ಒಂಟಿ ಮಹಿಳಾ ಟೆಕ್ಕಿ ಮನೆಗೆ ನುಗ್ಗಿ ಕಳ್ಳತನ
ಮಾನ್ಯತಾ ಟೆಕ್ ಪಾರ್ಕ್ ನ ಸಾಫ್ಟ್ವೇರ್ ಕಂಪೆನಿಯೊಂದರ ಉದ್ಯೋಗಿ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ತೇಜಸ್ವಿನಿ ಭಟ್ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದೆ.
ರಾತ್ರಿ 7.30 ಕೆಲಸ ಮುಗಿಸಿಕೊಂಡು ಕಾರಿನಲ್ಲಿ ಮನೆಗೆ ಬಂದು ಬಾಗಿಲು ತೆರೆದು ಒಳಗೆ ಪ್ರವೇಶಿಸುತ್ತಿದ್ದಂತೆ ಹಿಂದಿನಿಂದ ಬಂದ ಇಬ್ಬರು ದುಷ್ಕರ್ಮಿಗಳು ತೇಜಸ್ವಿನಿ ಅವರ ಕತ್ತಿಗೆ ಚಾಕು ಇಟ್ಟು ಬೆದರಿಕೆ ಹಾಕಿದ್ದಾರೆ. ಈ ವೇಳೆ ದುಷ್ಕರ್ಮಿಗಳ ಕೈಗೆ ಕಚ್ಚಿ ತೇಜಸ್ವಿನಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಕೊಲೆಗೈಯ್ಯುವುದಾಗಿ ಬೆದರಿಸಿದ ಹಿನ್ನೆಲೆಯಲ್ಲಿ ತೇಜಸ್ವಿನಿ ಸುಮ್ಮನಾಗಿದ್ದರು. ಬಳಿಕ ಅವರನ್ನು ಕಟ್ಟಿಹಾಕಿ ಹಣ ಮತ್ತು ಚಿನ್ನಾಭರಣ ಕೊಡುವಂತೆ ಹೇಳಿದ್ದಾರೆ. ಅಕೆ ಅದಕ್ಕೆ ಸಮ್ಮತಿಸಿ ಧರಿಸಿದ್ದ ಆಭರಣ ಮತ್ತು ಎರಡು ಸಾವಿರ ರೂ ನೀಡಿದರು.
ಆದರೆ ಕಳ್ಳರು ಮತ್ತಷ್ಟು ಹಣ ಬೇಕು ಎಂದು ಬೇಡಿಕೆ ಇಟ್ಟು ಎಂಟಿಎಂ ಕಾರ್ಡ್ ಕೇಳಿದ್ದಾರೆ. ಈ ಸಂದರ್ಭದಲ್ಲಿ ಹೊರಗೆ ಹೋದರೆ ನಾವು ಸಿಕ್ಕಿಬೀಳುತ್ತೇವೆ ಎಂದು ಅರಿತ ಕಳ್ಳರಲ್ಲಿ ಒಬ್ಬ ಎಟಿಎಂ ಪಿನ್ ಪಡೆದು ಆಕೆಯ ಕಾರಿನಲ್ಲಿ ಹಣ ತರಲು ಹೊರಗಡೆ ಹೋಗಿದ್ದಾನೆ. ಮನೆಯಲ್ಲಿದ್ದ ಮತ್ತೊಬ್ಬ ಆರೋಪಿ ಆಕೆ ಹೊರ ಹೋಗದಂತೆ ತಡೆದಿದ್ದಾನೆ. 25 ಸಾವಿರ ರೂ. ಡ್ರಾ ಮಾಡಿದ ಬಳಿಕ ದುಷ್ಕರ್ಮಿ ಎಟಿಎಂ ಕಾರ್ಡ್ ಮತ್ತು ಕಾರಿನ ಕೀ ಹಿಂದಿರುಗಿಸಿದ್ದಾನೆ. ಬಳಿಕ ಇಬ್ಬರು ಆರೋಪಿಗಳು ಮನೆಯ ಹೊರಗಡೆಯ ಬಾಗಿಲು ಹಾಕಿ ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳರು ಜಾಗ ಖಾಲಿ ಮಾಡಿದ ಬಳಿಕ ತೇಜಸ್ವಿನಿಯವರು ರಾಜಾನುಕುಂಟೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಸಿಸಿ ಕ್ಯಾಮೆರಾದಲ್ಲಿ ಸೆರೆ: ಶ್ರೀನಿಧಿ ಬಡಾವಣೆಯ ಒಂದು ಕಿ.ಮೀ ದೂರದಲ್ಲಿರುವ ಕಾರ್ಪೋರೇಷನ್ ಎಟಿಎಂನಲ್ಲಿ ಆರೋಪಿ ಹಣವನ್ನು ಪಡೆಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.