ಎಸ್ಡಿಪಿಐ ಜೊತೆ ಸೇರಿ ಶೋಷಿತರಿಗಾಗಿ ಹೋರಾಟಕ್ಕೆ ಸಿದ್ಧ: ಬಿ.ಆರ್. ಭಾಸ್ಕರ್ ಪ್ರಸಾದ್
ಬೆಂಗಳೂರು, ಮಾ. 19: ಅಚ್ಚರಿಯ ಬೆಳವಣಿಗೆಯಲ್ಲಿ ದಲಿತ ಹೋರಾಟಗಾರ ಹಾಗೂ ಪ್ರಗತಿಪರ ಚಿಂತಕ ಬಿ.ಆರ್. ಭಾಸ್ಕರ್ ಪ್ರಸಾದ್ ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಸೇರಿದ್ದಾರೆ. ಬೆಂಗಳೂರು ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ 'ಸ್ವಾಭಿಮಾನದ ರಾಜಕೀಯಕ್ಕಾಗಿ' ರಾಜಕೀಯ ಸಮಾವೇಶದಲ್ಲಿ ಅವರು ಎಸ್ಡಿಪಿಐ ಸೇರಿದ್ದಾರೆ. ಬೆಂಗಳೂರಿನ ಕೆ.ಜಿ. ಹಳ್ಳಿಯ ಎಸ್.ಆರ್. ಫಂಕ್ಷನ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.
ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಎಸ್ಡಿಪಿಐ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಷಾಷ ಅವರು, ಅವಕಾಶ ವಂಚಿತ ಸಮುದಾಯಗಳ ಸ್ವಾಭಿಮಾನದ ರಾಜಕೀಯ ಪ್ರಗತಿಗಾಗಿ ಎಸ್ಡಿಪಿಐ ಪಾರ್ಟಿ ಹೋರಾಡುತ್ತಿದೆ. ಈ ಹೋರಾಟದಲ್ಲಿ ಭಾಗಿಯಾಗಲು ಪಕ್ಷಕ್ಕೆ ಸೇರ್ಪಡೆಗೊಂಡಿರುವ ಬಿ.ಆರ್. ಭಾಸ್ಕರ್ ಪ್ರಸಾದ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಿ.ಆರ್. ಭಾಸ್ಕರ್ ಪ್ರಸಾದ್ ಅವರು ಪಕ್ಷಕ್ಕೆ ಸೇರಿರುವುದು ಭವಿಷ್ಯದ ಕರ್ನಾಟಕದ ರಾಜಕೀಯ ದಿಕ್ಕನ್ನು ಬದಲಾಯಿಸುವ ಶಕ್ತಿ ಹೊಂದಿದೆ ಎಂದರು.
ಜನಪರ ಹೋರಾಟಗಾರರಿಗೆ ಸದೃಢ ರಾಜಕೀಯ ವೇದಿಕೆ
ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಮಾತನಾಡಿ, ಎಸ್.ಡಿ.ಪಿಐ ಪಕ್ಷವು ಗ್ರಾಮಮಟ್ಟ, ಹೋಬಳಿ ಮಟ್ಟದ, ತಾಲೂಕು ಮಟ್ಟದ ಸಕ್ರಿಯ ರಾಜಕಾರಣದಲ್ಲಿ ತನ್ನ ಬೇರುಗಳನ್ನು ಗಟ್ಟಿಗೊಳಿಸುತ್ತಿದೆ. ಈ ಮೂಲಕ ತಳಮಟ್ಟದಲ್ಲಿ ಜನಪರ ಹೋರಾಟಗಾರರಿಗೆ ಪ್ರಾಮಾಣಿಕವಾದ ಸದೃಢ ರಾಜಕೀಯ ವೇದಿಕೆಯನ್ನು ಒದಗಿಸುತ್ತಿದೆ. ಇದೇ ರೀತಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ರಾಜಕೀಯದಲ್ಲಿಯೂ ಕೂಡ ಶೋಷಿತರ ಪ್ರಬಲಧ್ವನಿಯಾಗಿ ಹೊಮ್ಮುವ ದಿನ ದೂರವಿಲ್ಲ.
