ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಸಂಘದ ಬೇಡಿಕೆ ಈಡೇರಿಸುವಂತೆ ಸಿಎಂಗೆ ಒತ್ತಾಯ
ಬೆಂಗಳೂರು, ಅಕ್ಟೋಬರ್ 23: ಕರ್ನಾಟಕ ರಾಜ್ಯ ಸರ್ಕಾರಿ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರರ ಬೇಡಿಕೆಯನ್ನು ಆದಷ್ಟು ಶೀಘ್ರವಾಗಿ ಈಡೇರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸಂಘದ ಪರವಾಗಿ ಒತ್ತಾಯ ಮಾಡಲಾಯಿತು.
ಕರ್ನಾಟಕ ರಾಜ್ಯ ಸರ್ಕಾರಿ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರರ ಸಂಘ ಹಾವೇರಿ ವತಿಯಿಂದ ದಿನಾಂಕ 23/10/2021 ರಂದು ಸಂಘದ ರಾಜ್ಯ ಮಟ್ಟದ ಸಭೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಸಭೆ ನಡೆಸಲಾಯಿತು. ಇದಕ್ಕೂ ಮುಂಚೆ ದಿನಾಂಕ 22/09/2021 ರಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ದಿನಗೂಲಿ ಸಂಘದ ಪ್ರಮುಖ ಬೇಡಿಕೆಗಳನ್ನು ತಿಳಿಸಲಾಗಿತ್ತು.
ಪ್ರಮುಖ ಬೇಡಿಕೆಗಳಾದ ನಿವೃತ್ತಿ ವೇತನ, ವೈದ್ಯಕೀಯ ಸೌಲಭ್ಯ ಹಾಗೂ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಇದಕ್ಕೆ ಮುಖ್ಯಮಂತ್ರಿಗಳು ಸಹಿ ಮಾಡಿ ಅದನ್ನು ಹಣಕಾಸು ಇಲಾಖೆಗೆ ಕಳುಹಿಸಿದ್ದಾರೆ. ಆದಷ್ಟು ಶೀಘ್ರವಾಗಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಂಘದ ಸಭೆಯಲ್ಲಿ ಒತ್ತಾಯಿಸಲಾಗಿದೆ.
ಇಂದಿನ ಸಭೆಯಲ್ಲಿ ಹಾಜರಿದ್ದ ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ. ಕೆ. ಕೋಳಿ, ಕಾರ್ಯಾಧ್ಯಕ್ಷ ಶೇಖ್ ಅಲಿ ಮತ್ತು ಪ್ರಧಾನ ಕಾರ್ಯದರ್ಶಿ ಶಿವಬಸಪ್ಪ ಸವದತ್ತಿ ಹಾಗೂ ಎಲ್ಲಾ ಜಿಲ್ಲೆಯ ಜಿಲ್ಲಾಧ್ಯಕ್ಷರು ಮತ್ತು ತಾಲೂಕು ಅಧ್ಯಕ್ಷರು ಮತ್ತು ರಾಜ್ಯದ ಎಲ್ಲಾ ಕ್ಷೇಮಾಭಿವೃದ್ಧಿ ನೌಕರರು ಸರ್ವಾನುಮತದಿಂದ ಮುಖ್ಯಮಂತ್ರಿಗಳಿಗೆ ಸಂಘದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಪೂರ್ವಕ ಮನವಿ ಮಾಡಿದರು.
ಪತ್ರದಲ್ಲೇನಿದೆ?
2012ರಲ್ಲಿ ಘನ ರಾಜ್ಯ ಸರ್ಕಾರವು ದಿನಗೂಲಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ 'ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮ 2012' ಜಾರಿಗೆ ತಂದಿದ್ದು, ಅದರಂತೆ ಆಯಾ ಹುದ್ದೆಗಳ ವೇತನ ಶ್ರೇಣಿಯ ಕನಿಷ್ಟ ವೇತನ ಹಾಗೂ ಶೇ.90ರಷ್ಟು ಹೆಚ್ಆರ್ಎ ಮತ್ತು ಶೇ.90ರಷ್ಟು ಡಿ.ಎಯನ್ನು ಮಾತ್ರ ನೀಡಲಾಗುತ್ತಿದೆ.
