ನೀರು, ವಿದ್ಯುತ್, ರಸ್ತೆಯೇ ಈಗಲೂ ಜನರಿಗೆ ಚುನಾವಣಾ ವಿಷಯ
ಬೆಂಗಳೂರು, ಮಾರ್ಚ್ 5: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನೀರು, ವಿದ್ಯುತ್, ರಸ್ತೆ ಮತ್ತು ಶಿಕ್ಷಣ ಈ ನಾಲ್ಕು ಸಂಗತಿಗಳೇ ಮತದಾರರಿಗೆ ಪ್ರಮುಖವಾಗಿ ಪರಿಣಮಿಸಲಿದೆ. ಸಾಮಾಜಿಕ ಅಧ್ಯಯನ ಸಂಸ್ಥೆ'ದಕ್ಷ' ಈ ಕುರಿತು ಸಮೀಕ್ಷೆ ನಡೆಸಿದೆ.
ನಗರ ಮತ್ತು ಗ್ರಾಮೀಣ ಪ್ರದೇಶದ ಬಡ ಮತದಾರರಿಗೆ ನೀರು ಮತ್ತು ಶಿಕ್ಷಣ ಅತಿ ಮಹತ್ವದ ಸಂಗತಿಗಳಾದರೆ ಸತತ ಬರಗಾಲ ಎರಡೂ ಪ್ರದೇಶದ ಜನರ ಚಿಂತೆಗೆ ಕಾರಣವಾಗಿದೆ.
ನಗರ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ, ಮಹಿಳಾ ಸುರಕ್ಷತೆ, ಸಾರ್ವಜನಿಕ ಸಾರಿಗೆ, ಕುಡಿಯುವ ನೀರು, ಕೆರೆ ಪುನಶ್ಚೇತನ, ಮೂಲಸೌಕರ್ಯ ಮುಖ್ಯಬೇಡಿಕೆಗಳಾದರೆ, ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಉತ್ಪನ್ನಗಳ ದರ, ಕೃಷಿಗಾಗಿ ನೆರವು, ನೀರಾವರಿ ಸೌಲಭ್ಯತ, ಗ್ರಾಮೀಣ ರಸ್ತೆಯಂತಹ ಕಾರ್ಯಕರಮಗಳಿಗೆ ಬೇಡಿಕೆ ಇದೆ.
ರಾಜ್ಯದ 224 ಕ್ಷೇತ್ರಗಳಲ್ಲಿ ತಲಾ 50 ಜನರಂತೆ ಒಟ್ಟು 13,300 ಜನರಿಂದ ಸ್ಯಾಂಪಲ್ ಸಂಗ್ರಹಿಸಿ ಸಮೀಕ್ಷೆ ನಡೆಸಲಾಗಿದೆ.
ಕಾಂಗ್ರೆಸ್ ಮತ್ತು ಬಿಜೆಪಿಯು ಕೇವಲ ಭ್ರಷ್ಟಾಚಾರದ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಒಂದೊಂದು ವಿಷಯವನ್ನಿಟ್ಟುಕೊಂಡು ಆರೋಪ ಪ್ರತ್ಯಾರೋಪ ಮಾಡುತ್ತಾ ಕಾಲಕಳೆಯುತ್ತಿದ್ದಾರೆ.
ಆದರೆ ನಿಜವಾಗಿಯೂ ಮತದಾರರಿಗೆ ಬೇಕಾಗಿರುವು ಏನು ಎನ್ನುವುದರ ಕುರಿತು ಯಾರೂ ಯೋಚನೆ ಮಾಡಿಲ್ಲ. ಸಮೀಕ್ಷೆಯು ಒಂದೊಂದು ಕ್ಷೇತ್ರದ ಮತದಾರರ ಬೇಡಿಕೆಗಳು, ಸಮಸ್ಯೆಗಳನ್ನು ಎತ್ತಿ ಹಿಡಿದು ಆಯಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವತ್ತ ಆಲೋಚಿಸುತ್ತಿದೆ ಎಂದು ದಕ್ಷದ ಅಧಿಕಾರಿ ತಿಳಿಸಿದ್ದಾರೆ.
ಹತ್ತರಲ್ಲಿ ಎಂಟು ಮಂದಿ ನೀರಿನ ಸರಬರಾಜು ತೊಂದರೆ ಇದೆ ಎಂದು ಹೇಳಿದ್ದಾರೆ. ವಿದ್ಯುತ್ ಮತ್ತು ಶಾಲೆಯ ಸಮಸ್ಯೆ ಎಂದು ಇನ್ನು ಕೆಲವರು ಹೇಳಿದ್ದಾರೆ. ಒಟ್ಟು ರಾಜ್ಯಾದ್ಯಂತ ಒಳಚರಂಡಿ, ಆಹಾರ ಸರಬರಾಜು ಸಬ್ಸಿಡಿ, ಕೆಲಸ ಈ ಮೂರು ವಿಷಯಗಳ ಕುರಿತು ಗಂಭೀರ ಆರೋಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.