ್ಲದೆ ಇದ್ದಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಹಾಗೂ ಬಿಬಿಎಂಪಿ ಕಚೇರಿಯ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು. ಹಾಗೆಯೇ, ರಾಜ್ಯಾದ್ಯಂತ ದಲಿತ ವಿರೋಧಿ ಸರಕಾರದ ಬಗ್ಗೆ ಜನಜಾಗೃತಿಯನ್ನು ಮೂಡಿಸಲಾಗುವುದು ಎಂದು ಡಾ ಸಿ ಎಸ್ ರಘು ಎಚ್ಚರಿಕೆ ನೀಡಿದರು.