ಹೀಗಾಗಿ ಭಾಸ್ಕರ್ ಪ್ರಸಾದ್ ಹಾಗೂ ಇತರೆ ಅಹಿಂದ ವರ್ಗಗಳ ನಾಯಕರುಗಳು ಪಕ್ಷವನ್ನು ತಮ್ಮ ಹೋರಾಟದ ಪಥವನ್ನಾದಗಿಸಿಕೊಂಡಂತೆ ರಾಜ್ಯದ ಪ್ರಾಮಾಣಿಕ ಯುವ ಮುಖಂಡರು ಕೂಡ ಈ ಆದರ್ಶ ನಡೆಯನ್ನು ಅನುಸರಿಸಬೇಕೆಂದು ಮನವಿ ಮಾಡಿಕೊಂಡರು.
ಸಂವಿಧಾನವು ನಮ್ಮ ದೇಶದ ಎಂಜಿನ್
ವುಮೆನ್ ಇಂಡಿಯಾ ಮೂವ್ಮೆಂಟ್ನ ರಾಜ್ಯ ನಾಯಕಿ ಸಾದಿಯಾ ಗುಲ್ಬರ್ಗಾ ಮಾತನಾಡಿ, ಭಾರತ ದೇಶದ ಸೌಂದರ್ಯವೇ ವಿವಿಧತೆಯಲ್ಲಿ ಏಕತೆಯನ್ನು ಸಾರುವುದು. ಸಂವಿಧಾನವು ಈ ದೇಶದ ಎಂಜಿನ್ ಆಗಿದೆ. ಅದನ್ನು ಉಳಿಸುವುದಕ್ಕಾಗಿ ನಾವು ಇಲ್ಲಿ ಸೇರಿದ್ದೇವೆ. ಮಹಿಳೆಯರೂ ರಾಜಕೀಯ ಶಕ್ತಿಯಾಗುವ ಸಮಯ ಬಂದಿದೆ. ತಮ್ಮ ಹಕ್ಕುಗಳಿಗಾಗಿ ಹೋರಾಡಲು ಮುಂದಾಗಬೇಕಾಗಿದೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಅವರು ಮಾತನಾಡಿ, ಎಸ್.ಡಿ.ಪಿ.ಐ ಪಕ್ಷ ಯಾವುದೇ ಸಮುದಾಯಕ್ಕೋ, ಜಾತಿಗೋ ಸೇರಿದ್ದಲ್ಲ. ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿರುವ ಪ್ರತಿಯೊಬ್ಬ ನಾಗರಿಕರಿಗೂ ಸೇರಿದ್ದು. ರಾಜಕೀಯ ಗುಲಾಮಗಿರಿಯಿಂದ ಹೊರಬರಲು ಕರೆ ನೀಡಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತನ್ನು ಪೂರ್ತಿಗೊಳಿಸುವತ್ತ ಎಸ್.ಡಿ.ಪಿ.ಐ ಹೆಜ್ಜೆಯಿಟ್ಟಿದೆ ಎಂದರು.