ಆದರೆ ಅಧಿಸೂಚನೆ ಸಂಖ್ಯೆ ಸಿ ಆ ಸು ಇ 44 ಸೇ ಸ್ಥ 2013 ದಿನಾಂಕ: 22-2-2014ರನ್ವಯ ಮುಂಬಡ್ತಿ ಹೊರತುಪಡಿಸಿ ಇನ್ನುಳಿದ ಪೂರ್ಣಪ್ರಮಾಣದ ಸವಲತ್ತುಗಳನ್ನು ಇದುವರೆಗೂ ಕಲ್ಪಿಸಿರುವುದಿಲ್ಲ.
ಅಂದು 13 ಸಾವಿರ ಇದ್ದ ನೌಕರರ ಸಂಖ್ಯೆ ನಿವೃತ್ತಿ ಹಾಗೂ ಮರಣದಿಂದಾಗಿ ಈಗ ಸುಮಾರು 6 ರಿಂದ 7 ಸಾವಿರ ಮಾತ್ರ ಉಳಿದಿರುತ್ತಾರೆ. ಅವರುಗಳು ಸಹ 3- 4 ವರ್ಷಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ. ನಿವೃತ್ತಿ ವೇತನ ಇಲ್ಲದೇ ಇರುವುದರಿಂದ ಬಹಳ ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಅಲ್ಲದೇ ಕೆಲವೊಂದು ನೌಕರರು ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮ 2012 ರಲ್ಲಿ ಆಧಿಸೂಚಿಸಲ್ಪಟ್ಟ ನೌಕರರಿಗೆ ಈ ಕೆಳಕಂಡ ಮೂಲಭೂತ ಸವಲತ್ತುಗಳನ್ನು ಕಲ್ಪಿಸುವಂತೆ ಹಾಗೂ ಸಾಕಷ್ಟು ವರ್ಷಗಳಿಂದ ನೆನಗುದಿಗೆ ಬಿದ್ದ ಈ ಬಡ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ತಮ್ಮಲ್ಲಿ ಕಳಕಳಿಯಿಂದ ಸಂಘದ ಪರವಾಗಿ ತಮ್ಮಲ್ಲಿ ವಿನಂತಿಸಲಾಗಿದೆ.
1. ಅಧಿನಿಯಮ ಜಾರಿಗೊಂಡ ದಿನಾಂಕದಿಂದ ಅನ್ವಯವಾಗುವಂತೆ ವಾರ್ಷಿಕ ವೇತನ ಬಡ್ತಿ ನೀಡುವುದು, ಹಾಗೂ ಹೆಚ್ಆರ್ಎ ಹಾಗೂ ತುಟ್ಟಿ ಭತ್ಯೆಯನ್ನು ಶೇ.100 ರಷ್ಟು ನೀಡುವುದು ಹಾಗೂ ಹಬ್ಬದ ಮುಂಗಡ ಸೌಲಭ್ಯವನ್ನು ನೀಡುವುದು.
2. ವೈದ್ಯಕೀಯ ಸೌಲಭ್ಯ, ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ನೀಡುವುದು.
3. ನಿವೃತ್ತಿ ಮರಣ ಹೊಂದಿದ ನೌಕರರ ಕುಟುಂಬಗಳಿಗೆ ನಿವೃತ್ತಿ ವೇತನ ಮಂಜೂರು ಮಾಡುವುದು.
4. ಮರಣ ಹೊಂದಿದ ದಿನಗೂಲಿ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದ ಹುದ್ದೆ ನೀಡುವುದು, ಒಟ್ಟಾರೆ ಸರ್ಕಾರಿ ನೌಕರರಿಗೆ ಒದಗಿಸಲಾದ ಎಲ್ಲ, ಸೌಲಭ್ಯಗಳನ್ನು ವಿಸ್ತರಿಸುವುದು.
Recommended Video