ಪಕ್ಷ ಸೇರುವ ಪ್ರತಿಯೊಬ್ಬರು ನಮ್ಮ ಮನೆಯವರು
ಹಣ, ಹೆಂಡಗಳಿಗಾಗಿ ಓಟುಗಳನ್ನು ಮಾರುವಂತಹ ಮತ್ತು ಕೊಂಡುವಳ್ಳುವ ಇಂತಹ ಸಮಯದಲ್ಲಿ ಅದರಿಂದ ಜನರನ್ನು ಹೊರತರಲು ಎಸ್.ಡಿ.ಪಿ.ಐ ಜನರಿಗೆ ಅಧಿಕಾರವನ್ನು ನೀಡಲು ಪಕ್ಷವನ್ನು ಸ್ಥಾಪಿಸಿದೆ. ಉತ್ತಮ ಜನರ ಸೇವಕರನ್ನು ಪಕ್ಷ ನೀಡುತ್ತಿದ್ದು, ಇದರಲ್ಲಿ ದಲಿತರು, ಮುಸಲ್ಮಾನರು ಸೇರಿ ಎಲ್ಲಾ ಸಮುದಾಯದವರಿದ್ದಾರೆ. ಭಾಸ್ಕರ್ ಪ್ರಸಾದ್ ಅವರನ್ನು ಅತ್ಯಂತ ಗೌರವಯುತವಾಗಿ ಪಕ್ಷಕ್ಕೆ ಸ್ವಾಗತಿಸುತ್ತಿದ್ದೇವೆ. ಪಕ್ಷಕ್ಕೆ ಬರುವ ಪ್ರತಿಯೊಬ್ಬರನ್ನು ನಮ್ಮ ಮನೆಯವರು ಎಂಬ ದೃಷ್ಟಿಯಿಂದ ನೋಡುತ್ತೇವೆ ಎಂದರು.
ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯಗಳಲ್ಲಿ ಎಸ್ಡಿಪಿಐ ಸ್ಪರ್ಧೆ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮೈಸೂರು ಅವರು ಮಾತನಾಡಿ, ತಮಿಳುನಾಡಿನಲ್ಲಿ ವಿಧಾನಸಬಾ ಚುನಾವಣೆ ನಡೆಯುತ್ತಿದೆ. ಅಲ್ಲಿಯ 4 ಪ್ರಮುಖ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟವು ಎಸ್ಡಿಪಿಐ ಅನ್ನು ನೇರವಾಗಿ ಸಂಪರ್ಕಿಸಿ ತಮ್ಮ ಮೈತ್ರಿಕೂಟದಲ್ಲಿ ಕೈಜೋಡಿಸಲು ಅಹ್ವಾನಿಸಿದವು. ಮುಂದೆ ಭಾರತದ ಎಲ್ಲಾ ರಾಜ್ಯಗಳಲ್ಲೂ ಸಹ ಇಂತಹ ಅಹ್ವಾನಗಳು ಸಾಲು ಸಾಲಾಗಿ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Recommended Video
ಕೊರೊನಾ ಸಂದರ್ಭದಲ್ಲಿ ಎಸ್ಡಿಪಿಐ ಸೇವೆ ಶ್ಲಾಘನೀಯ
ಇನ್ನು ಎಸ್ಡಿಪಿಐ ಸೇರಿದ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಬಿ.ಆರ್ ಭಾಸ್ಕರ್ ಪ್ರಸಾದ್ ಅವರು ಮಾತನಾಡಿ, ಕೊರೊನ ಸಂತ್ರಸ್ತರಿಗೆ ನೆರವು ಮತ್ತು ಶವ ಸಂಸ್ಕಾರ, ಸೇವೆ ಸಲ್ಲಿಸಿದ ಎಸ್.ಡಿ.ಪಿ.ಐ ಕಾರ್ಯಕರ್ತರ ನಿಸ್ವಾರ್ಥ ಸೇವಾ ಮನೋಭಾವ ಮತ್ತು ಹೋರಾಟ ಮಾದರಿಯಾಗಿದೆ. ಇದೇ ಕಾರ್ಯಕರ್ತರೊಂದಿಗೆ ಸೇರಿ ಪಕ್ಷ ಕಟ್ಟಲು ನಾನು ರಾತ್ರಿ ಹಗಲು ತಯಾರಾಗಿದ್ದೇನೆ ಎಂದು ತಮ್ಮ ಮುಂದಿನ ಯೋಜನೆಯನ್ನು ತಿಳಿಸಿದರು.